Monday 27 April 2009

“ಕ್ಯಾಬರೇ ಡ್ಯಾನ್ಸ್”ಗೆ ಬೆವೆತು ಒದ್ದೆಯಾಗಿದ್ದೆ!!


‘ಕ್ಯಾಬರೇ’ ಅನ್ನೋ ಪದಕ್ಕೂ ನನಗೂ ಅವಿನಾಭಾವ ನಂಟು. ಹೈಸ್ಕೂಲ್‌ಗೆ ಹೋಗುತ್ತಿದ್ದ ಸಮಯದಲ್ಲಿ ಟಿವಿಯಲ್ಲಿ ರಾಜ್‌ಕುಮಾರ್ ಬಾಂಡ್ ಸಿನಿಮಾಗಳು ನೋಡಿದಾಗ ಅವುಗಳಲ್ಲಿ ಕ್ಯಾಬರೇ ನೃತ್ಯಗಳಿರುತ್ತಿದ್ದವು. ಆ ವಯಸ್ಸಲ್ಲಿ ಅಂತದ್ದನ್ನು ತಪ್ಪದೇ ನೋಡುತ್ತಲೂ ಇದ್ದೆ. ಈಗಲೂ ನೋಡುವುದಿಲ್ಲ ಎಂದಲ್ಲ;

ಅದಿರಲಿ, ೯ನೇ ಕ್ಲಾಸ್‌ನಲ್ಲಿದ್ದಾಗ ನನ್ನ ಈ ಕ್ಯಾಬರೇ ಪುರಾಣ ದೊಡ್ಡ ಸುದ್ದಿಯೇ ಮಾಡಿತ್ತು. ಕನ್ನಡ ತರಗತಿ ನಡೆಯುತ್ತಿದ್ದ ಸಮಯ. ಮಧ್ಯಾಹ್ನ ೩ ಗಂಟೆಗೆ ಕ್ಲಾಸ್ ಆರಂಭವಾಗಿತ್ತು. ಶಾಲೆಯಲ್ಲಿ ಕನ್ನಡ ಮಾತಾಡುವುದಕ್ಕೆ ಇದ್ದ ಏಕೈಕ ಪಿರಿಡ್ ಅದು. ಉಳಿದ ಕ್ಲಾಸ್‌ನಲ್ಲೆಲ್ಲಾ ನಾವು ಇಂಗ್ಲೀಷ್ ಮಾತಾಡಬೇಕಾದುದು ಕಡ್ಡಾಯವಾಗಿತ್ತು. ನಮ್ಮ ಕನ್ನಡ ಮಿಸ್ ಪಾಠ ಮಾಡುತ್ತಿದ್ದರು. ಆಗ ನಮ್ಮ ಸ್ಕೂಲ್ ಡೇನೂ ಹತ್ತಿರದಲ್ಲಿತ್ತು. ಪಾಠವನ್ನು ಮಧ್ಯದಲ್ಲಿ ನಿಲ್ಲಿಸಿದ ಮಿಸ್ ಒಂದೇ ಬಾರಿ ಸ್ಕೂಲ್ ಡೇ ಬಗ್ಗೆ ಮಾತಾಡತೊಗಿದರು. ನಮಗೆ ಸಿಕ್ಕಿದ್ದೇ ಅವಕಾಶ ಎಂದು ನಾವು ಹರಟೆ ಹೊಡೆಯಲಾಂಭಿಸಿದೆವು. ನಾನು ಎಡಭಾಗದ ಮುಂದಿನ ಬೆಂಚ್‌ನಲ್ಲಿ ಕೂತಿದ್ದೆ. ನಾನು ಪಾಠದ ಮಧ್ಯೆ ಡಿಸ್ಟರ್ಬ್ ಮಾಡುತ್ತಿರುತ್ತೇನೆ ಎಂದೇ ಮುಂದಿನ ಬೆಂಚ್‌ನಲ್ಲಿ ಕೂರಿಸಿದ್ದರು. ನನ್ನ ಜೊತೆ ಅನೀಶ್ ಮತ್ತು ಅಭಿರಾಮ್ (ನನ್ನಂತೆಯೇ ‘ನಾಟಿ ಸ್ಟೂಡೆಂಟ್’ ಎನಿಸಿಕೊಂಡಿದ್ದವರು; ಅಭಿರಾಮ್ ನಮ್ಮಷ್ಟು ನಾಟಿ ಇರಲಿಲ್ಲ) ಕುಳಿತಿದ್ದರು.


