Thursday, 5 February 2009
ಪ್ರಿಯೆ,
ನಾಡಿದ್ದು ಫೆಬ್ರವರಿ ೧೪. ಅದು ಪ್ರೇಮಿಗಳಿಗಾಗಿ ಮೀಸಲಾದ ದಿನ ಅಂತ ಹೇಳ್ತಾರೆ. ಆದರೆ ಈ ಪತ್ರವನ್ನು ಆ ದಿನದ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆಂದು ತಿಳಿದುಕೊಳ್ಳಬೇಡ. ಏಕೆಂದರೆ ನಿನಗೇ ಗೊತ್ತು ನನಗೆ ಇಂತಹಾ ದಿನಾಚರಣೆಗಳು ಇಷ್ಟವಿಲ್ಲವೆಂಬುದು. ಪ್ರತಿದಿನವೂ ನಾವು ಪ್ರೀತಿಯನ್ನು ಪೂಜಿಸಿ ಆಚರಿಸುತ್ತಿರುವಾಗ ಇನ್ನು ಪ್ರತ್ಯೇಕ ದಿನ ಬೇಡ ಅಂತ ನೀನು ಕೂಡ ಹೇಳಿದ್ದೆ. ಹಾ...ಅದಿರಲಿ, ನಿನಗೊಂದು ವಿಷಯ ಹೇಳ್ಬೇಕು. ಅದನ್ನು ಈ ಪತ್ರದ ಮೂಲಕವೇ ಹೇಳ್ಬೇಕು ಅಂತ ಈ ಪತ್ರ ಬರೆಯುತ್ತಿದ್ದೇನೆ.
ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತಿದ್ದಾಗ ಥಟ್ಟನೆ ನನ್ನ ಜಿ-ಮೇಲ್ ಚಾಟ್ ಬಾಕ್ಸ್ನಲ್ಲಿ ಪ್ರೀತಿ ಕುರಿತ ಒಂದು ಸಾಲು ಬಂದು ಕೂತಿತು. ಆ ಸಾಲು ಏನೆಂದರೆ; “ಯಾವಾಗ್ಲೂ ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ ಮಾತ್ರ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ”. ‘ಪ್ರೀತಿ’ ಎಂಬ ಎರಡಕ್ಷರದ ಮಾತೇ ನಮ್ಮಿಬ್ಬರ ನಡುವೆ ಕೋಟಿ ಭಾವನೆಗಳನ್ನು ಹುಟ್ಟಿಸಿರುವಾಗ ಕಾಲೇಜಿನಲ್ಲಿ ಒಟ್ಟಿಗೆ ಕಲಿಯುತ್ತಿದ್ದ ಓರ್ವ ಗೆಳತಿ ಕಳುಹಿಸಿದ್ದ ಆ ಸಾಲು ನನ್ನ ಮನವನ್ನು ಆಕರ್ಷಿಸಿತ್ತು.
ಹೌದು ಅದೇ ಶಾಶ್ವತ ಪ್ರೀತಿ. ಅಲ್ಲಿರುವುದು ಸ್ವಾರ್ಥವೆಂದರೆ ಏನೆಂದೇ ಅರಿಯದ, ನಿಷ್ಕಲ್ಮಷ ಭಾವನೆಯ ಸಂಚಾರ. ಅಲ್ಲಿ ಸೃಷ್ಟಿಯಾಗುವುದು ಮನಸ್ಸು ಮನಸ್ಸುಗಳ ನಡುವಿನ ಹಚ್ಚಹಸುರಿನ ನೈಜ ಪ್ರೀತಿ ಅಷ್ಟೆ.
ಹಾಗಾದರೆ ಇಂತಹ ಒಂದು ಅತ್ಯಂತ ಸುಲಲಿತ, ವರ್ಣನೆಗೂ ಮೀರಿದ, ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರೀತಿ ನಮ್ಮ ಕೈಗೆಟಕದಾಗಿರುವುದು ಏಕೆ? ಆ ಎರಡಕ್ಷರದ ಪ್ರೀತಿ ಬಹುದೂರದಲ್ಲಿ ನಿಂತು ಜನರೊಂದಿಗೆ ಆಟವಾಡುತ್ತಿರುವಾದದರೂ ಏಕೆ? ಬಿಸಿಲ್ಗುದುರೆಯಂತೆ ಕಾಡುತ್ತಿರುವುದು ಏಕೆ? ಮರೀಚಿಕೆಯಾಗಿ ಮನಸ್ಸಿಗೆ ನೋವುಣಿಸುತ್ತಿರುವುದು ಏಕೆ? ಇತಿಹಾಸವನ್ನೆಲ್ಲಾ ಮರೆತು ಸಂತಸದ ಭವಿಷ್ಯಕ್ಕೆ ನಾಂದಿ ಹಾಡುವ ಪ್ರೀತಿಯ ಹಿಂದೆ ಸಾವಿರಾರು ಮೈಲಿಗಟ್ಟಲೆ ಅಹರ್ನಿಶಿ ಓಡಿ ಬಂದಿದ್ದರೂ ನಮ್ಮ ಕೈಗೆ ಏಕೆ ಸಿಕ್ಕಿಲ್ಲ?
ಕಾಲ ಇಷ್ಟು ಬದಲಾಗಿದ್ದರೂ, ಜಗತ್ತಿನಲ್ಲಿ ಹಿಂದೆಂದೂ ಕಂಡರಿಯದಷ್ಟು ಪರಿವರ್ತನೆಯಾಗಿದ್ದರೂ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಾವು ಅರಿಯುವಷ್ಟು ದೊಡ್ಡವರಾಗಿದ್ದರೂ, ಕೆಲವು ಕಟ್ಟುಪಾಡುಗಳಿಂದ ಹೊರಬರದಿರುವುದು ಅಥವಾ ಯಾರೋ ನಮ್ಮ ಪೂರ್ವಜರು ಹಾಕಿದ ಗೆರೆಯನ್ನು ದಾಟಿ ಮುನ್ನುಗ್ಗದಿರುವುದು ಇಂತಹುದಕ್ಕೆ ಕಾರಣವಾಗಿರಬಹುದೇ?
ವಿಶ್ವದೆಲ್ಲೆಡೆ ಹೊತ್ತಿ ಉರಿಯುತ್ತಿರುವ ಎಲ್ಲಾ ಘರ್ಷಣೆ, ಅನಾಹುತ, ವೈರತ್ವ ಅಥವಾ ಇನ್ಯಾವುದೇ ಪರಿಯ ವಿಪರೀತಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಪ್ರೀತಿಯಿಂದ ಖಂಡಿತಾ ಸಾಧ್ಯವಿದೆ. ಅದನ್ನು ಸಾಧಿಸಲು ಇಂದು ಸಾವಿರಾರು ಮನಸ್ಸುಗಳು ತುಡಿಯುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹುಳಿ ಹಿಂಡುವ ಕಾರ್ಯ, ಇನ್ನಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.
ಮೊನ್ನೆ ಮುಂಬೈನಲ್ಲಿ ಭಯೋತ್ಪಾದಕರು ರುದ್ರನರ್ತನಗೈದು ನೂರಾರು ಜನರನ್ನು ಬಲಿತೆಗೆದುಕೊಂಡಿದ್ದಾಗ ಮನಸ್ಸು ಕರಗಿ ಹೋಗಿತ್ತು. ಜೀವ ತೆತ್ತ ಅಮಾಯಕರ ಮೇಲೆ ಅಗಾಧ ಕನಿಕರ, ಪ್ರೀತಿ ಮೂಡಿತ್ತು. ಅದೇ ಹೊತ್ತಿಗೆ ಹಿಂದೂ-ಮುಸ್ಲಿಂ ನಡುವೆ ಅಂತರ ಮಾತ್ರ ಹೆಚ್ಚುತ್ತಲೇ ಹೋಗಿತ್ತು. ಇನ್ನು ಕಂಧಮಾಲ್, ಮಂಗಳೂರಿನಲ್ಲಿ ಮತಾಂತರ ವಿಷಯವಾಗಿ ಹಿಂದೂ-ಕ್ರಿಶ್ಚಿಯನ್ ಸಮುದಾಯದ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯಿತು. ಹಲವಾರು ಮಂದಿ ಈ ಅಗ್ನಿಯಲ್ಲಿ ಹೊತ್ತಿ ಉರಿದರು. ಈ ಎರಡು ಸಮುದಾಯದ ನಡುವೆ ಬಹಳ ಆಳಕ್ಕೆ ಇಳಿದಿದ್ದ ದ್ವೇಷ ಇಂದು ಇನ್ನಷ್ಟು ಆಳಕ್ಕೆ ಇಳಿದಿದೆ. ಹಲವು ಮಂದಿ ಮೂಲಭೂತವಾದಿ ಸಂಘಟನೆಗಳನ್ನು ಹಿಗ್ಗಾ-ಮುಗ್ಗ ಜರೆಯುತ್ತಾ ಹೋದರೇ ವಿನಾ ಯಾರೂ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಲಿಲ್ಲ. ಅದೇನೆಂದರೆ ಜನಸಾಮಾನ್ಯರು ಕೂಡ ಏಕೆ ಇಂತಹ ದ್ವೇಷಾಗ್ನಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ ಎಂಬುದು? ಈಗ ಪ್ರೀತಿ, ಸಹಬಾಳ್ವೆ ಎಂಬುದು ಇಲ್ಲಿ ಗಗನಕುಸುಮವಾಗಿದ್ದು, ಕೋಮುದ್ವೇಷದ ಕೆಂಪು ಜ್ವಾಲೆ ವಿಸ್ತಾರವಾಗಿ ಹರಡಿದೆ.
ಇನ್ನು ಗಡಿ ವಿಷಯಗಳತ್ತ ಮುಖ ಮಾಡಿದರೆ ಅಲ್ಲೂ ಪ್ರೀತಿ, ಪ್ರೇಮ ಎಂಬುದು ಮಾಯವಾಗಿದೆ ಅನ್ನಿಸುವುದಕ್ಕಿಂತ, ಪ್ರೀತಿ, ಪ್ರೇಮವನ್ನು ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದನಿಸುತ್ತದೆ. ಅಲ್ಲೂ ಸಂಘಟನೆಗಳದ್ದೇ ಪಾರಮ್ಯ. ಏನೂ ಅರಿಯದ ಮುಗ್ಧ ಮಂದಿಯ ತಲೆಯಲ್ಲಿ ದ್ವೇಷದ ಬೀಜ ಬಿತ್ತುವ ಕರಾಳ ಜಾಲ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಂಬಿಕೆಗೆ ಅನರ್ಹವಾದ ಮಾತೇನಲ್ಲ.
ನಾನು ನಿನಗೆ ಹೇಳ ಹೊರಟಿರುವುದೇನೆಂದರೆ, ಮತ-ಧರ್ಮ-ಬಣ್ಣದ ಹೆಸರಲ್ಲಿ ಮನುಷ್ಯ ಮನುಷ್ಯರ ನಡುವೆ ದ್ವೇಷದ ಬೆಂಕಿ ರೌದ್ರಾವತಾರ ತಾಳಿ, ದೇಶದೆಲ್ಲೆಡೆ ಹಬ್ಬಿ ಹೊಗೆಯಾಡುತ್ತಿರುವಾಗ ಪರಸ್ಪರ ನಂಬುಗೆಯ, ಸಹಬಾಳ್ವೆಯ ಪ್ರೀತಿ ನಮ್ಮ ಜನರಲ್ಲಿ ಮಾಯವಾಗಿ ಹೋಗಿದೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಮ್ಮಿಬ್ಬರ ಪ್ರೀತಿ ಮುನ್ನುಗ್ಗುತ್ತಿದೆ. ಇದುವರೆಗೆ ನಮ್ಮ ಪ್ರೀತಿಗೆ ಜಾತಿ-ಧರ್ಮವೆಂಬ ಕೊಳ್ಳಿ ದೆವ್ವದ ಕೆಂಗಣ್ಣು ಬಿದ್ದಿರಲಿಲ್ಲ. ಆದರೆ ಈಗಾಗುತ್ತಿರುವ ಬೆಳವಣಿಗೆ ನಮ್ಮನ್ನು ಎಚ್ಚರಿಸಿದೆ. ನಮ್ಮಿಬ್ಬರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ, ಬಾಹ್ಯ ಕರಾಳ ಶಕ್ತಿಗಳು ನಮಗೇನಾದರೂ ಮಾಡಬಹುದು. ಆದರೆ ಅದಕ್ಕೆ ಬಗ್ಗಬೇಕಾಗೇನೂ ಇಲ್ಲ. ಹಾಗಾಗಿ ನೀನು ಹೆದರುವ ಅಗತ್ಯವಿಲ್ಲ. ಕೆಲವು ತಿಂಗಳಲ್ಲಿ ನಾನೂ ನೀನಿದ್ದಲ್ಲಿಗೆ ಬರುತ್ತೇನೆ. ಅಷ್ಟು ದಿನ ಧೈರ್ಯದಿಂದಿರು... ಏಕೆಂದರೆ ನಮ್ಮದು ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ...
ಇಂತಿ ನಿನ್ನವ
ರಾಘು
Wednesday, 21 January 2009
ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ ತಂದೆ ಫೋನ್ ಮಾಡಿದರು. ಸರಿ, ಹಾಗೆ ಮಾತನಾಡುತ್ತಿದ್ದೆ. ಅವರು ಫೋನ್ನಲ್ಲಿ ಮಾತನಾಡುತ್ತಿದ್ದಾಗ ಯಕ್ಷಗಾನದ ಚೆಂಡೆಯ ಇಂಪು ತಂದೆಯವರ ಮಾತಿನ ಕಂಪಿನೊಂದಿಗೆ ನವಿರಾಗಿ ಕೇಳುತ್ತಿತ್ತು. ನಿಜಹೇಳಬೇಕೆಂದರೆ ಯಕ್ಷಗಾನಕ್ಕಿಂತ ಚೆಂಡೆ ಬಡಿಯುವುದನ್ನು ಕೇಳುವುದರಲ್ಲೇ ನಾನು ಹೆಚ್ಚು ಆನಂದವನ್ನು ಕಾಣುತ್ತೇನೆ. ಅದೇನೋ ಗೊತ್ತಿಲ್ಲ. ಚಿಕ್ಕಂದಿನಲ್ಲಿ ಅಪ್ಪ-ಅಮ್ಮನ ಒತ್ತಾಯಕ್ಕೆ ರಾತ್ರಿಯಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಚೆಂಡೆ ಶಬ್ದವನ್ನು ಆಲಿಸುತ್ತಿದ್ದೆಯೇ ವಿನಾ ರಂಗದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಆ ಪೌರಾಣಿಕ ಪ್ರಸಂಗಗಳು ಅರ್ಥವಾಗುತ್ತಲೂ ಇರಲಿಲ್ಲ. ಅದು ಬೇರೆ ಪ್ರಶ್ನೆ ಬಿಡಿ.

ತಂದೆ ಕಾರ್ಯನಿಮಿತ್ತ ಯಕ್ಷಗಾನ ನಡೆಯುತ್ತ್ತಿದ್ದ ಸ್ಥಳದ ಬಳಿ ಬಂದಿದ್ದರೂ ಅವರು ಯಕ್ಷಗಾನ ನೋಡಲು ತೆರಳಿರಲಿಲ್ಲ. ಆದರೆ ಆ ಭಾಗವತಿಗೆ ಹಾಗೂ ಚೆಂಡೆಯ ಶಬ್ದ ಮಾತ್ರ ಇಡೀ ಊರಿಗೆ ಕೇಳುತ್ತಿತ್ತು. ತಂದೆಯ ಫೋನ್ನ ಮೂಲಕ ಆ ಆನಂದವನ್ನು ನಾನು ಪಡೆಯುವಂತವನಾಗಿದ್ದೆ. ಆ ಹಳ್ಳಿಯಲ್ಲಿದ್ದ ಯಕ್ಷಗಾನ ಅಭಿಮಾನಿಗಳ ಆಸೆ ಪೂರೈಸುತ್ತಿದ್ದ ಯಕ್ಷಗಾನ ತಂಡಕ್ಕೆ ಅಲ್ಲಿನ ನಾಗರಿಕರು ಅಭಿನಂದನೆ ಸಲ್ಲಿಸಿದ್ದರೂ ನಾನು ಕೂಡ ಇಲ್ಲಿ ಬರೆಯುವ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಕನಿಷ್ಠ ಕೆಲವು ನಿಮಿಷಗಳ ಮಟ್ಟಿಗಾದರೂ ಈ ಗಿಜಿಗುಡುವ ಯಾಂತ್ರಿಕ ಜೀವನದ ನಡುವೆ ಒಂದಿಷ್ಟು ಹೊತ್ತು ನನ್ನ ಮನಸ್ಸನ್ನು ಶಾಂತಗೊಳಿಸಿದ್ದಕ್ಕೆ. ಮುಖ್ಯವಾಗಿ ನಾನು ನನ್ನ ತಂದೆಗೆ ಥ್ಯಾಂಕ್ಸ್ ಹೇಳಬೇಕು. ಫೋನ್ ಮಾಡಿ ಆ ಯಕ್ಷಗಾನದ ವೈಭವವನ್ನು ನನ್ನ ಕಿವಿ ಹಾಗೂ ಕಣ್ಣ ಮುಂದಿರಿಸಿದ್ದಕ್ಕೆ.
ಅದೆಷ್ಟು ದಿನವಾಯಿತು ನೋಡಿ... ಯಕ್ಷಗಾದ ಸವಿಯುಣದೆ ವರ್ಷಗಳೇ ಕಳೆದಿವೆ. ಶಾಲೆಗೆ, ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಯಾವತ್ತೂ ಯಕ್ಷಗಾನ ನೋಡಬೇಕೆಂದು ಈ ಪರಿಯ ಆಸಕ್ತಿ ನನ್ನ ಮನದಲ್ಲಿ ಮೂಡಿರಲಿಲ್ಲ. ನಮ್ಮ ಸಾಂಪ್ರದಾಯಿಕ ಕಲೆಗಳ ಬಗ್ಗೆ ನಿರ್ಲಕ್ಷವಹಿಸುವ ಯುವಜನಾಂಗದವರಲ್ಲಿ ಅಂದು ನಾನೂ ಒಬ್ಬನಾಗಿದ್ದೆ. ಹಾಗಿದ್ದರೂ ಚಂಡೆ ಶಬ್ದ ಕೇಳಬೇಕೆಂದು ಯಾವತ್ತೂ ಅನಿಸುತ್ತಿತ್ತು.
ಈಗೀಗ ಯಕ್ಷಗಾನವನ್ನು, ಆ ಚಂಡೆಯ ನಿನಾದವನ್ನು ಸದಾ ಕೇಳಬೇಕೆಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿದೆ. ಎರಡು ವರ್ಷವಾಯಿತು. ಒಂದು ಪ್ರಸಂಗವನ್ನೂ ಸರಿಯಾಗಿ ನೋಡಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಕನ್ನಡ ಯಕ್ಷಗಾನ ಏರ್ಪಡಿಸಿದ್ದರು. ಆದರೆ ಅದು ಯಾಕೋ ನನ್ನ ಮನಸ್ಸಿಗೆ ಅಷ್ಟರಮಟ್ಟಿಗೆ ತೃಪ್ತಿ ನೀಡಿರಲಿಲ್ಲ.
ಅದಿರಲಿ. ತಂದೆಯ ಬಳಿ ಮಾತನಾಡಿದ ಬಳಿಕ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಈಗಲೂ ನನಗೆ ಉತ್ತರ ಕಂಡುಕೊಳ್ಳಲಾಗುತ್ತಿಲ್ಲ. ಅದೇಕೆ ಯಕ್ಷಗಾನದ ಮೇಲೆ ಈ ಪರಿಯ ಆಸಕ್ತಿ ಮೂಡಿದೆ? ಯಕ್ಷಗಾನವನ್ನು ಒಮ್ಮೆ ನೋಡಿ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆಂದು ಯಾಕೆ ಮನಸ್ಸು ಹಾತೊರೆಯುತ್ತಿದೆ? ಈ ಒಲವಿನ ಭಾವನೆ ಅದೇಕೆ ಅಂದು ಬಂದಿರಲಿಲ್ಲ? ಬಹುಶಃ ಪೇಟೆಯ ಬದುಕು ನನ್ನ ಮನವನ್ನು ಆ ರೀತಿ ಪರಿವರ್ತಿಸಿರಬಹುದೇ?
ಥಳಥಳಿಸುವ ಮಾಲ್ಗಳು, ಸಾಂಪ್ರದಾಯಿಕ ಬದುಕು ಏನೆಂಬುದನ್ನೇ ಮರೆತಿರುವ ಮೂಢರು, ಕೇವಲ ಸ್ವಹಿತಾಸಕ್ತಿಗಾಗಿ ಬೇರೆಯವರ ಬೆನ್ನು ಬಗ್ಗಿಸುವ ಕಾರ್ಪೊರೇಟ್ಗಳು, ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕೆಂದು ತನ್ನತನವನ್ನೇ ಮರೆಯುವ ‘ಪ್ರಜ್ಞಾವಂತರು’, ಹವಾನಿಯಂತ್ರಿತ ಗಾಜಿನ ಕೊಠಡಿಯಲ್ಲಿ ಕುಳಿತು ಭಾರತ ಹಳ್ಳಿಗಳು ಅಭಿವೃದ್ಧಿಯಾಗುತ್ತಿವೆ ಎನ್ನುವ ಮಹಾನ್ ಚಿಂತಕರು... ಇವರೆಲ್ಲರ ನಡುವೆ ಬದುಕು ಸಾಗಿಸುತ್ತಿರುವ ನಮ್ಮಂಥವರು...
ಬಹುಶಃ ಇಂತಹ ವಿಚಿತ್ರಗಳ ನಡುವೆ ದಿನದೂಡುವಾಗ ಮನಸ್ಸು ರಿಫ್ರೆಶ್ ಆಗಬೇಕೆಂಬ ಬಯಕೆಯಿಂದ ಯಕ್ಷಗಾನ ನೋಡಲೇಬೇಕೆಂದು ಹಂಬಲ ಮನದಲ್ಲಿ ಆವರಸಿತೇನೋ... ಮುಂದೆ ಹೋದಂತೇ ಇನ್ನು ಏನೆಲ್ಲಾ ಬಯಕೆಗಳು ಮನದಲ್ಲಿ ಮೂಡುತ್ತವೆಯೋ... ಕುತೂಹಲದಿಂದ ಕಾದುನೋಡುತ್ತಿದ್ದೇನೆ...
Friday, 5 December 2008
ನನ್ನ ಬಾಡಿದ್ದ ಬದುಕಿಗೆ ಹೊಳೆವ ದೀಪ್ತಿಯಾದವಳು ನೀನು, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು, ಎಲ್ಲರ ನಿಂದನೆಗೆ ಗುರಿಯಾಗಿ, ಕಡಿದ ಬಾಳೆ ಗಿಡದಂತಾಗಿದ್ದ ಈ ಖಾಲಿ ಮನಸ್ಸಿಗೆ ಆತ್ಮವಿಶ್ವಾಸ ತುಂಬಿ ಮತ್ತೆ ನನ್ನಲ್ಲಿ ಹೊಸ ಹುರುಪು ಮೊಳಕೆಯೊಡೆಯುವಂತೆ ಮಾಡಿದ ನನ್ನ ರತ್ನ ನೀನು. ಕೈಯಲ್ಲಿ ಒಂದು ಕೆಲಸವೂ ಇಲ್ಲದೆ, ಭವಿಷ್ಯವೇ ಬರಿದಾಗಿ ಕಾಣುತ್ತಿದ್ದಾಗ, ನಿನ್ನ ಸಂಗಡದಿಂದ ಹೊಸ ಉದ್ಯೋಗ ಪ್ರಾಪ್ತಿಯಾಗುವಂತೆ ಮಾಡಿದ್ದು ನೀನು.
ಆವತ್ತು ಯಾವುದೋ ವಿಷಯಕ್ಕೆ ಎಲ್ಲರೂ ನನ್ನ ಸ್ನೇಹಕ್ಕೆ ತಿಲಾಂಜಲಿ ಇಟ್ಟಾಗ ಮತ್ತೆ ನನ್ನ ಸಮರ್ಥನೆಗೆ ಸಾಥ್ ನೀಡಿದ ಸಂಗಾತಿ ನೀನು. ಬೇರೆ ಕಡೆ ಉದ್ಯೋಗ ನಿಮಿತ್ತ ತೆರಳುವ ವೇಳೆಗೆ ಯಾವೊಬ್ಬನೂ ಬರದೇ ಇದ್ದರೂ, ನನ್ನಲ್ಲಿ ಸ್ಪೂರ್ತಿ ತುಂಬಿ, ಅತ್ಯಂತ ಆದರದಿಂದ ಬೀಳ್ಕೊಟ್ಟು, ಆ ನಿಲ್ದಾಣದಲ್ಲೇ ನಮ್ಮ ಪ್ರೀತಿ ಬಗ್ಗೆ ನೀನು ಒತ್ತಿ ಒತ್ತಿ ಹೇಳುತ್ತಿದ್ದಾಗ, ನೀನು ನನ್ನೊಂದಿಗಿಲ್ಲದಿದ್ದಾಗ ಯಾಕೀ ಉದ್ಯೋಗ ಎಂದಿದ್ದೆ ನಾನು. ನನ್ನ ಕಣ್ಣಿನಿಂದ ಒಂದು ಹನಿ ಉದುರಿದ ಕೂಡಲೇ ಗೊಳೋ ಎಂದು ಅಂತಿದ್ದ ನಿನ್ನನ್ನು ಸಮಾಧಾನ ಪಡಿಸುವಾಗಲೇ ಹೊತ್ತು ಮೀರಿತ್ತು. ಹೇಗೋ ಒಲ್ಲದ ಮನಸ್ಸಿನಿಂದ ಆ ಕ್ಷಣದಲ್ಲಿ ನಾವಿಬ್ಬರೂ ಬೇರ್ಪಡಬೇಕಾಯಿತು.