ಇತ್ತ ಕನ್ನಡ ಮಿಸ್ “ಡ್ಯಾನ್ಸ್ ಟೀಮ್‌ನಲ್ಲಿರುವವರು ಕ್ಲಾಸ್ ಬಳಿಕ ಪ್ರಾಕ್ಟೀಸ್ ಮಾಡಿ ಬನ್ನಿ” ಎಂದು ಹುಡುಗಿಯರಿಗೆ ಹೇಳಿದರು. ನನ್ನದೇ ಲೋಕದಲ್ಲಿ ತೇಲುತ್ತಿದ್ದ ನನ್ನ ಮನಸ್ಸು ಒಮ್ಮೆಲೆ ನೆಟ್ಟಗಾಯಿತು. ಕಿವಿ ಅತ್ತ ಹೋಯಿತು. “ಯಾವ ಡ್ಯಾನ್ಸ್ ಮಿಸ್... ಯಾವ ಡ್ಯಾನ್ಸ್ ಮಿಸ್...” ಎಂದು ಕೆಲವು ಹುಡುಗರು ಮಿಸ್‌ನಲ್ಲಿ ಬೊಬ್ಬಿಟ್ಟು ಕೇಳಿದಾಗ ಮಿಸ್ “ಸೈಲೆಂಟ್... ಸೈಲೆಂಟ್” ಅಂದು ಬೊಬ್ಬಿಟ್ಟರು! ಸರಿ; ಎಲ್ಲರೂ ಸೈಲೆಂಟ್ ಆದದ್ದೇ ತಡ...ಮಿಸ್ ಇನ್ನೇನು 'ಸೋಲೋ ಡ್ಯಾನ್ಸ್' ಎಂದು ಹೇಳಬೇಕೆನ್ನುವಷ್ಟರಲ್ಲಿ...
ಅದೇನೋ ಗೊತ್ತಿಲ್ಲ...ನಾನು “ಕ್ಯಾಬರೇ ಡ್ಯಾನ್ಸ್” ಎಂದು ಜೋರಾಗಿಯೇ ಇಡೀ ಕ್ಲಾಸ್‌ಗೆ ಕೇಳುವಂತೆ ಬೊಬ್ಬಿಟ್ಟೆ..ಹತ್ತಿರ ಕೂತಿದ್ದ ಅನೀಶ್ ಮುಸಿ ಮುಸಿ ನಗುತ್ತಾ ನನ್ನ ತೊಡೆಗೇ ಒಂದು ಬಾರಿಸಿದ. “ಅಯ್ಯೋ ಎಂಥಾ ಅಧ್ವಾನವಾಯ್ತು” ಅಂದು ನಾನು ಅಲ್ಲೇ ಬೆವರಿ ಹೋದೆ..

ಈ ಕನ್ನಡ ಮಿಸ್‌ಗೆ ಕೋಪ ಮೂಗಿನ ತುದಿಗೇರಿತ್ತು. ಆಗಲೇ ಅವರ ಮೂಗು ಉದ್ದವಾಗಿ ಕಡು ಕೆಂಪಾಗಿತ್ತು! ನನಗಂತೂ ಮೈಯೆಲ್ಲಾ ನಡುಗಲು ಆರಂಭಿಸಿದ್ದೇ ತಡ... “ಸ್ಟ್ಯಾಂಡ್ ಅಪ್ ರಾಘವ” ಎಂದು ಮಿಸ್ ನನ್ನನ್ನು ದುರುಗುಟ್ಟಿಸಿ ನೋಡಿದರು. ತಗೋ...ಶುರುವಾಯ್ತು ಬೈಗುಳಗಳ ಸುರಿಮಳೆ... ಪೂರ್ತಿ ಪಿರಿಡ್ ಕೈಮೇಲೆ ಮಾಡಿ ನಿಲ್ಲಿಸಿದರು. ಮೊದಲೇ ಹೆದರಿ ಬೆವರಿದ್ದೆ...ಇದರ ಜೊತೆ ಕೈಯನ್ನೂ ಮೇಲೆ ಮಾಡಬೇಕು ಎಂದು ಪನಿಶ್‌ಮೆಂಟ್ ಬೇರೆ. ಹಾಗಾಗಿ ನನ್ನ ಕಂಕುಳುಗಳೂ ಬೆವೆತು ಒದ್ದೆಯಾಗಿ ಹೋಗಿದ್ದವು.

ಆದರೆ ಈ ಮಿಸ್ ಬೇರೆ ಮಿಸ್‌ಗಳಂತೆ ಬಟ್ಟೆ ಒಗೆದಂತೆ ಒಗೆಯಲಿಲ್ಲ. ಇನ್ನೇನು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದ ಹುಡುಗಿಯರು ಬೇರೆ ಕ್ಲಾಸ್‌ನಲ್ಲಿದ್ದರು. ಅವರ ಮಧ್ಯೆ...ಚೀ..ಚೀ..ಕ್ಯಾಬರೇ ಎಂದರೆ ಹೇಗಾಗಬೇಡ...!? ಅಂತೂ ನಾನು “ಕ್ಯಾಬರೇ” ಅಂದಿದ್ದು ಇನ್ನು ಏನೇನು ಫಜೀತಿಯನ್ನು ಸೃಷ್ಟಿಲಿದೆಯೋ ಎಂದು ಭಯಭೀತನಾಗಿದ್ದೆ. ಅತ್ತ ಅಪ್ಪ ಅಮ್ಮನ ಭಯ ಬೇರೆ.. ಎಲ್ಲಿಯಾದರೂ ಮನೆಯಲ್ಲಿ ಈ ಬಗ್ಗೆ ಹೇಳಿದರೆ...ಅನ್ನುವ ಭಯ...ಈ ಮಧ್ಯೆ ಕ್ಲಾಸ್‌ನಲ್ಲಿದ್ದ ಹುಡುಗಿಯರನ್ನೂ ಗಮನಿದೇ ಎನೋ ಅಸಭ್ಯವಾಯಿತೋ ಎಂದು ನಾಚಿಕೆಯೂ ಆಯಿತು.

ಸರಿ ಕ್ಲಾಸ್ ಮುಗಿಯಿತು... ಎಲ್ಲರೂ ನನ್ನನ್ನು ನೋಡಿ ನಕ್ಕರು...ಎನೋ ಒಂದು ಒಳ್ಳೆ ಎಂಟರ್‌ಟೈನ್‌ಮೆಂಟ್ ಕೊಟ್ಟೆ ಅನ್ನುವ ಹಾಗೆ...ನನಗಂತೂ ಪೇರೆಂಟ್ಸ್ ಮೀಟಿಂಗ್‌ನಲ್ಲಿ ಇದನ್ನೆಲ್ಲಾ ಹೇಳಿದರೆ ಏನು ಮಾಡುವುದು ಅನ್ನುವ ಚಿಂತೆಯಾದರೆ...ಇವರಿಗೆಲ್ಲಾ ಖುಷಿ...
ನಂತರ ನೇರ ಮಿಸ್ ಬಳಿ ಹೋದವನು “ಸಾರಿ ಮಿಸ್” ಅಂದೆ...ನಿಜವಾಗಲೂ ಮಿಸ್ ಪಾಪ...ನನಗೆ ಏನೂ ಹೇಳಿಲಿಲ್ಲ...ಇನ್ನು ಹಾಗೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರು.. ಓಹ್...ಅಬ್ಬಾ ಬದುಕಿದೆ..ಎಂದು ದೊಡ್ಡ ಉಸಿರು ಬಿಟ್ಟೆ ...ಖುಷಿಯಲ್ಲಿ ಉಬ್ಬಿ ಹೋದೆ...ನಗುತ್ತಲೇ ಮನೆಗೆ ಹೋದೆ...

(ಪೇರೆಂಟ್ಸ್ ಮೀಟಿಂಗ್‌ನಲ್ಲಿ ಸೋಷಿಯಲ್ ಮಿಸ್ ನನ್ನ ಇತಿಹಾಸ ಕೆದಕಿದ್ದು, ನಾನು ಅಪ್ಪನ ಮುಂದೆ ಗೊಳೋ ಎಂದು ಅತ್ತಿದ್ದು, ಅಪ್ಪನ ಮುಖ ಚಪ್ಪೆಯಾದದ್ದು... ಈ ಬಗ್ಗೆ ಮುಂದೆ ಹೇಳುತ್ತೇನೆ)
ಮೂತ್ರ ಬರುತ್ತಿದ್ದದ್ದು ಅರ್ಧಕ್ಕೆ ನಿಂತಿತು!!

ಅವು ನಾನು ಉಜಿರೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳು. ನಮ್ಮ ತರಗತಿಯ ‘ನಾಟಿ ಬಾಯ್ಸ್’ ಸೆಕ್ಷನ್‌ನಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿದ್ದ ನಾನು ಮಿಸ್ ಹಾಗೂ ಸರ್‌ಗಳ ಕೈಯಿಂದ ಬೈಗುಳಗಳನ್ನು ತಿನ್ನದ ದಿನಗಳೇ ಇರುತ್ತಿರಲಿಲ್ಲ. ಪಾಠ ಮಾಡುವಾಗ ಒಂದಲ್ಲಾ ಒಂದು ಕಮೆಂಟ್ ಪಾಸ್ ಮಾಡುತ್ತಾ ಅದರಲ್ಲೇ ತೃಪ್ತಿ ಪಡುತ್ತಿದ್ದ ನನಗೆ ಸಿಗುತ್ತಿದ್ದ ಮಾರ್ಕ್ಸ್ ನೋಡಿ ಮನೆಯಲ್ಲಿ ಮಾತ್ರವಲ್ಲ; ಮಿಸ್‌ಗಳ ಕೈಯಿಂದಲೂ ಸದಾ ಮಂಗಳಾರತಿ ತಪ್ಪುತ್ತಿರಲಿಲ್ಲ.