ಅಂದು ನೀನು ನಿಲ್ದಾಣದಲ್ಲಿ ಅತ್ತಷ್ಟು ಬೇರೆಂದೂ ಅತ್ತಿರಲಿಲ್ಲ ಎಂದು ನೀನು ಫೋನ್ನಲ್ಲಿ ಹೇಳುತ್ತಲೇ ಇರುತ್ತಿದ್ದಿ. ನೀನು ಅತ್ತದ್ದಕ್ಕೆ ನನಗೆ ಒಂಚೂರು ಬೇಸರವಿಲ್ಲ. ಏಕೆಂದರೆ ನೀನು ನನ್ನನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಆ ಪ್ರೀತಿ ನಮ್ಮಿಂದ ಒಂದು ಕ್ಷಣವನ್ನೂ ಕಳೆಯುವುದು ಅಶ್ವಮೇಧ ಯಾಗ ಮಾಡಿದಷ್ಟೇ ಕಷ್ಟ ಎಂಬುದು ಒಬ್ಬ ಪ್ರೇಮಿಯಾಗಿ ನನಗೆ ಗೊತ್ತು. ಅದಕ್ಕಾಗಿಯೇ ಅಳುವಷ್ಟು ಅತ್ತು ಬಿಡು ಎಂದು ನಿಧಾನವಾಗಿಯೇ ನಾನು ಸಮಾಧಾನ ಮಾಡಿದ್ದು.
ಅದೇನೆ ಇರಲಿ, 3 ವರ್ಷಗಳ ಮೇಲಾಯ್ತು. ಒಂದು ಬಾರಿಯೂ ನಾನು ಮನೆಗೆ ಹೋಗಿಲ್ಲ. ಕೇವಲ ದೂರವಾಣಿ ಮೂಲಕ ನನ್ನ ಹೆತ್ತವರೊಂದಿಗೆ ಸಂವಹಿಸುತ್ತಿದ್ದೇನೆ. ಅವರಿಗೂ ನನ್ನನ್ನು ನೋಡಬೇಕೆಂಬ ತವಕ. ಆ ತುಡಿತ ನನ್ನಲ್ಲೂ ಇದೆ. ಇಲ್ಲಿಗೆ ಬಂದ ಆರು ತಿಂಗಳೊಳಗೆ ನಾನು ವಾಪಸಾಗಬೇಕೆಂದಿದ್ದೆ. ಅಪ್ಪ ಅಮ್ಮನನ್ನು, ಹಾಗೇ ನಿನ್ನನ್ನು ನೋಡಬೇಕೆಂಬ ಮಹದಾಸೆ ಮನಸ್ಸಿನ ತುತ್ತ ತುದಿಯಲ್ಲಿತ್ತು. ಅದರ ಜೊತೆಗೆ ನಮ್ಮ ಹಳ್ಳಿಗೆ ಹತ್ತಿರವಿದ್ದ ನಗರದ ಬ್ರಾಂಚಿನಲ್ಲೇ ನೀನು ಕೆಲಸ ಮಾಡಬಹುದು. ಟ್ರಾನ್ಸ್ಫರ್ ಮಾಡಲು ನನ್ನಿಂದ ಅಡ್ಡಿಯಿಲ್ಲ ಎಂದು ನನ್ನ ಬಾಸ್ ಹೇಳಿದ್ದರು. ಆದರೆ ಅವಕಾಶವನ್ನು ನಾನು ತಿರಸ್ಕರಿಸಿದ್ದೆ.
ಕಾರಣ ನಿನಗೆ ಗೊತ್ತು, ನನಗೆ ಗೊತ್ತು; ಆದರೆ ನಾನು ಫೋನಾಯಿಸಿದಾಗ ಸದಾ ನನ್ನ ಹೆತ್ತವರು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಏನೋ ಒಂದು ಉತ್ತರ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಊರಿಗೆ ಬಂದರೆ ನಿನ್ನನ್ನು ನೋಡಲು, ಮಾತನಾಡಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ನೀನೇ ಇಲ್ಲದ ಮೇಲೆ ಯಾವ ಸುಖಕ್ಕಾಗಿ ನಾನು ಬರಬೇಕು? ಹೌದು, ನನ್ನ ಹೆತ್ತವರನ್ನು ನೋಡಬೇಕು. ಅವರನ್ನು ಕಾಣದೆ ವರ್ಷಗಳಾಗಿವೆ. ಆದರೆ ನಿನ್ನನ್ನು ಕಳೆದುಕೊಂಡ ದು:ಖದಲ್ಲಿ ಅಪ್ಪ ಅಮ್ಮನಲ್ಲಿ ನಾನು ಲೋಕಾಭಿರಾಮವಾಗಿ ಹೇಗೆ ಮಾತನಾಡಲು ಸಾಧ್ಯ? ವರ್ಷಗಳ ನಂತರ ಮಗ ಊರಿಗೆ ಬಂದರೂ ನಮ್ಮಲ್ಲಿ ಸರಿಯಾಗಿ ಮಾತನಾಡಿಲ್ಲ ಎಂಬ ಕೊರಗು ಅವರನ್ನು ಕಾಡದೇ ಇರದು. ನಾನು ಬಂದರೆ ಒಂದು ರೀತಿಯಲ್ಲಿ ಅವರಿಗೂ ಬೇಸರ. ಆದರೆ ಹಾಗೆ ಮಾಡಲು ಖಂಡಿತಾ ಒಪ್ಪಿಗೆಯಿಲ್ಲ. ಆದರೆ ನಾನು ಬರದಿರದ ಹಿಂದಿನ ವಾಸ್ತವವನ್ನು ಹೇಗೆ ಅವರಿಗೆ ವಿವರಿಸಲಿ?
ಗೆಳತಿ, ಊರು ಬಿಟ್ಟು ಬಂದಿದ್ದರೂ, ನಿನ್ನ ನೆನೆಯದೇ ಒಂದು ಕ್ಷಣವೂ ಮುಂದುವರಿಯುತ್ತಿರಲಿಲ್ಲ. ನಿನ್ನಲ್ಲಿ ಒಂದಕ್ಷರ ಮಾತನಾಡದಿದ್ದರೂ ನನಗೆ ದಿನದೂಡಲಾಗುತ್ತಿರಲಿಲ್ಲ. ಆದರೆ ದಿನಕಳೆದಂತೆ ನೀನೆ ನನ್ನನ್ನು ದೂರ ಮಾಡಿದೆ. ಏಕೆ ಹೀಗೆ ಮಾಡುತ್ತಿದ್ದಿ ಎಂದು ಕೇಳಿದರೂ ನೀನು ನನ್ನಲ್ಲಿ ಏನನ್ನೂ ಹೇಳಲಿಲ್ಲ. ಅದೊಂದು ದಿನ ಮಾಮೂಲಿಯಂತೆ ನನ್ನ ಇ-ಮೇಲ್ ನೋಡುತ್ತಿದ್ದ ಸಂದರ್ಭದಲ್ಲಿ ನೀನು ಕಳುಹಿಸಿದ್ದ ಆಮತ್ರಣ ಪತ್ರಿಕೆ ನೋಡಿ ದಂಗುಬಡಿದಂತಾಗಿದ್ದೆ ನಾನು! ಎರಡು ದಿನ ಆಫೀಸಿಗೂ ತೆರಳಿರಲಿಲ್ಲ. ನಿನ್ನ ನೆನಪಿನಲ್ಲೇ ದಿನ ದೂಡುತ್ತಿದ್ದ ನನಗೆ ಈ ರೀತಿಯ ಮೋಸ ಏಕೆ ಮಾಡಿದೆ?
ನಿನ್ನಲ್ಲಿ ಉತ್ತರವನ್ನು ನಾನು ಇದುವರೆಗೆ ಕೇಳಿಲ್ಲ. ಆ ಬಳಿಕ ಒಂದು ಬಾರಿಯೂ ನಾವು ಮಾತನಾಡಿಲ್ಲ. ಅದೇಗೋ ನಿನ್ನ ಮದುವೆ ಸಮಾರಂಭದ ಚಿತ್ರಗಳನ್ನು ನಾನು ನೋಡಿದ್ದೆ. ರೇಷ್ಮೆ ಸೀರೆ ಸುತ್ತಿದ್ದ ನಿನ್ನನ್ನು ಮೊದಲ ಬಾರಿ ಸೀರೆಯಲ್ಲಿ ಕಂಡಿದ್ದ ನಾನು ಆ ಸೌಂದರ್ಯವನ್ನು ಹಾಡಿ ಹೊಗಳಬಲ್ಲೆ. ಆದರೆ ಆ ಹಕ್ಕನ್ನು ನಾನಿಂದು ಕಳೆದುಕೊಂಡಿದ್ದೇನೆ ಎಂದು ಅತ್ಯಂತ ನೋವಿನಿಂದ ಹೇಳಿದರೂ, ನಿನ್ನಲ್ಲಿ ಮಾತನಾಡಬೇಕೆಂದು ಮನಸ್ಸು ಹೇಳುತ್ತಿದೆ. ಆದರೆ ಅದು ಅಸಾಧ್ಯ ಎಂದು ಗೊತ್ತಿದ್ದರೂ ನನ್ನ ಮನಸ್ಸೊಪ್ಪುತ್ತಿಲ್ಲ. ನಿನ್ನ ನೋಡಬೇಕು, ನಿನ್ನಲ್ಲಿ ಜಗಳವಾಡಬೇಕೆಂದು ಮನಸ್ಸು ಸಾರಿ ಹೇಳುತ್ತಿದ್ದರೂ, ವಿಧಿ ತನ್ನದೇ ಆಟವಾಡಿದೆ.
ಅಪ್ಪ, ಅಮ್ಮ; ನಾನು ನಿಜವಾಗಿಯೂ ಇದೇ ಕಾರಣಕ್ಕಾಗಿ ಊರಿಗೆ ಬಂದಿಲ್ಲ...ಬರುವ ಯೋಚನೆ ಕೂಡ ಮಾಡಿಲ್ಲ :-(
Thursday, 27 November 2008
ಬಹುಶಃ ಕಳೆದ ರಾತ್ರಿ ಮುಂಬೈಯ ಬಹುತೇಕ ಮಂದಿಗೆ ಕಂಡೂ ಕೇಳರಿಯದ ಕರಾಳ ರಾತ್ರಿ. ಗುಜರಾತ್ನಿಂದ ಮೀನುಗಾರರ ದೋಣಿಯಲ್ಲಿ ಜಲಮಾರ್ಗದ ಮೂಲಕ ರಾಜಾರೋಷವಾಗಿ ಮುಂಬೈ ನಗರಿಗೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು, ಹಲವು ನಾಗರಿಕರನ್ನು ಹತ್ಯೆಗೈದದ್ದು ಮಾತ್ರವಲ್ಲ, ಇಡೀ ಮುಂಬೈ ನಗರವೇ ತತ್ತರಿಸುವಂತೆ ಮಾಡಿದ್ದಾರೆ.
ಮಾಲೇಗಾಂವ್ ಸ್ಫೋಟದ ಬಳಿಕ ಎರಡನೇ ಬಾರಿ ಉಗ್ರರು ಮುಂಬೈ ನಗರವನ್ನು ಗುರಿಯಾಗಿಸಿದ್ದಾರೆ. ಭಾರತದ ಪ್ರಮುಖ ವಾಣಿಜ್ಯ ನಗರಿ ಉಗ್ರರ ದಾಳದಲ್ಲಿ ಸಿಲುಕಿದೆ. ಎಟಿಎಸ್ ಪಡೆಯ ಮುಖ್ಯಸ್ಥ ಹಾಗೂ ಮಾಲೇಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಬಲಿಯಾಗಿದ್ದಾರೆ. ಎನ್ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ತಮ್ಮ
ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿಯಾಗಿದೆ. ಮತ್ತೊಬ್ಬ ಪೊಲೀಸ್ ಅಮಿತ್ ಕಾಮ್ಟೆ ಅವರೂ ಜೀವ ತೆತ್ತಾಗಿದೆ... ಒಟ್ಟು ಈಗಾಗಲೇ ೧೯ ಪೊಲೀಸರು ಉಗ್ರರೊಂದಿಗಿನ ಕಾಳಗದಲ್ಲಿ ಮೃತಪಟ್ಟಾಗಿದೆ ಎಂದು ವರದಿಯಾಗಿದೆ. ನೂರಾರು ಮಂದಿ ನಾಗರಿಕರು ದಾಳಿಗೆ ಸಿಲುಕಿ, ಹಲವಾರು ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.
ದೆಹಲಿಯಲ್ಲಿರುವ ನಾವು ಮುಂಜಾನೆ ಟಿವಿ ನೋಡುತ್ತಿದ್ದಾಗ ಮುಂಬೈ ಹೊತ್ತಿಉರಿಯುತ್ತಿರುವುದು ಸ್ಪಷ್ಟವಾಗಿತ್ತು. ಉಗ್ರರು ನೂರಾರು ಮಂದಿ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ತಾಜ್ ಹೋಟೆಲ್ ಹೊರಗೆ ಕಾಣುತ್ತಿದ್ದ ದೃಶ್ಯಗಳೆಲ್ಲಾ ಹೃದಯಕಲಕುವಂತಿದ್ದವು. ಪೊಲೀಸರ ವಾಹನವನ್ನೇ ಹೈಜಾಕ್ ಮಾಡಿದ ಉಗ್ರರು ಕಾರಿನೊಳಗಿಂದಲೇ ಗುಂಡಿನ ದಾಳಿ ನಡೆಸುತ್ತಿದ್ದ ದೃಶ್ಯ ಆಧುನಿಕ ಜಗತ್ತಿನ ರಕ್ಕಸರು ರುದ್ರ ನರ್ತನ ನಡೆಸುತ್ತಿರುವಂತಿತ್ತು. ಅಂತಹ ಕಠಿಣ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಯೋಚಿಸದೆ ಪೊಲೀಸರು ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸುತ್ತಿದ್ದರು.
ಆದರೆ ಇಷ್ಟೆಲ್ಲಾ ಆಗುತ್ತಿರುವಾಗ ನಮ್ಮ ಮನೆಯ ಹೊರಗಿನಿಂದ ಜಯಘೋಷಗಳ ಸದ್ದು ಕೇಳಿಬರುತ್ತಿತು. ದೆಹಲಿಯಲ್ಲಿ ಇನ್ನೊಂದು ದಿನದಲ್ಲಿ ವಿಧಾನಸಭಾ ಚುನಾವಣೆ ನಡೆಯು
ತ್ತಿರುವುದರಿಂದ ಯಾವುದೋ ಪಕ್ಷದ ಕಾರ್ಯಕರ್ತರು ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗೇ ಅಟ್ಟಹಾಸದ ಮೂಲಕವೇ ನಡೆಸುತ್ತಿದ್ದರು. ಅದೇ ಹೊತ್ತಿಗೆ ನನ್ನ ಮೊಬೈಲ್ ಒಂದು ಮೆಸೇಜ್ ಕೂಡ ಬಂತು. ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೆಷ್ಟು ಹೆಣಗಳು ಉರುಳುತ್ತವೋ ಎಂಬುದನ್ನು ನಾವು ಕಾದುನೋಡಬೇಕಷ್ಟೆ ಎಂದೆಲ್ಲಾ ಮೆಸೇಜ್ ತುಂಬಿಹೋಗಿತ್ತು. ಸರಿ ಆ ಮೆಸೇಜ್ ಒತ್ತಟ್ಟಿಗಿರಲಿ, ಇದುವೆರೆಗೆ ಮಾಧ್ಯಮಗಳಲ್ಲಿ ನೋಡಿದ್ದ ಕೆಸರೆರೆಚಾಟಗಳನ್ನು ಎಸ್ಎಂಎಸ್ನಲ್ಲೂ ಓದುವ ದುರ್ಗತಿ ಬಂತೇ ಎಂದು ಆಶ್ಚರ್ಯವಾಯಿತು. ಹೌದು ಇನ್ನೆರಡು ದಿನಗಳಲ್ಲಿ ಚುನಾವಣೆ ಇರುವಾಗ ಮುಂಬೈನಲ್ಲಿ ಉಗ್ರರ ದಾಳಿಯಿಂದ ನಡುಗಿ ಹೋಗಿದ್ದರೆ, ಪ್ರತಿ ಪಕ್ಷಗಳಿಗೆ ಇದಕ್ಕಿಂತ ಸಂತೋಷದ ಸುದ್ದಿ ಬೇರೇನಿದೆ ತಾನೆ? ಚುನವಣಾ ಪ್ರಚಾರದಾದ್ಯಂತ ಇದು ಆಡಳಿತ ಸರ್ಕಾರದ ವೈಫಲ್ಯ ಎಂದು ಅದನ್ನೇ ಎತ್ತಿಹಿಡಿಯುತ್ತಾ, ಇಂತಹ ಬರ್ಬರ ಸ್ಥಿತಿಯಲ್ಲೂ ಅದನ್ನೇ ಚುನಾವಣಾ ಅಸ್ತ್ರವನ್ನಾಗಿ, ಜನಸಾಮಾನ್ಯರನ್ನು ಓಲೈಸುವ ಈ ಕೀಳು ಮಟ್ಟದ ರಾಜಕೀಯ ಫುಡಾರಿಗಳು ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ, ನಮ್ಮ ದೇಶದ ಅಮಾಯಕರು ಇನ್ನೆಷ್ಟು ಜನರು ನೆತ್ತರ ಹೊಳೆಯನ್ನು ಹರಿಸಬೇಕಿದೆ ಎಂಬೆಲ್ಲಾ ಕರಾಳ ಪ್ರಶ್ನೆಗಳು ಮನದಲ್ಲಿ ಮೂಡದೇ ಇರಲಿಲ್ಲ. ಮೊನ್ನೆತಾನೆ ಮಾಲೇಗಾಂವ್ ಸ್ಫೋಟ ಸಂಭವಿಸಿ ಇಡೀ ಮಹಾರಾಷ್ಟ್ರವೇ ನಲುಗಿಹೋಗಿತ್ತು. ಉಗ್ರ ನಿಗ್ರಹ ದಳ ನಡೆಸಿದ ತನಿಖೆ ಮೂಲಕ ಕೆಲವು ಸ್ವಯಂಘೋಷಿತ ಸ್ವಾಮೀಜಿಗಳು ಈ ಉಗ್ರಕೃತ್ಯವನ್ನು ನಡೆಸಿದ್ದು ಎಂದು ತಿಳಿದು ಬಂದ ಕೂಡಲೇ ಕಾಂಗ್ರೆಸ್ನ ಹಲವು ಮಂದಿಯಲ್ಲಿ ಹರ್ಷದ ಹೊನಲು ಮೂಡಿತ್ತು. ಇನ್ನೇನು ಸಾರ್ವತ್ರಿಕ ಚುನಾವಣೆ ದೂರದಲ್ಲೇನಿಲ್ಲ. ಹಾಗೇ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿದ್ದ ಕಾರಣ ಕಾಂಗ್ರೆಸ್ ಮಂದಿಗೆ ‘ಹಿಂದೂ ಭಯೋತ್ಪಾದನೆ’ಯೇ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ಇಷ್ಟು ದಿನಗಳ ಕಾಲ ‘ಇಸ್ಲಾ ಭಯೋತ್ಪಾದನೆ’ ಎಂದು ಬೊಬ್ಬಿಡುತ್ತಿದ್ದ ಮಂದಿಯ ವಿರುದ್ಧ ಧ್ವನಿಯೆತ್ತಲು ಕಾಂಗ್ರೆಸ್ ಇದು ದೊಡ್ಡ ಉಡುಗೊರೆಯಾಗೇ ದೊರೆಯಿತು.ಒಟ್ಟಾರೆ ಭಯೋತ್ಪಾದಕರೆಂಬ ಆಧುನಿಕ ಯುಗದ ರಾಕ್ಷಸರ ನಡುವೆ, ಜಡ ವ್ಯವಸ್ಥೆಗೆ ಅಂಟಿಕೊಂಡು ನಾಚೆಕೆಗೇಡಿನ ರಾಜಕೀಯದ ನಡುವೆ, ಬರೀ ಸ್ವಾರ್ಥ, ಅಧಿಕಾರ ದಾಹದಿಂದ ಯಾರ ಬೆನ್ನಿಗೂ ಚೂರಿ ಹಾಕಲು ತಯಾರಾಗಿರುವ, ಜನಸಾಮಾನ್ಯ ಧ್ವನಿಯಗಿರುತ್ತೇವೆ ಎಂದು ಪ್ರಮಾಣ ವಚನ ಮಾಡಿ, ಜನಸಾಮಾನ್ಯರಿಗೆ ಧ್ವನಿ ಎತ್ತದಂತೇ ಮಾಡುವ, ಐದು ವರ್ಷದುದ್ದಕ್ಕೂ ತಮ್ಮ ಜೇಬನ್ನು ಬೇಕಾದಷ್ಟು ತುಂಬಿಸಿ, ದೇಶದ ನಿರ್ಗತಿಕ ಮಂದಿಯ ಜೀವದೊಂದಿಗೆ ಪ್ರತಿದಿನ, ಪ್ರತಿಕ್ಷಣವೂ ಆಟವಾಡುವ ಜಗತ್ತಿನ ಅತಿಕೆಟ್ಟ, ಅತ್ಯಂತ ಹೇಸಿಗೆಯ ಜೀವನ ನಡೆಸುತ್ತಿರುವ ಮಹಾನ್ ರಾಜಕಾರಣಿಗಳ ನಡುವೆ ಇಂದು ನಾವು ಬದುಕುತ್ತಿದ್ದೇವೆ.
ಕಳೆದ ಆರೇಳು ತಿಂಗಳಿನಿಂದ ಇಡೀ ರಾಷ್ಟ್ರವೇ ಭಯೋತ್ಪಾಕರ ನಿರಂತರ ದಾಳಿಯಿಂದ ಕಂಗೆಟ್ಟುಹೋಗಿದ್ದರೂ, ಯಾವೊಬ್ಬ ಜನಪ್ರತಿನಿಧಿ ಕೂಡ ಜನಸಾಮಾನ್ಯನ ಬದುಕಿನ ಬಗ್ಗೆ ಯೋಚಿಸಿಲ್ಲ. ದಾಳಿಗಳಲ್ಲಿ ಗಾಯಗೊಂಡ, ಮೃತಪಟ್ಟ ಮಂದಿಯ ಕುಟುಂಬಕ್ಕೆ ಸಾವಿರಗಟ್ಟಲೆ ಸಹಾಯಧನ ಘೋಷಿಸಿ, ಅದನ್ನೂ ನೀಡದೇ, ಈಗ ಮತ್ತೊಂದು ಉದ್ರ ದಾಳಿ ನಡೆದಾಗ ಮತ್ತೆ ಅದೇ ರಾಗ ಎಳೆಯುತ್ತಿದ್ದಾರೆ. ಅತ್ತ ಮುಂಬೈನಲ್ಲಿ ಅಮಾಯಕ ಮಂದಿಯ ಮಾರಣಹೋಮವಾಗುತ್ತಿದ್ದರೆ ಇತ್ತ ರಾಜಕೀಯ ಫುಡಾರಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸದ್ಯ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಭಯೋತ್ಪಾದನೆಯೇ ಚುನಾವಣೆಯ ಪ್ರಮುಖ ಅಸ್ತ್ರ. ಆದರೆ ಇವರ ‘ಬ್ಲೇಮ್ ಗೇಮ್’ನ ಮಧ್ಯೆ ನರಳುತ್ತಿರುವವರು ಏನೂ ಅರಿಯದ ಅಮಾಯಕರು. ಈಗ ಹೇಳಿ ನಿಜವಾದ ಭಯೋತ್ಪಾದಕರು ಯಾರೆಂಬುದನ್ನು?
Thursday, 30 October 2008
ಅದು ನೀನು ನಮ್ಮ ಮನೆಗೆ ಮೊದಲ ಬಾರಿ ಬಂದದ್ದು. ನಿನ್ನ ಮನದಲ್ಲಿದ್ದ ಗೊಂದಲಗಳನ್ನು ನಾನರ್ಥಮಾಡಿಕೊಂಡಿದ್ದೆ. ಅಂದು ರಾತ್ರಿ ನೀ ಹೇಳಿದ ಒಂದೊಂದು ಮಾತುಗಳು ಇಂದೂ ನನ್ನ ಕಿವಿಯಲ್ಲಿ ಗಿರಕಿಹೊಡೆಯುತ್ತಲೇ ಇವೆ. ಅಮ್ಮ ನಿನ್ನನ್ನು ಹೋಗುವುದು ಬೇಡ ಎಂದಿದ್ದರೂ, ಹಠ ಮಾಡಿ ನೀನು ಬಂದೆ ಎಂಬುದು ನನಗೆ ಚೆನ್ನಾಗಿ ಗೊತ್ತು.