ಈ ಮಿಸ್‌ಗಳ ಪಾಠ ಕೇಳವುದೇ ಒಂದು ಮಹಾ ಬೋರಿಂಗ್ ಎನಿಸುತ್ತಿದ್ದಾಗ; ಇನ್ನಿವರು ಆನ್ ಸಂಡೆ ಐ ಆಮ್ ಟೇಕಿಂಗ್ ಸ್ಪೆಷಲ್ ಕ್ಲಾಸ್ ಎಂದರೆ ಎಷ್ಟು ಉರಿಯಬೇಡ...? ಆಯ್ತು ಮಿಸ್ ಹೇಳಿದ ಮೇಲೆ ಹೋಗಲ್ಲಾ ಅನ್ನೋಕಾಗುತ್ತಾ? ಹೋಗದಿದ್ದರೆ ಅಮ್ಮನ ಬೆತ್ತದ ರುಚಿ ತಪ್ಪಿಸಲಾಗುತ್ತಾ?


ಸರಿ, ಧರ್ಮಸ್ಥಳದಿಂದ ಬಸ್ಸು ಹತ್ತಿ ಉಜಿರೆಗೆ ಹೋಗಿ ಆ ಒಂದು ಸಂಡೆ ಕ್ಲಾಸಲ್ಲಿ ಕೂತದ್ದಾಯಿತು. ಶುರುವಾಯಿತು ಸೈನ್ಸ್ ಕ್ಲಾಸ್. ಮೊದಲೇ ಸದಾ ಆ ಮಿಸ್‌ನ ಕ್ಲಾಸ್ ಬೋರ್ ಅನಿಸ್ತಿತ್ತು. ಇನ್ನು ಸ್ಪೆಷಲ್ ಕ್ಲಾಸ್ ಅಂದ್ರೆ; ಅಯ್ಯೋ ಕೇಳೋದು ಬೇಡ... ಸಿಲೆಬಸ್ ಮುಗಿಸ್ಬೇಕು ಅನ್ನುವ ಭರದಲ್ಲಿ ಅವರಿದ್ದರೆ...ನಮ್ಮದೇ ಲೋಕದಲ್ಲಿ ನಾವೊಂದಿಷ್ಟು ಪೋಕ್ರಿಗಳು... ನಾನು ಯಾವತ್ತೂ ಪಾಠ ಕೇಳುವುದಿಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಯಾಕೆಂದರೆ ಅವರು ಕೇಳುವ ಒಂದು ಪ್ರಶ್ನೆಗೂ ನನ್ನಲ್ಲಿ ಉತ್ತರ ಇರುತ್ತಿರಲಿಲ್ಲ. ಆ ಸೈನ್ಸ್ ಕೂಡ ಎಷ್ಟು ಓದಿದ್ರೂ ನನ್ನ ಮಂಡೆಗೆ ಹತ್ತುತ್ತಿರಲಿಲ್ಲ.

ಹಾಗೇ ಪಾಠ ನಡೀತಾ ಇತ್ತು. ನಾನು ಮಧ್ಯದ ಸಾಲಿನ ನಾಲಕ್ನೇ ಬೆಂಚಿನಲ್ಲಿ ಕೂತಿದ್ದೆ. ನಾನು ಮತ್ತು ನನ್ನ ಪಕ್ಕ ಕೂತಿದ್ದವ ಏನೋ ದೀರ್ಘ ಸಂಭಾಷಣೆಯಲ್ಲಿ ತೊಡಗಿದ್ದೆವು. ನಾನು ಕಿಸ ಕಿಸ ನಗುತ್ತಲೂ ಇದ್ದೆ. ಇಷ್ಟು ಸಾಕಲ್ವಾ ಮಿಸ್‌ಗೆ...?
ರಾಘವ್ ಸ್ಟ್ಯಾಂಡ್ ಅಪ್...! ಒಮ್ಮೆ ತರಗತಿಯಲ್ಲಿ ಮೌನ.. ನಾನು ಯಾವತ್ತಿನಂತೆ ನಿಂತೆ..ಹೀಗೆ ನಿಂತು ಸಾಕಷ್ಟು ಅಭ್ಯಾಸವೂ ಇತ್ತು. ಆದರೆ ಈ ಬಾರಿ ಬೈಗುಳಗಳ ದಾಟಿ ಮಾತ್ರ ಬೇರೆಯದೇ ಆಗಿತ್ತು. ಅಬ್ಬಾ ಆ ಬೈಗುಳಗಳು ಹೇಗಿತ್ತು ಎಂದರೆ; ತರಗತಿಯಲ್ಲಿನ ನನ್ನ ಸಾಧನೆಗಳ ಇತಿಹಾಸವನ್ನೆಲ್ಲಾ ಒಂದೊಂದೆ ಹೆಕ್ಕಿ ತೆಗೆದು; ಒಳ್ಳೆ ಬಟ್ಟೆ ಒಗೆದ ಹಾಗೆ ಒಗೆದರು (ಆದರೆ ಕೊಳೆ ಮಾತ್ರ ಹೋಗದು ಎಂಬುದು ಅವರಿಗೆ ಗೊತ್ತಿರಲಿಲ್ಲವೇನೋ?). ನಾನು ಬಾಹುಬಲಿ ಮೂರ್ತಿಯಂತೆ ಉದ್ದಕ್ಕೆ ನಿಂತಿದ್ದೆ(ಬಟ್ಟೆ ಹಾಕಿದ್ದೆ). ಆದರೆ ಇವರ ಬೈಗಳು ಮಾತ್ರ ನಿಲ್ಲಲೇ ಇಲ್ಲ. ನಂಗೂ ಸಾಕಾಗಿ ಹೋಯಿತು. ನನ್ನ ಅಪ್ಪ ಅಮ್ಮ ಕೂಡ ಆ ರೀತಿ ಬೈದಿರಲಿಕ್ಕಿಲ್ಲ.