ಅಷ್ಟಕ್ಕೂ ನಮ್ಮಿಬ್ಬರ ನಡುವೆ ಇದ್ದ ಪ್ರೀತಿಯೇ ಎಲ್ಲದಕ್ಕೂ ಸಾಕ್ಷಿಯಾಗಿದ್ದವು. ನಿನಗೆ ಗೊತ್ತೇ, ಅಂದು ನಿನ್ನ ಹೆತ್ತವರಂತೆ ನನ್ನ ಹೆತ್ತವರೂ ಕೂಡ ನೀ ಮನೆಗೆ ಬರುವ ವಿಷಯದ ಬಗ್ಗೆ ಚಕಾರ ಎತ್ತಿದ್ದರು. ಹಾಗಿದ್ದರೂ ಏನೆಲ್ಲಾ ಹೇಳಿ, ಅವರ ಮನವೊಲಿಸಿ, ನಿನ್ನನ್ನು ಮನೆಗೆ ಕರೆತರುವಲ್ಲಿ ನಾನು ಯಶಸ್ವಿಯಾಗಿದ್ದೆ. ಅಪ್ಪನಿಗಿಂತಲೂ ಅಮ್ಮ ನಿನ್ನ ವಿಷಯದ ಕುರಿತಾಗಿ ಬಹಳಷ್ಟು ವಾದ ಮಾಡಿ, ನನ್ನ ನಿರ್ಧಾರ ಬದಲಾಯಿಸಲು ಪ್ರಯತ್ನಿಸಿದ್ದರು. ಆದರೆ ನಾನೂ ಅಷ್ಟೇ ಹಠ ಮಾಡಿ, ವಾದ ಮಾಡಿ ಅವರ ಬಾಯನ್ನು ಮುಚ್ಚಿಸಿದ್ದೆ. ಇಷ್ಟೆಲ್ಲಾ ಮಾಡಿದ್ದು ನಿನಗಾಗಿ. ನಮ್ಮ ಪ್ರೀತಿಗೆ ಯಾವುದೂ ಅಡ್ಡಗಾಲಾಗದಿರಲಿ ಎಂಬ ಕಾರಣಕ್ಕಾಗಿ. ನೀನು ಗಮನಿಸಿದ್ದೆಯಾ, ನೀನು ಬಂದಿದ್ದ ಎರಡನೇ ದಿನದಂದು ನನ್ನ ಅಮ್ಮನಲ್ಲಿ ಕೋಪದ ಛಾಯೆ ಅಚ್ಚೊತ್ತಿದ್ದದ್ದನ್ನು. ಅಮ್ಮನಿಗೆ ಏಕೆ ಕೋಪ ಬಂದಿತ್ತು ಎಂಬುದು ನನಗಾಗಲೇ ಗೊತ್ತಾಗಿತ್ತು. ಅದನ್ನು ಅವರು ನೀ ಹೋದ ಮಾರನೇ ದಿನ ನನ್ನಲ್ಲಿ ಹೇಳಿದ್ದರು. ಆದರೆ ಆ ಕೋಪ ಏಕೆ ಎಂಬುದು ನಿನಗೆ ಗೊತ್ತಿರಲಿಲ್ಲ. ಬಿಡು, ಆ ವಿಷಯ ಈಗ ಮಾತಾಡಿ ಪ್ರಯೋಜನವಿಲ್ಲ. ಇರಲಿ, ಆ ಮೂರು ದಿನದ ದೀಪಾವಳಿ ನಮ್ಮಿಬ್ಬರ ಬದುಕಿಗೆ ಹೊಸ ಹೊರಪು ನೀರಲಿದೆ ಎಂದು ನಾವು ಕನಸುಕಂಡಿದ್ದು, ರಾತ್ರಿಯ ಹೊತ್ತಲ್ಲಿ ಎಲ್ಲರೂ ಪಟಾಕಿಗಳ ಲೋಕದಲ್ಲಿ ಸಂಭ್ರಮ ಪಡುತ್ತಿದ್ದರೆ ನಾವಿಬ್ಬರೂ ನಮ್ಮ ಭಾವನಾಲೋಕದಲ್ಲಿ ಕನಸ ಕಾಣುತ್ತಾ ಹೊತ್ತು ಕಳೆದಿದ್ದೆವು. ನಮ್ಮ ಭವಿಷ್ಯ, ಉದ್ಯೋಗ ಹಾಗೂ ನಮ್ಮ ಮುಂದಿನ ಜೀವನದ ಬಗ್ಗೆ ಸಾಕಷ್ಟು ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದೆವು. ಆ ಮಾತುಗಳ ಮಧ್ಯೆ ನಾವು ಎಲ್ಲವನ್ನೂ ಮರೆತಿದ್ದೆವು. ನನ್ನ ಹೆತ್ತವರ ಜೊತೆ ದೀಪಾವಳಿ ಆಚರಿಸುವುದನ್ನೂ! ಅದಕ್ಕೆ ಅಂದು ಅಮ್ಮನಿಗೆ ಕೋಪ ಬಂದಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ದೀಪಾವಳಿಯ ಮೂರನೇ ದಿನದ ಅಂತ್ಯವೂ ಹತ್ತಿರವಾಗಿತ್ತು. ಮಾರನೆ ದಿನದ ಬೆಳಗಿನ ಜಾವದ ಬಸ್ಸಲ್ಲಿ ಹೋಗಲು ನೀನು ಅಣಿಯಾಗಿದ್ದೆ. ಹಾಗಾಗಿ ಆ ರಾತ್ರಿ ನನಗೆ ನಿದ್ದೆಯೇ ಬಂದಿರಲಿಲ್ಲ. ನೀನು ನನ್ನಿಂದ ಮಾರು ದೂರದ ಕೋಣೆಯಲ್ಲಿ ಮಲಗಿದ್ದರೂ, ನಮಗಿಬ್ಬರಿಗೂ ನಿದ್ದೆ ಬಂದಿರಲಿಲ್ಲ ಎಂಬುದು ಇಬ್ಬರಿಗೂ ಗೊತ್ತು. ನಮ್ಮಿಬ್ಬರ ಮೊಬೈಲ್ಗಳು ಬ್ಯುಸಿಯಾಗಿದ್ದೇ ಇದಕ್ಕೆ ಸಾಕ್ಷಿ.
ಸರಿ ಮಾರನೇ ದಿನ ನೀ ಹೊರಟೆ. ದೀಪಾವಳಿ ಮುಗಿದಿತ್ತು. ಮತ್ತದೇ ಮಾಮೂಲಿ ದಿನಗಳು...ನೀನಲ್ಲಿ; ನಾನಿಲ್ಲಿ... ಎಂದುಕೊಂಡು ಬಸ್ಸು ದೂರಸಾಗಿದ್ದರೂ ನಾನು ಟಾ ಟಾ ಮಾಡುತ್ತಲೇ ಇದ್ದೆ. ಆದರೆ ಈ ವರ್ಷದ ದೀಪಾವಳಿ ನೆನೆಸಿಕೊಂಡಾಗ ನನಗೆ ಕಾಡುತ್ತಿರುವ ವೇದನೆ ಅಷ್ಟಿಷ್ಟಲ್ಲ. ಆ ಮೂರು ದಿನಗಳ ಒಂದು ರಾತ್ರಿಯೂ ಕೂಡ ನನಗೆ ನಿದ್ದೆ ಬಂದಿಲ್ಲ. ಬಂದದ್ದು ಬರೀ ಕಣ್ಣೀರುಗಳು ಮಾತ್ರ. ಏಕೆಂದರೆ ಅಂದು ನಿನ್ನೊಂದಿಗೆ ಆಚರಿಸಿದ ದೀಪಾವಳಿಯೇ ನನ್ನ ಪಾಲಿನ ಕೊನೆಯ ದೀಪಾವಳಿ. ನಮ್ಮ ಬದುಕಿಗೆ ಹೊಸ ಹುರುಪು ನೀಡುವ ದೀಪಾವಳಿ ಇದು ಎಂದು ಆ ರಾತ್ರಿ ಕಂಡಿದ್ದ ಕನಸು ನಿನ್ನೊಂದಿಗೆ ಛಿದ್ರಛಿದ್ರಗೊಂಡಿತ್ತು. ದೀಪಾವಳಿ ಮುಗಿಸಿ ಅಂದು ನೀನು ಹೊರಟ ಆ ಬಸ್ ಅಪಘಾತದಲ್ಲಿ ಮೃತಪಟ್ಟವರ ಎದುರು ಕಣ್ಣೀರ ಹೊಳೆ ಹರಿಸಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ.
ನಿನ್ನನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು ನೋಡು. ಈ ದೀಪಾವಳಿಯಂದು ಕಾಡಿದಷ್ಟು ನೀನು ಯಾವತ್ತೂ ಕಾಡಿರಲಿಲ್ಲ. ಎಲ್ಲರೂ ಬೆಳಕಿ
ನ ಹಬ್ಬದಲ್ಲಿ ನಿರತರಾಗಿದ್ದಾರೆ ನಾನು ಮಾತ್ರ ಮನೆಯ ಒಂದು ಮೂಲೆಯಲ್ಲೇ ಕುಳಿತಿದ್ದೆ. ಇಂದು ನೀನಿರದಿದ್ದರೂ; ನೀನು ಕಳುಹಿಸಿದ್ದ ಒಂದೊಂದು ಎಸ್ಎಂಎಸ್ಗಳನ್ನು ನಾನು ಓದದ ದಿನಗಳಿಲ್ಲ. ನನ್ನ ಒಂದೊಂದು ಕೆಲಸದ ಮುಂಚೆ ನಿನ್ನನ್ನು ನೆನೆಯುತ್ತಲೇ ಇದ್ದೇನೆ. ಇಂದು ನಾನು ಉದ್ಯೋಗ ನಿಮಿತ್ತ ಮನೆಯಿಂದ ಎಷ್ಟೋ ದೂರದಲ್ಲಿದ್ದೇನೆ. ಬಹುಶಃ ನೀನಿರುತ್ತಿದ್ದರೆ ನಾನಿಲ್ಲಿ ಖಂಡಿತಾ ಬರುತ್ತಿರಲಿಲ್ಲ. ಆದರೂ ನೀನು ಇಂದಿಗೂ ನನ್ನ ಜೊತೆಯೇ ಇದ್ದೀಯಾ... ಕತ್ತಲೆ ತುಂಬಿದ ಮನದ ಮನೆಗೆ ಭರವಸೆ ತುಂಬುವ ಬೆಳಕಿನ ಹಾಗೆ...Friday, 19 September 2008
ಅದು 104 ವರ್ಷದ ಹಿರಿಯ ಜೀವ. 66 ವರ್ಷಗಳ ಹಿಂದೆ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆಕೊಟ್ಟಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಎನ್.ಎಚ್. ಹುಚ್ಚುರಾಯಪ್ಪ 'ಕ್ವಿಟ್ ಇಂಡಿಯಾ' ಚಳವಳಿಗೆ ಧುಮುಕಿದ್ದರು. ಅಂದಿನಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಹೋರಾಟವನ್ನೇ ಜೀವನವಾಗಿಸಿಕೊಂಡಿದ್ದ ಹುಚ್ಚುರಾಯಪ್ಪ, ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಕೂಡ ಒಂದು ಹೋರಾಟ ಮಾಡಿದರು.
ಇದು ಒಂಥರ ವಿಚಿತ್ರವಾದ ಹೋರಾಟ. ಅವರು ಕರ್ನಾಟಕದಿಂದ ನವದೆಹಲಿಗೆ ಹೊರಟಿದ್ದು, ದೇಶದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹ್ವಾನದ ಮೇರೆಗೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೇ ಸೇರಿರುವ ಹುಚ್ಚುರಾಯಪ್ಪ ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿತು. ಅದರೆ, ಕೊನೆಯ ಕ್ಷಣದಲ್ಲಿ ನಿಮ್ಮ ಪ್ರಯಾಣದ ವ್ಯವಸ್ಥೆ ನೀವು ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಕಚೇರಿ ಕೈತೊಳೆದುಕೊಂಡಿತು. ಕೊನೆಗೆ ತಮ್ಮ ಸಹಾಯಕ್ಕಾಗಿ ಮಗನನ್ನು ಕರೆದುಕೊಂಡು ರೈಲು ಹತ್ತಿದ ಹಿರಿಯ ಜೀವ ನವದೆಹಲಿ ತಲುಪಿತು.
ಇವರಂತೆಯೇ ಕರ್ನಾಟಕದಿಂದ ಇನ್ನೂ ನಾಲ್ವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪತಿ ಭವನದಲ್ಲಿನ ವಿಶೇಷ ಚಹಾಕೂಟಕ್ಕೆ ಆಗಮಿಸಿದ್ದರು. ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹುಚ್ಚುರಾಯಪ್ಪ ಅವರಂತೆ ಬಿ. ಶಂಭುಶೆಟ್ಟಿ, ಚನ್ನಪ್ಪಗೌಡ, ಸಿ.ಎಂ ಪಾಲಾಕ್ಷಪ್ಪ ಹಾಗೂ ಎಸ್.ಐ. ಅರುಲ್ದಾಸ್ ಕೂಡ ರಾಜಧಾನಿಗೆ ಬಂದಿಳಿದಿದ್ದರು. ಇವರೆಲ್ಲರ ಜೊತೆ ಸಹಾಯಕ್ಕಾಗಿ ಒಬ್ಬೊಬ್ಬರು ಸಂಬಂಧಿಕರು ಕೂಡ ದೆಹಲಿಗೆ ಬಂದಿದ್ದರು. ಅದು ಸ್ವಂತ ಖರ್ಚಿನಲ್ಲಿ! ರಾಷ್ಟ್ರಪತಿಗಳ ಜೊತೆಗೆ ಚಹಾಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ ಕೇಂದ್ರ ಸರ್ಕಾರವಾಗಲೀ ಅಥವಾ ಅವರನ್ನು ಕಳುಹಿಸಿದ ರಾಜ್ಯ ಸರ್ಕಾರವಾಗಲೀ ವಿಮಾನ ಬಿಡಿ (ಸ್ವಾತಂತ್ರ್ಯ ಹೋರಾಟಗಾರರು ವಿಮಾನಗಳಲ್ಲಿ ಹಾರಾಡಲು ಅರ್ಹರಲ್ಲ. ಏನಿದ್ದರೂ ಖಾದಿ ತೊಟ್ಟ 'ದೇಶಭಕ್ತರು' ಮಾತ್ರ ಸರ್ಕಾರಿ ದುಡ್ಡಿನಲ್ಲಿ ವಿಮಾನವೇರಿ ಹಾರಾಡಲು ಅರ್ಹರು!) ಕನಿಷ್ಠ ಹತ್ತು ರೈಲು ಟಿಕೆಟುಗಳನ್ನು ಖರೀದಿಸಿ ಇವರನ್ನು ದೆಹಲಿಗೆ ಕಳುಹಿಸುವ ಔದಾರ್ಯವನ್ನೂ ತೋರಲಿಲ್ಲ.