ಅಯ್ಯೋ ಸಾಕಪ್ಪಾ ಸಾಕು... “ನೀನು ಹಾಗೆ, ನೀನು ಹೀಗೆ...ನೀನೂ ಹಾಳಾಗುದಲ್ದೆ ಇದ್ದವರನ್ನೂ ಹಾಳು ಮಾಡ್ತ್ಯಾ..ಮೊನ್ನೆ ಎಕ್ಸಾಮ್‌ನಲ್ಲಿ ಮಾರ್ಕ್ ಎಷ್ಟು ಗೊತ್ತಾ ನಿಂಗೆ? ನಾವು ನಮ್ಮ ಎಲ್ಲಾ ಕೆಲಸ ಬಿಟ್ಟು ಬಂದು ನಿಮಗೆ ಒಳ್ಳೆದಾಗಲಿ (?) ಅಂತ ಸ್ಪೆಷಲ್ ಕ್ಲಾಸ್ ತಗೋಂಡ್ರೆ, ನೀನು ಮಾತ್ರ ಯಾವುದೇ ಚಿಂತೆ ಇಲ್ಲದೆ ಬೇರೆಯವರಿಗೂ ಉಪದ್ರ ಕೊಡ್ತ್ಯಲ್ಲಾ......” ಅಬ್ಬಾ.. ನನಿಗಂತೂ ಕಿವಿ ತೂತಾಗುತ್ತಿದೆಯೇನೋ ಅನ್ನಿಸಿತು.
ಆದರೆ ಅವರು ಒಂದು ಮಾತು ಹೇಳಿದಾಗಲಂತೂ ನನ್ನ ಎದೆ ಡವಕ್ಕಾಯಿತು.
“ನಾಡ್ದು ಪೇರೆಂಟ್ಸ್ ಮೀಟಿಂಗ್ ಬಂದಾಗ ನಿನ್ನ ಅಪ್ಪನತ್ರ ಮಾತಾಡ್ತೇನೇ...”
“ಅಯ್ಯೋ ದೇವರೇ ಬಂತಲ್ಲಾ ನನಗೆ ಕೇಡುಗಾಲ” ಎಂದು ಯೋಚಿಸುತ್ತಿದ್ದ ನನಗೆ ಆ ರಾತ್ರಿ ನಿದ್ದೆ ಕೂಡ ಬಂದಿರ್‍ಲಿಲ್ಲ. ಅವತ್ತಿಡೀ ಆ ಮಿಸ್‌ನ ಮಂಗಳಾರತಿಯೇ ನನ್ನ ಕಣ್ಮುಂದೆ ಬಂದು ಓಡಾಡುತ್ತಿತ್ತು. ಕ್ಲಾಸಿನುದ್ದಕ್ಕೂ ನಾನು ನಿಂತುಕೊಂಡೇ ಇದ್ದೆ. ೩೦ ನಿಮಿಷಗಳ ಆ ಪ್ರಹಸನದ ಬಳಿಕ ಮಿಸ್ ಪಾಠ ಮುಂದುವರಿಸಿದ್ರು.. ಶಾಲೆ ಬಿಟ್ಟು ಮನೆಗೆ ಹೋಗ್ಬೇಕಾದ್ರೆ ನನ್ನ ಫ್ರೆಂಡ್ಸ್ ಎಲ್ಲಾ; ಅಂತೂ ಕ್ಲಾಸ್‌ನಲ್ಲಿ ನಮಿಗೆ ನಿದ್ದೆ ಬಾರದ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾಗ; ಮನಸ್ಸಿನ ಒಂದು ಮೂಲೆಯಲ್ಲಿ ಹೆಮ್ಮೆಯೆನಿಸದೇ ಇರಲಿಲ್ಲ!