ಅದೇ ರೀತಿ ದೇಶದೆಲ್ಲೆಡೆಯಿಂದ ಒಟ್ಟು 294 ಮಂದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಈ ವರ್ಷದ ಚಹಾ ಕೂಟಕ್ಕೆ ಆಹ್ವಾನಿಸಲಾಗಿತ್ತು. ಪ್ರತಿ ವರ್ಷ ಆಗಸ್ಟ್ 9ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರಪತಿಗಳು ಚಹಾಕೂಟಕ್ಕೆ ಆಹ್ವಾನಿಸುವುದು ಸಂಪ್ರದಾಯ. ಆ ಸಂಪ್ರದಾಯದ ಸವಿ ಅನುಭವಿಸಲು ಬಂದವರ ಪೈಕಿ ಹೆಚ್ಚಿನ ಪಕ್ಷ ಎಲ್ಲರ ಕಥೆ ಕೂಡ ಇದೇ ಇರಬಹುದು. ಹೀಗೆ ಪಡಬಾರದ ಪಾಡು ಪಟ್ಟು ರಾಜಧಾನಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಬಂದವರಿಗೆ ಸಿಕ್ಕಿದ್ದಾದರೂ ಏನು? ಸುಮಾರು ಎರಡು ಗಂಟೆಗಳಷ್ಟು ಕಾಲ ನಡೆದ ಆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಶಾಲು ಹೊದಿಸಿ, ವಾಚೊಂದನ್ನು ನೀಡಿ ಸನ್ಮಾನಿಸಲಾಯಿತು. ಉಳಿದಂತೆ ಇವರ ಆಗುಹೋಗುಗಳನ್ನು ಕೇಳುವವರು ಯಾರೂ ಇರಲಿಲ್ಲ. ರಾಷ್ಟ್ರಪತಿಗಳೊಂದಿಗೆ ಚಹಾಕೂಟದಲ್ಲಿ ಭಾಗವಹಿಸಲು ಇವರೆಷ್ಟು ಅರ್ಹರು? ಎಂಬ ಪ್ರಶ್ನೆ ಕೂಡ ಈಗಿನ ಕುಡಿಮೀಸೆಯ ಹುಡುಗರಲ್ಲಿ ಮೂಡಬಹುದು. ಅದು ಅರ್ಥವಾಗಬೇಕಿದ್ದರೆ ಒಮ್ಮೆ ಈ ಹಿರಿಯರ ಜೀವನದತ್ತ ಇಣುಕು ನೋಟ ಹರಿಸಬೇಕು.
81ರ ಹರೆಯದ ಸಿ.ಎಂ. ಪಾಲಾಕ್ಷಪ್ಪ, ವೃತ್ತಿಯಲ್ಲಿ ಆಯುರ್ವೇದ ವೈದ್ಯ. 1947ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬೆಂಗಳೂರು ಸೆಂಟ್ರಲ್ ಜೈಲು ಸೇರಿದರು. ಪಾಲಾಕ್ಷಪ್ಪನವರು ಮತ್ತೆ ಬಿಡುಗಡೆಯ ಭಾಗ್ಯ ಕಂಡಿದ್ದು ಕರ್ನಾಟಕ ಏಕೀಕರಣದ ನಂತರ. ನಿಜಲಿಂಗಪ್ಪ, ಹೆಚ್.ಟಿ ದಯಾಳ್, ಕೆ.ಟಿ ಭಾಷ್ಯಂ ಇವರೆಲ್ಲರ ನಿಕಟ ಸಂಪರ್ಕ ಹೊಂದಿದ್ದವರು ಪಾಲಾಕ್ಷಪ್ಪ. ಬಿಡುಗಡೆಯ ನಂತರ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಹೊಂದಿದ್ದ ಈ ಸ್ವಾತಂತ್ರ್ಯ ಸೇನಾನಿಗೆ ಇಂದಿನ ಧನಬಲ, ತೋಳ್ಬಲ ಹಾಗೂ ಅಧಿಕಾರ ಲಾಲಸೆಯ ರಾಜಕಾರಣವನ್ನು ಕಂಡಾಗ, ಅಂದು ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಕಳಕಳಿಯಿದೆ. ಆದರೆ, ಇವರ ಬಗ್ಗೆ ಕಳಕಳಿ ತೋರಿಸುವವರು...? ಅಂದಹಾಗೆ ಸಿ.ಎಂ ಪಾಲಾಕ್ಷಪ್ಪ ಇಂದಿಗೂ ವಾಸವಿರುವುದು ಬಾಡಿಗೆ ಮನೆಯಲ್ಲೇ! ಸುಮಾರು 200ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ 2005ರಲ್ಲಿ ರಾಜ್ಯ ಸರ್ಕಾರದಿಂದ ಅವರಿಗೆ ಪಿಂಚಣಿ ಮಂಜೂರಾಗಿದೆ!
90 ಹರೆಯದ ಉಡುಪಿ ಮೂಲದ ಶಂಭುಶೆಟ್ಟಿ ಅವರು 1932ರಲ್ಲೇ ಸ್ವಾತಂತ್ರ ಹೋರಾಟಕ್ಕೆ ಕಾಲಿಟ್ಟವರು. ನಂತರ ಹಿಂದಿರುಗಿ ನೋಡಲಿಲ್ಲ. ಏಳನೇ ವರ್ಷಕ್ಕೆ ಶಾಲೆ ತೊರೆದ ಅವರು ಎರಡು ಬಾರಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಆದರೆ ಜೈಲಿನಲ್ಲಿ ಕಳೆದ ದಿನಗಳನ್ನು ಅಷ್ಟೇ ರೋಚಕವಾಗಿ ವಿವರಿಸುತ್ತಾರೆ ಶಂಭು ಶೆಟ್ಟಿ. 'ಒಂದು ವಿಶ್ವವಿದ್ಯಾಲಯದಲ್ಲಿನ ಅನುಭವ ಜೈಲಿನಿಂದ ಪಡೆದೆ. ಭಾಷಣ ಹಾಗೂ ಇತರ ಸಕ್ರಿಯ ಚಟುವಟಿಕೆಗಳು ನಮ್ಮ ಹೋರಾಟಕ್ಕೆ ಇನ್ನಷ್ಟು ಇಂಬು ನೀಡಿದ್ದವು ಎಂದು ಅಂದಿನ ದಿನಗಳ ಮೆಲುಕು ಹಾಕುತ್ತಾರೆ ಶೆಟ್ಟರು. ಆದರೆ ಅವರ ಹೋರಾಟ ಮಾತ್ರ ಮುಂದುವರಿಯುತ್ತಲೇ ಇದೆ...
ಎಂಬತ್ತೊಂದರ ಹರೆಯದ ಚನ್ನಪ್ಪಗೌಡ ನವಲಗುಂದ ತಾಲ್ಲೂಕಿನ ಸಿರಕೊಲ ಗ್ರಾಮದವರು. ಇನ್ನು ಕೋಲಾರದ ಕೆ.ಜಿ.ಎಫ್.ನ ಅರುಲ್ದಾಸ್ ಕೂಡ ಎಂಬತ್ತರ ಗಡಿ ದಾಟಿದ ವಯೋವೃದ್ಧ ಸ್ವಾತಂತ್ರ್ಯ ಸೇನಾನಿ. ಇವರಿಬ್ಬರೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತು ದೇಶಕ್ಕಾಗಿ ಅರ್ಪಿಸಿಕೊಂಡ ಹಿರಿಯರು.
ಹೀಗೆ ಈ ಹಿರಿಯರ ಬದುಕಿನಲ್ಲಿ ಇಣುಕು ನೋಟ ಹರಿಸಿದಾಗ ಮಾತ್ರ ಇವರೆಷ್ಟು ಅಮೂಲ್ಯ ಸಂಪತ್ತು ಎನ್ನುವುದು ಅರ್ಥವಾಗುತ್ತದೆ. ಆದರೆ, ಚಹಾಕೂಟದ ಹೆಸರಲ್ಲಿ ಅವರನ್ನು ಹೀಗೆ ಮತ್ತೊಂದು 'ಸ್ವಾತಂತ್ರ್ಯ' ಹೋರಾಟಕ್ಕೆ ಇಳಿಸಿದ್ದು ಮಾತ್ರ ವಿಪರ್ಯಾಸ ಎಂದೇ ಹೇಳಬೇಕು. ಯಾವುದೋ ಒಂದು ಸಂಪ್ರದಾಯದ ಹೆಸರಲ್ಲಿ ಅಂತಹ ವಯೋವೃದ್ಧ ಹೋರಾಟಗಾರರನ್ನು, ಅವರದೇ ಖರ್ಚಿನಲ್ಲಿ ರೈಲು ಹತ್ತಿಸುವ ಈ ವಿಪರ್ಯಾಸಕ್ಕೆ ಯಾರನ್ನು ಹೊಣೆ ಮಾಡಬೇಕು? ಅದೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರಕ್ಕೆ ಸೇರಿದ 104 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹೀಗೆ ನಡೆಸಿಕೊಂಡಿದ್ದು ಸಂಸ್ಕೃತಿ ವಾರಸುದಾರರಿಗೆ ಶೋಭೆ ತರುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಇದು ನಿಮಗೆ ಅರ್ಥವಾದೀತೆ?
Wednesday, 17 September 2008
ಓಸಿಯನ್ 'ಟಾಕೀಸ್'ನಲ್ಲಿ 'ಗುಲಾಬಿ'ಯ ಕಂಪು
ಅದು ನವದೆಹಲಿಯ ಸಿರಿಫೋರ್ಟ್ ಸಾಂಸ್ಕೃತಿಕ ಸಮುಚ್ಛಯ. ಅಲ್ಲಿ ಜಪಾನ್, ಕೊರಿಯಾ, ಇಸ್ರೇಲ್, ಪಾಕಿಸ್ತಾನ, ಶ್ರೀಲಂಕಾ, ಅಮೆರಿಕ, ಇಂಡೋನೇಷಿಯಾ, ಮೊರೊಕ್ಕೊ, ಈಜಿಪ್ಟ್, ಹಾಂಗ್ಕಾಂಗ್, ಸಿರಿಯಾ, ಫ್ರಾನ್ಸ್, ಭಾರತ ಸೇರಿದಂತೆ ಹತ್ತಾರು ದೇಶಗಳ 200ಕ್ಕಿಂತಲೂ ಅಧಿಕ ಚಲನಚಿತ್ರಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಕಲಾತ್ಮಕತೆಯಲ್ಲಿ ಅವೆಲ್ಲಾ ಒಂದಕ್ಕಿಂತ ಒಂದು ಹೆಚ್ಚೇ ಎನ್ನಿ. ಜುಲೈ 10ರಿಂದ ಆರಂಭವಾಗಿದ್ದ ಸಿನಿಮಾ ಉತ್ಸವದಲ್ಲಿ ಬರೀ ಚಿತ್ರಗಳು ಮಾತ್ರವಲ್ಲ ನಾನಾ ದೇಶಗಳ, ಬಗೆಬಗೆಯ ಭಾಷೆಯ ಜನರು ನೆರೆದಿದ್ದರು. ಇಂಗ್ಲಿಷ್ ಬಾರದ ಅದೆಷ್ಟೋ ದೇಶದ ಜನರೂ ಇದ್ದುದ್ದರಿಂದ 'ಸಾಮಾನ್ಯ ಸಂವಹನ ಭಾಷೆ'ಯಾಗಲು ಇಂಗ್ಲಿಷ್ಗೆ ಕೂಡಾ ಅಲ್ಲಿ ಕಷ್ಟವೇ ಆಗಿತ್ತು. 'ಓಸಿಯನ್ಸ್ ಸಿನಿಫ್ಯಾನ್ ಚಲಚಿತ್ರೋತ್ಸವ' ಅಂದರೆ ಹಾಗೆಯೇ. ಅಲ್ಲಿ ಭಾಷೆಯ ಗಡಿ ಇಲ್ಲ; ಇದ್ದಿದ್ದರೆ ಕನ್ನಡ ಈ ಚಿತ್ರೋತ್ಸವದಲ್ಲಿ ಮೆರೆಯುವ ಸಾಧ್ಯತೆಯಿತ್ತೇ?