ಆಯ್ತು.. ಸೋಮವಾರ ಬೆಳಿಗ್ಗೆ ಶಾಲೆಗೆ ಬೇಗ ಬಂದಿದ್ದೆ. ನನ್ನ ಕ್ಲಾಸ್‌ಮೇಟ್ ಸುಧಾಕರ್ ಮತ್ತು ನಾನು ಹೆಚ್ಚಾಗಿ ೮ ಗಂಟೆಗೆ ಸ್ಕೂಲ್‌ಗೆ ಬರುತ್ತಿದ್ದೆವು. ಬಂದವ ನಾನು ಮೊದಲು ಟಾಯ್ಲೆಟ್‌ಗೆ ಮೂತ್ರ ಹೊಯ್ಯಲು ಹೋಗುತ್ತಿದ್ದೆ. ಮೂತ್ರ ಹೊಯ್ಯುತ್ತಿದ್ದಾಗಲೇ ಈ ಸುಧಾಕರ ಬಂದು; “ಹೇ ರಾಘವ ಮಿಸ್ ಈಸ್ ಕಾಲಿಂಗ್ ಯು” ಎಂದು ಮತ್ತೊಂದು ಶಾಕ್ ನೀಡಿದ. ಅವತ್ತು ಬೆಳಗ್ಗೆ ಮಿಸ್‌ನ ನೋಡಿದ್ರೂ ನಾನು ಗುಡ್‌ಮಾರ್ನಿಂಗ್ ಹೇಳಿರಲಿಲ್ಲ. ಹಿಂದಿನ ದಿನದ ಸಿಟ್ಟು ಇನ್ನೂ ಆರದಿರದಿದ್ದಾಗ; ಮಿಸ್‌ಗೆ ‘ಗುಡ್ ಮಾರ್ನಿಗ್’ ಬೇಕೆಂದೇ ನಾನು ಹೇಳಿರಲಿಲ್ಲ. ಅಷ್ಟು ಸಾಕಲ್ವಾ ಮಿಸ್‌ಗೆ...ತಗೋಳಿ...ಡಿಪಾರ್ಟ್‌ಮೆಂಟ್‌ಗೆ ನನ್ನ ಕರೆಸಿದರು. ಇತ್ತ ಅರ್ಧ ಮೂತ್ರ ಬಂದದ್ದು, ಹಾಗೇ ಬಾಕಿಯಾಯ್ತು.. ಮುಂದೆ ಮೂತ್ರ ಬರೆಲೇ ಇಲ್ಲ. ಪ್ಯಾಂಟ್ ಝಿಪ್ ಹಾಕಿ ಸೀದಾ ಡಿಪಾರ್ಟ್‌ಮೆಂಟ್‌ಗೆ ಹೋದೆ.

ಬೆಳಗ್ಗಿನ ಮುಹೂರ್ತ: ೮-೪೦ರ ಸಮಯ.
ಅವತ್ತಿನ ಸೇವೆ ಆರಂಭ...

“ಟೀಚರ್‍ಸ್‌ಗೆ ರೆಸ್ಪೆಕ್ಟ್ ಕೊಡಲಿಕ್ಕೆ ಬರದವ್ನು ನೀನೆಂಥ ಸಂಸ್ಕೃತಿ ಕಲ್ತಿದ್ದಿ? ಬಾರೀ ಸಿಟ್ಟು ಬರ್ತದಲ್ಲಾ ನಿಂಗೆ? ಮಿಸ್ ಬಂದ್ರೆ ಗುಡ್ ಮಾರ್ನಿಂಗ್ ಹೇಳದಷ್ಟು ದೊಡ್ಡ ಜನಾ ಆಗಿದ್ಯಾ ನೀನು...?” ಹಾಗೇ ಬೈದು ಬೈದು...ಗಂಟೆ ಒಂಭತ್ತಾಗಿತ್ತು.. ಬೇರೆ ಕ್ಲಾಸ್‌ನವರು ಬಂದವ್ರೆಲ್ಲಾ ನನ್ನನ್ನು ನೋಡುತ್ತಲೇ ಇದ್ದರು.. ಆ ದಿನ ನನಗೆ ನಿಜವಾಗಲೂ ನಾಚಿಕೆಯಾಗಿತ್ತು...ನಾನು ಜೋರಾಗಿ ಅತ್ತಿದ್ದೆ ಕೂಡ...
“ಹೋಗಿ ಹೆಡ್‌ಮಾಸ್ಟರ್ ಹತ್ತಿರ ಮಾತಾಡು” ಎಂದರು ಮಿಸ್..
ನೇರ ಎಚ್.ಎಂ. ಬಳಿ ಹೋದಾಗ, ಅವರು “ನಾನು ನಿನ್ನ ಅಪ್ಪನತ್ರ ಹೇಳ್ತೇನೆ” ಅಂದವರು ಮನೆ ನಂಬರ್ ಕೇಳಿದರು.. ಅಯ್ಯೋ... ನನಗೆ ಭಯವಾಗಿ ಹೋಗಿತ್ತು. ಮನೆಯಲ್ಲಿ ಫೋನ್ ಇಲ್ಲ ಎಂದು ಸುಳ್ಳು ಹೇಳಿದೆ. “ಗೋ ಗೋ...ಗೋ ಟು ಕ್ಲಾಸ್...ಗೆಟ್ ಲಾಸ್ಟ್...” ಅಂತ ಎಚ್.ಎಂ. ಹೇಳಿದಾಗ ಆ ನಂತರ ಹೋದವನು..ದಿನವಿಡೀ ಯಾವ ಕಾರಣಕ್ಕೂ ಟೀಚರ್‍ಸ್ ಡಿಪಾರ್ಟ್‌ಮೆಂಟ್‌ಗೆ ಮುಖ ಕೂಡ ಹಾಕಿರಲಿಲ್ಲ..
ಇವರೂ ಆಡುತ್ತಿರುವುದು ಕ್ರಿಕೆಟ್ ಅಲ್ಲವೇ?


ಆಸ್ಟ್ರೇಲಿಯದ ಸಿಡ್ನಿ ಓವಲ್‌ನಲ್ಲಿ ಮೊನ್ನೆ ಇಂಗ್ಲೆಂಡ್ ಮಹಿಳೆಯರ ಮೇಲಾಟ. ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡದ ಮಹಿಳೆಯರು ಹರ್ಷದ ಹೊನಲಲ್ಲಿ ತೇಲುತ್ತಿದ್ದರು. ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ
ಮಣ್ಣು ಮುಕ್ಕಿಸಿ ಮಿನುಗುವ ವಿಶ್ವಕಪ್ ಕಿರೀಟವನ್ನು ಆಂಗ್ಲರು ಮುಡಿಗೇರಿಸಿಕೊಂಡ ಆ ಕ್ಷಣ ವಿಶ್ವ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಮರೆಯಲಾಗದ ಅಪರೂಪದ ಕ್ಷಣ. ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ ಇದುವರೆಗೆ ಒಂದು ವಿಶ್ವಕಪ್ ಕೂಡಾ ಗೆಲ್ಲಲಾಗದ ವಿಪರ್ಯಾಸದ ನಡುವೆ ಮಹಿಳೆಯರು ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ದಿಗ್ವಿಜಯ ಸಾಧಿಸಿದ್ದು ಇಡೀ ಇಂಗ್ಲೆಂಡ್‌ಗೆ ದಕ್ಕಿದ ಬಹುದೊಡ್ಡ ಕೀರ್ತಿ. ಗೆಲುವಿನ ರನ್ ಬಾರಿಸುತ್ತಿದ್ದಂತೆ ಶಾಲೆಟ್ ಎಡ್ವರ್ಡ್ಸ್ ನೇತೃತ್ವದ ಇಂಗ್ಲೆಂಡ್ ಮಹಿಳೆಯರು ಆಸ್ಟ್ರೇಲಿಯದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಎಡ್ವರ್ಡ್ಸ್ ಕಣ್ಣಲ್ಲಿ ನೀರು ಹರಿದಿತ್ತು. ಆಕೆಯ ವೃತ್ತಿ ಬದುಕಿನ ಅಪರೂಪದ ಗಳಿಗೆಗೆ ಮಾರ್ಚ್ ೨೨ರಂದು ಓವಲ್ ಸಾಕ್ಷಿಯಾಗಿತ್ತು. ಒಟ್ಟಾರೆ ಮಾಧ್ಯಮಗಳ ನಿರ್ಲಕ್ಷದಿಂದ ನಮ್ಮ ದೇಶದಲ್ಲಿ ಹೇಳುವಷ್ಟರ ಮಟ್ಟಿಗೆ ಸುದ್ದಿಯಾಗದ ಮಹಿಳೆಯರ ವಿಶ್ವಕಪ್ ಯಾವುದೇ ಅಡತಡೆಗಳಿಲ್ಲದೆ ಯಶಸ್ವಿಯಾಗಿ ನಡೆದದ್ದು ಎಲ್ಲರಲ್ಲೂ ಖುಷಿ ತಂದಿದೆ.