ಈ ಬಾರಿಯ 10ನೇ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ' ಕೂಡಾ ವಿಶೇಷತೆ ಮೆರೆಯದೆ ಇರಲಿಲ್ಲ. ಆದರೆ ಕನ್ನಡಿಗರಾದ ನಮಗೆ ಎಲ್ಲಕ್ಕಿಂತ ವಿಶೇಷವಾಗಿ ಕಂಡದ್ದು, ಕನ್ನಡದ ಇಬ್ಬರು ಪ್ರತಿಭಾವಂತರು ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದದ್ದು.
'ಗಿರೀಶ್ ಕಾಸರವಳ್ಳಿ' ಅವರ 'ಗುಲಾಬಿ ಟಾಕೀಸ್' ಭಾರತೀಯ ಚಿತ್ರಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿಗೆ ಪಾತ್ರವಾಯಿತು. ಕಾಸರವಳ್ಳಿ ಚಿತ್ರ ಅಂದಮೇಲೆ ಪ್ರಶಸ್ತಿ ಸಿಗದೆ ಇರುವುದು ಹೇಗೆ ಹೇಳಿ? ಈ ಮೊದಲೇ ಅವರ ಹಿಂದಿನ ಕೆಲವು ಚಿತ್ರಗಳಿಗೆ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರಕಿದ್ದವು. ಈಗ 'ಗುಲಾಬಿ ಟಾಕೀಸ್'ನ ಸರದಿ. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದವರು ತಮ್ಮ ಅದ್ಭುತ ನಟನಾ ಶಕ್ತಿಯ ಮೂಲಕ ಕನ್ನಡಿಗರ ಮನೆ-ಮನಗಳನ್ನು ಗೆದ್ದಿರುವ ಹಿರಿಯ ನಟಿ ಉಮಾಶ್ರೀ.
ಸಿರಿಫೋರ್ಟ್ನಲ್ಲಿ 'ಗುಲಾಬಿ ಟಾಕೀಸ್' ಪ್ರದರ್ಶನಗೊಂಡಾಗ ಚಿತ್ರ ವೀಕ್ಷಿಸಲು ಬೆರಳೆಣಿಕೆಯಷ್ಟು ಕನ್ನಡಿಗರು (ಇತರ ಭಾಷಿಗರನ್ನು ಹೊರತುಪಡಿಸಿ) ಕೂಡಾ ಇರಲಿಲ್ಲ. ಆದರೆ ಕಾಸರವಳ್ಳಿ ಅವರು ತೆರೆಯ ಮೇಲೆ ಮೂಡಿಸಿದ ದೃಶ್ಯಕಾವ್ಯ ಆಸ್ವಾದಿಸಲು ಇತರ ಭಾಷಿಕರಿಗೆ ಯಾವುದೇ ಅಡ್ಡಿಯಾಗಲಿಲ್ಲ.
11 ದಿನಗಳ ಕಾಲ ನವದೆಹಲಿಯ ಸಿರಿಫೋರ್ಟ್ನಲ್ಲಿ ನಡೆದ ಚಿತ್ರೋತ್ಸವಕ್ಕೆ ತೆರೆ ಎಳೆಯುವ ದಿನದ ಆ ಸುಂದರ ಸಂಜೆಯಂದು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರಶಸ್ತಿ ಪಡೆದ ಚಿತ್ರದ ನಿರ್ಮಾಪಕ ಬಸಂತ್ ಕುಮಾರ್ ಪಾಟಿಲ್ ಸಂತಸ ಹಂಚಿಕೊಂಡರು. "ಚಿತ್ರಕ್ಕೆ ಪ್ರಶಸ್ತಿ ದೊರಕಿದ್ದು ನಿಜವಾಗಿಯೂ ಖುಷಿ ತಂದಿದೆ. ನಮ್ಮೆಲ್ಲರ ಪರಿಶ್ರಮಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರು ಚಿತ್ರ ಮೆಚ್ಚಿದರು. ಪ್ರಶಸ್ತಿಗಿಂತ ಜನರ ಪ್ರಶಂಸೆಗಳು ನನಗೆ ಸಂತಸ ನೀಡಿದೆ" ಎಂದು ನುಡಿದರು.
ಚಿತ್ರದ ತಂತ್ರಜ್ಞರಾದಿಯಾಗಿ ಎಲ್ಲರೂ ಹೇಳುವಂತೆ, ಪ್ರಧಾನ ಭೂಮಿಕೆಯಲ್ಲಿರುವ ಉಮಾಶ್ರೀ ಅವರ ನಟನೆಯಂತೂ ಅತ್ಯದ್ಭುತ. ಕರಾವಳಿಯ ಮೀನುಗಾರ ಕುಟುಂಬದ ಮುಸ್ಲಿಂ ಮಹಿಳೆ ಗುಲಾಬಿ (ಗುಲ್ನಾಬಿ) ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ಮುಗ್ಧತೆ ಮತ್ತು ಗಾಂಭೀರ್ಯ ಮೇಳೈಸಿದ ಪಾತ್ರವನ್ನು ನಿರ್ವಹಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಅವರ ಆ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ದೊರಕಿದೆ. ಕಾಸರವಳ್ಳಿ ಅವರ ಹಿಂದಿನ ಹಲವು ಚಿತ್ರಗಳಲ್ಲಿದ್ದಂತೆ ಇಲ್ಲಿ ಕೂಡ ಮಹಿಳಾ ಪ್ರಾತಿನಿಧ್ಯವೇ ಎದ್ದು ಕಾಣುತ್ತದೆ. ಎಂತಹ ಸಂಕಷ್ಟದ ಸಂದರ್ಭವನ್ನೂ ನಿಭಾಯಿಸುವ ತಾಕತ್ತು ಮಹಿಳೆಗೆ ಕರಗತ ಎಂಬುದನ್ನು 'ಗುಲಾಬಿ' ಪಾತ್ರದ ಮೂಲಕ ನಿರೂಪಿಸಿದ್ದಾರೆ. ಸಂಪೂರ್ಣ ಸಿನಿಮಾ 'ಕುಂದಗನ್ನಡ'ದಲ್ಲಿದ್ದರೂ, ಉಮಾಶ್ರೀ ಸೇರಿದಂತೆ ಇತರ ನಟರ ಸಂಭಾಷಣೆ ನವಿರಾಗಿ ಮೂಡಿಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, "ಇಂದು ನನಗೆ ಈ ಪ್ರಶಸ್ತಿ ಬಂದಿದೆ ಎಂದರೆ ಅದಕ್ಕೆ ನಿರ್ದೇಶಕರೇ ಕಾರಣ. ಇಡೀ ಕರ್ನಾಟಕದ ಜನತೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ" ಎಂದಾಗ ಅವರ ಮೊಗದಲ್ಲಿ ಸಂತೃಪ್ತಿಯ ಕಳೆ ಎದ್ದು ಕಾಣುತ್ತಿತ್ತು.
ಗುಲಾಬಿ ಪಾತ್ರದ ಕುರಿತು ಮಾತನಾಡಿದ ಕಾಸರವಳ್ಳಿ ಅವರು, "ಗುಲಾಬಿಯ ಒಂಟಿತನ, ಪ್ರೇಮ-ಪ್ರೀತಿಯ ಹಪಹಪಿಯನ್ನು ಇಲ್ಲಿ ಬಿಂಬಿಸಲಾಗಿದೆ. ಒಂದು ಯಂತ್ರದ (ಟಿವಿ) ಮೂಲಕ ಆಕೆ ಇಡೀ ಸಮುದಾಯವನ್ನು ಆಕರ್ಷಿಸುತ್ತಾಳೆ. ಹೀಗೆ ಆಕೆ ತನ್ನ ಗಂಡನ ಪ್ರೀತಿ, ಊರಿನ ಪ್ರೀತಿ, ಸಮುದಾಯದ ಪ್ರೀತಿಗೂ ಪಾತ್ರಳಾಗುತ್ತಾಳೆ. ಆದರೆ ಅದೇ ಯಂತ್ರ ಸಮಾಜ ವಿಭಜನೆಗೂ ಇಲ್ಲಿ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾನು 'ಇಮೇಜ್ ಮೇಕಿಂಗ್' ಪ್ರಕ್ರಿಯೆಯ ರಾಜಕೀಯತೆಯನ್ನು ಜನರಿಗೆ ತೋರಿಸುವ ಯತ್ನ ಮಾಡಿದ್ದೇನೆ" ಎಂದು ಹೇಳುತ್ತಾರೆ.
ಕೇವಲ ಗುಲಾಬಿಯ ನೋವು-ನಲಿವುಗಳು ಮಾತ್ರವಲ್ಲ, ಹಳ್ಳಿಯ ಜನರ ಹಾಗೂ ಅವರ ಕೌಟುಂಬಿಕ ಬದುಕಿನ ಚಿತ್ರಣವನ್ನು ಕಾಸರವಳ್ಳಿ ಅವರು ನೈಜತೆಯಿಂದ ಚಿತ್ರಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತ ಪುರುಷರಿಗೆ ಕೌಟುಂಬಿಕ ಜೀವನ ನಿಭಾಯಿಸಲಾಗದೆ ಸಂಕಷ್ಟ ಎದುರಾಗುವುದು, ಪತ್ನಿ ಹಾಗೂ ಮಕ್ಕಳು ಬಡತನದ ಬೇಗೆಯಲ್ಲಿ ಸಿಲುಕಿ ಒದ್ದಾಡುವುದು, ಹಾಗೇ ಆ ಸಂದರ್ಭದಲ್ಲಿ ವಾಸಣ್ಣ ಅಥವಾ ಸುಲೈಮಾನ್ ಪರವಾಗಿ ದುಡಿಯುವುದೋ ಎಂಬ ತುಮುಲಗಳು ಗಂಡಂದಿರ ಮನದಲ್ಲಿ ಸೃಷ್ಟಿಯಾಗುವಂಥ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಕಾಸರವಳ್ಳಿ ಯಶಸ್ವಿಯಾಗಿದ್ದಾರೆ.
ಚಿತ್ರದುದ್ದಕ್ಕೂ ಜಾಗತೀಕರಣದ ಪರಿಣಾಮಗಳು ಸೂಚ್ಯವಾಗಿ ಒಡಮೂಡಿದೆ. ಇದರ ಜೊತೆಗೆ ದುಬೈನಲ್ಲಿ ನೆಲೆಸಿದ್ದು, ಹಳ್ಳಿಯಲ್ಲಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದ ಸುಲೈಮಾನ್ ಹಾಗೂ ಅದೇ ಹಳ್ಳಿಯಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ನಿರತನಾಗಿದ್ದ ವಾಸಣ್ಣ ಇವರಿಬ್ಬರಿಂದಲೂ ಹಳ್ಳಿ ಜನರು ಶೋಷಣೆಗೊಳಗಾಗುವುದನ್ನು ವಿವಿಧ ಸನ್ನಿವೇಶಗಳಲ್ಲಿ ತೆರೆದಿಡಲಾಗಿದೆ.
ತಮ್ಮ ಪರಿಧಿಯೊಳಗೆ ಬದುಕನ್ನು ಕಂಡುಕೊಳ್ಳಲಾರದ ಮಾನವನ ಅನಿಶ್ಚಿತತೆಯನ್ನು ಬಿಂಬಿಸುವುದರ ಜೊತೆಗೆ ಹಳ್ಳಿಯಲ್ಲಿನ ಅತೃಪ್ತಿ ಮತೀಯ ಸಂಘರ್ಷಕ್ಕೆ ಕಾರಣವಾಗುವ ಬಗೆಯನ್ನು ಚಿತ್ರದಲ್ಲಿ ಕಾಣಬಹುದು. "ಒಂದು ಸಂಕೀರ್ಣವಾದ ಚಿತ್ರಕಥೆ ಬರೆದು, ಸಮಾಜದ ಎಲ್ಲಾ ಮುಖಗಳನ್ನು ಅನಾವರಣಗೊಳಿಸಿದ್ದೇನೆ" ಎನ್ನುವ ಕಾಸರವಳ್ಳಿ, "ಇಲ್ಲಿ ಹಿಂದೂಗಳೆಲ್ಲರೂ ಕೆಟ್ಟವರು ಅಥವಾ ಒಳ್ಳೆಯವರು ಹಾಗೂ ಮುಸ್ಲಿಮರೆಲ್ಲಾ ಕೆಟ್ಟವರು ಅಥವಾ ಒಳ್ಳೆಯವರು ಎಂದು ಚಿತ್ರಿಸಲಾಗಿಲ್ಲ. ಗುಲಾಬಿಯನ್ನು ಊರಿನಿಂದ ಹೊರ ಅಟ್ಟಿದ್ದು ಆರ್ಥಿಕ ಕಾರಣದಿಂದಾಗಿಯೇ ವಿನಾ ಆಕೆ ಮುಸ್ಲಿಂ ಎಂದಲ್ಲ. ಆಕೆಯ ಗಂಡನೂ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಆಕೆಯನ್ನು ಓಡಿಸುವ ಹಿಂದೆ ಹಳ್ಳಿಯ ಆರ್ಥಿಕತೆಯ ಕಾರಣವೂ ಇದೆ. ಮತ್ತೊಂದು ವಿಚಾರ ಏನೆಂದರೆ ನೋಡುಗರು ಮುಸ್ಲಿಮರಿಂದಲೇ ಇಂದು ಜಗತ್ತಿನಲ್ಲಿ ಎಲ್ಲಾ ಅನ್ಯಾಯಗಳು ನಡೆಯುತ್ತಿವೆ ಎಂದು ಯೋಚಿಸಿದರೆ ಅವರಿಗೆ ಈ ಸಿನಿಮಾವೇ ಒಂದು ದೊಡ್ಡ ಅಪರಾಧವಾಗಿ ಕಾಣಬಹುದು' ಎಂದು ವಿವರಣೆ ನೀಡುತ್ತಾರೆ.
ಒಟ್ಟಾರೆ ಕನ್ನಡ ಸಿನಿಮಾವೊಂದು ಇಂದು ಮತ್ತೊಮ್ಮೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ್ದಾರೆ ಗಿರೀಶ್ ಕಾಸರವಳ್ಳಿ. ಕಾಸರವಳ್ಳಿ ಅವರ ಚಿತ್ರಕ್ಕೆ ಅಂತರ್ ರಾಷ್ಟ್ರೀಯ ಪ್ರಶಸ್ತಿ ಲಭಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲದಿದ್ದರೂ, ಉಮಾಶ್ರೀ ಅವರ ಪರಿಶ್ರಮಕ್ಕೆ ತಕ್ಕ ಫಲವೆಂಬಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರೆತಿದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅಂದಹಾಗೆ 'ಓಸಿಯನ್ಸ್ ಸಿನಿಫ್ಯಾನ್' ಚಲಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ತೀರ್ಪುಗಾರರು ಹಾಗೂ ಸಿನಿಮಾ ಪ್ರಿಯರ ಮನಮೆಚ್ಚಿದ 'ಗುಲಾಬಿ ಟಾಕೀಸ್' ಕಲಾತ್ಮಕ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಬಾಚಿಕೊಂಡಿದ್ದರೂ ಚಿತ್ರ ವೀಕ್ಷಿಸುವಾಗ ಇದು ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ತೋರುವುದು ಮಾತ್ರ ನಿಜ.
------------------------------------------------------------------------------------------------------------------------
ಕಾಸರವಳ್ಳಿ ಅವರು ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ...
ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ?
ಸಿನಿಮಾ ಮಾಡಿದಾಗ ಅದು ಚೆನ್ನಾಗಿದೆಯೋ ಅಥವಾ ಕೆಟ್ಟದಾಗಿದೆಯೋ ನನಗೆ ಗೊತ್ತಾಗುವುದಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೂ, ಇನ್ನು ಕೆಲವರು ಅತ್ಯದ್ಭುತವಾಗಿದೆ ಎಂದು ಬೆನ್ನು ತಟ್ಟಿದರು. ಪ್ರಕಾಶ್ ಬೆಳವಾಡಿ, ಜಿ.ಎಸ್. ಭಾಸ್ಕರ್ ಮತ್ತು ಪಿ. ಶೇಷಾದ್ರಿ ಅವರು ಸೇರಿದಂತೆ ಕೆಲವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆ ನಂತರ ಚಲನಚಿತ್ರೋತ್ಸವಗಳಿಗೂ ನಾನು ಈ ಚಿತ್ರವನ್ನು ಕಳುಹಿಸಿದೆ. ಖ್ಯಾತ ವಿಮರ್ಶಕರಾದ ವಿದ್ಯಾರ್ಥಿ ಚಟರ್ಜಿ, ಪ್ರಸನ್ನ ರಾಮಸ್ವಾಮಿ ಅವರು ಹಲವು ವರ್ಷಗಳ ನಂತರ ಅತ್ಯದ್ಭುತ ಚಿತ್ರ ನೀಡಿದ್ದೀರಿ ಎಂದು ಶ್ಲಾಘಿಸಿದರು. ಮೊದಲ ಸ್ಕ್ರೀನಿಂಗ್ ನೋಡಿದ ನಂತರ ಕೆಲವು ಪ್ರೇಕ್ಷಕರಿಂದ ಇವತ್ತಿನ ಸಂದರ್ಭಕ್ಕೆ ಚಿತ್ರ ಯೋಗ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಅಂದೇ ಉಮಾಶ್ರೀ ಅವರಿಗೆ ಪ್ರಶಸ್ತಿ ಬರಬಹುದೇನೋ ಅಂದುಕೊಂಡೆ.
ಕರಾವಳಿ ಪ್ರದೇಶದಲ್ಲಿ ಚಿತ್ರ ಮಾಡುವಾಗ ಎಂತಹ ಸವಾಲಿತ್ತು?
ನಿಜ ಹೇಳಬೇಕೆಂದ್ರೆ ನಮಗೆ ಕರಾವಳಿ ಪ್ರದೇಶದ ಬಗ್ಗೆ ಹೆಚ್ಚಿನ ಪರಿಚಯ ಇರಲಿಲ್ಲ. ಇಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಂಡು ಚಿತ್ರ ಮಾಡುವುದು ಸವಾಲೇ ಆಗಿತ್ತು.
'ಗುಲಾಬಿ' ಪಾತ್ರಕ್ಕೆ ಉಮಾಶ್ರೀ ಅವರ ಆಯ್ಕೆಗೆ ಕಾರಣ?
ನಮ್ಮಲ್ಲಿ ಕೆಲವರು ಉಮಾಶ್ರೀ ಅವರು ಕೇವಲ ಕಾಮಿಡಿ ಪಾತ್ರಕ್ಕೆ ಮಾತ್ರ ಯೋಗ್ಯರು ಎಂದು ಅವರ ಹಿನ್ನೆಲೆ ತಿಳಿಯದೆ ವಾದಿಸುತ್ತಾರೆ. ಒಳ್ಳೆ ಪಾತ್ರ ಮಾಡಿಕೊಂಡು ಬಂದಿದ್ದರೂ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿದ್ದರೆ ಅದು ನಿರ್ದೇಶಕನ ತಪ್ಪು. ನಾನು ಮೊದಲು ನೋಡುವುದೇನೆಂದರೆ ಭಾವನೆಯನ್ನು ಹೊರ ಚೆಲ್ಲಬಹುದಾದ ಮುಖಲಕ್ಷಣ ಹಾಗೂ ಬಾಡಿ ಲಾಂಗ್ವೇಜ್. ಜೊತೆಗೆ ರಂಗಭೂಮಿ ಹಿನ್ನೆಲೆ ಹಾಗೂ ಪಾತ್ರ ನಿಭಾಯಿಸುವ ಚಾಕಚಕ್ಯತೆ ಕೂಡ ಉಮಾಶ್ರೀ ಅವರಲ್ಲಿತ್ತು.
ಚಿತ್ರ ಸಂಪೂರ್ಣವಾಗಿ 'ಕುಂದಗನ್ನಡ' ಭಾಷೆಯಲ್ಲಿದೆ. ಕಲಾವಿದರಿಗೆ ಈ ಭಾಷೆ ಮೊದಲೇ ತಿಳಿದಿತ್ತೇ?
ಚಿತ್ರದಲ್ಲಿ ನಾಲ್ಕು ನಟರು ಬಿಟ್ಟರೆ ಉಳಿದವರು ಕುಂದಾಪುರದವರೇ. ಎಂ.ಡಿ. ಪಲ್ಲವಿ ಅವರು ನೇತ್ರುವಿನ ಪಾತ್ರದಲ್ಲಿದ್ದರೆ, ಕೆ.ಜಿ. ಕೃಷ್ಣಮೂರ್ತಿ ಅವರು ಗುಲಾಬಿ ಗಂಡನ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಕೆಲಸ ಸುಲಭವಾಗಲು ಭಂಡಾರ್ಕ್ಸರ್ ಕಾಲೇಜಿನ ಹುಡುಗಿಯೊಬ್ಬಳೂ ಸಹಾಯ ಮಾಡಿದಳು. ಸಂಭಾಷಣೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಆಕೆ ನಟರಿಗೆ ಸತತವಾಗಿ ಹೇಳಿಕೊಡುತ್ತಿದ್ದಳು. ಇನ್ನು ಡಬ್ಬಿಂಗ್ ಸಮಯದಲ್ಲಿ ನಟ ರಘು ಪಾಂಡೇಶ್ವರ್ ಕೂಡ ಯಾವ ರೀತಿಯಲ್ಲಿ ಮಾತನಾಡಬೇಕೆಂದು ತಿಳಿಹೇಳುತ್ತಿದ್ದರು. ಇಲ್ಲಿ ಒಂದು ಮಾತ್ರ ಸ್ಪಷ್ಟ. ಭಾಷೆ ಬಗ್ಗೆ ಎಚ್ಚರ ಇದ್ದವರು ಯಾವುದೇ ಭಾಷೆಯನ್ನು ಕೂಡ ಬೇಗ ಕಲಿಯುತ್ತಾರೆ. ಎಚ್ಚರ ಇಲ್ಲದಿದ್ದರೆ ಕೊನೆಯವರಿಗೂ ಅದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಒಟ್ಟಾರೆ 'ಇಗೋ' ಬಿಟ್ಟು ನಿಜ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ.
'ಗುಲಾಬಿ ಟಾಕೀಸ್'ಗೆ ಪ್ರೇರಣೆ...?
2006ರ ಓಸಿಯನ್ ಚಲನಚಿತ್ರೋತ್ಸವದಲ್ಲಿ ನನ್ನ 'ನಾಯಿ ನೆರಳು' ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು ಹೊರಗಿನ ಲಾಬಿಯಲ್ಲಿ ಕುಳಿತಿದ್ದೆ. ಹೀಗೆ ಯೋಚಿಸುತ್ತಿದ್ದಾಗ ಥಟ್ಟನೆ ಮೀನುಗಾರರ ಸಮಸ್ಯೆ ಬಗ್ಗೆ ಚಿತ್ರ ಮಾಡಬೇಕೆಂದು ಲೆಕ್ಕಹಾಕಿದೆ. 'ಇಮೇಜ್ ಮೇಕಿಂಗ್' ಹೇಗೆ ನಮ್ಮಲ್ಲಿ ಪೂರ್ವಸಿದ್ಧವಾದ ನಂಬಿಕೆ ಹಾಗೂ ಅನಿಸಿಕೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ತೋರಿಸುವ ಉದ್ದೇಶದಿಂದ 'ಗುಲಾಬಿ ಟಾಕೀಸ್'ನ್ನು ಮಾಡುವ ಕೆಲಸಕ್ಕೆ ಕೈಹಾಕಿದೆ.
ನಿಮ್ಮ ಹೆಚ್ಚಿನ ಎಲ್ಲಾ` ಚಿತ್ರಗಳಂತೆ ಇದೂ ಸ್ತ್ರೀ ಪ್ರಧಾನ ಚಿತ್ರ.... ಇದಕ್ಕೆ ನಿರ್ದಿಷ್ಟ ಕಾರಣವೇನಾದರು ಇದೆಯೇ?
ನಿರ್ದಿಷ್ಟ ಕಾರಣ ಅಂತ ಹೇಳುವುದು ಕಷ್ಟ. ಅವರ ತಾಳ್ಮೆಯ ಶಕ್ತಿ, ಸಮಸ್ಯೆ ನಿರ್ವಹಿಸುವ ರೀತಿ, ಸೋಲಬಾರದು ಅನ್ನೋ ಒತ್ತಾಸೆಯಿಂದ ಅವರು ಗೆಲ್ಲುತ್ತಾ ಸಾಗುವುದು ನನಗೆ ಇಷ್ಟವಾಗುತ್ತವೆ. ಗುಲಾಬಿಯೂ ಹಾಗೇ. ಊರಿನಿಂದ ಆಕೆಯನ್ನು ಹೊರದಬ್ಬಿದರೂ, 'ಎಲ್ಲಿಯ ತನಕ ಹೆಂಗಸರು ಬಸಿರಾಗುತ್ತಾರೋ ಅಲ್ಲಿಯತನಕ ನನ್ನ ಸೂಲಗಿತ್ತಿಯ ಕೆಲಸಕ್ಕೆ ದಕ್ಕೆ ಬಾರದು. ನಾನು ಹೆದರೋದಿಲ್ಲ, ಬೇರೆ ಕಡೆ ಹೋಗಿ ನನ್ನ ಕೆಲಸ ಮಾಡಿ ಬದುಕುತ್ತೇನೆ' ಎಂದು ಧೈರ್ಯದಿಂದ ನುಡಿಯುತ್ತಾಳೆ. ಈ ಕೆಚ್ಚು ನನ್ನ ಮನ ತಟ್ಟಿತು.