ಭಾರತದ ಮಹಿಳಾ ತಂಡ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರೂ ಫೈನಲ್ ತಲುಪುವಲ್ಲಿ ಸಫಲವಾಗಲಿಲ್ಲ. ಹಾಗಿದ್ದರೂ ಟೂರ್ನಿಯಲ್ಲಿ ಭಾರತದ ಮಹಿಳೆಯರ ಸಾಧನೆ ಕಡೆ ಕಣ್ಣು ಹೊರಳಿಸಿದರೆ ಅವರ ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ. ವಿಶ್ವದ ನಂಬರ್ ಒನ್ ಬೌಲರ್ ಜುಲಾನ್ ಗೋಸ್ವಾಮಿ ಸಾರಥ್ಯದ ಭಾರತ ತಂಡದ ಸರಾಸರಿ ನಿರ್ವಹಣೆ ಹೊಸ ಭರವಸೆ ಮೂಡಿಸಿದೆ. ಸೂಪರ್‌ಸಿಕ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ೮೫ ರನ್‌ಗಳಿಗೆ ಕಟ್ಟಿಹಾಕಿ ಬಗ್ಗುಬಡಿದರೂ, ಇನ್ನೊಂದು ವಿಭಾಗದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ, ಫೈನಲ್‌ಗೆ ಮುಖಮಾಡಿದ್ದರಿಂದ ಭಾರತದ ಮುಂದಿದ್ದ ಅವಕಾಶಗಳು ನೆಲಕಚ್ಚಬೇಕಾಯಿತು. ಆದರೆ ಮೂರನೇ ಸ್ಥಾನಕ್ಕಾಗಿ ಆಸ್ಟ್ರೇಲಿಯ ವಿರುದ್ಧ ನಡೆದ ಸೆಣಸಾಟದಲ್ಲಿ ಭಾರತ ಮತ್ತೊಮ್ಮೆ ವಿಜಯದ ನಗೆ ಬೀರಿತ್ತು. ಕಾಂಗರೂಗಳನ್ನು ೧೪೨ ರನ್ನುಗಳಿಗೆ ನಿಯಂತ್ರಿಸಿದ್ದ ಭಾರತದ ಮಹಿಳೆಯರು ಯಶಸ್ವಿಯಾಗಿ ರನ್ ಚೇಸ್ ಮಾಡಿದ್ದರು.

ಭಾರತದ ಮಹಿಳೆಯರು ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಕ್ರಿಕೆಟನ್ನು ದೇವರಂತೆ ಪೂಜಿಸುವ ಭಾರತದಲ್ಲಿ ಅದು ಸುದ್ದಿಯಾಗಲೇ ಇಲ್ಲ. ಪಾಕಿಸ್ತಾನ, ಆಸ್ಟ್ರೇಲಿಯ, ಶ್ರೀಲಂಕಾ, ವೆಸ್ಟ್‌ಇಂಡೀಸ್ ತಂಡಗಳನ್ನು ಭಾರತದ ಮಹಿಳೆಯರು ಸೋಲಿಸಿದರು ಎಂಬುದು ಗಮನಾರ್ಹ ಅಂಶವಾಗಿದ್ದರೂ, ಸುದ್ದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ. ಕಳೆದ ಬಾರಿಯ ವಿಶ್ವಚಾಂಪಿಯನ್ ಕಾಂಗರೂಗಳನ್ನು ಭಾರತ ಎರಡು ಬಾರಿ ಯಶಸ್ವಿಯಾಗಿ ಮಣಿಸಿದರೂ ಮಾಧ್ಯಮಗಳಲ್ಲಿ ಅವು ಬಿತ್ತರವಾದದ್ದು ಕೆಳಸುದ್ದಿಯಾಗಿ ಮಾತ್ರ. ಎಲ್ಲೋ ಒಂದೆರಡು ಮಾಧ್ಯಮಗಳು ೨೦-೨೫ ಸೆಕೆಂಡುಗಳ ಸುದ್ದಿ ನೀಡಿದ್ದು ಬಿಟ್ಟರೆ, ಮಹಿಳೆಯರ ಈ ಸಾಧನೆ ಯಾಕೋ ಮಾಧ್ಯಮಗಳಿಗೆ ಸುದ್ದಿಯಾಗದೇ ಇದ್ದದ್ದು ವಿಪರ್ಯಾಸವೇ ಸರಿ. ನೀವು ಗಮನಿಸಿರಬಹುದು, ವಿಶ್ವಕಪ್ ಕ್ರಿಕೆಟ್ ಮಧ್ಯೆ ಭಾರತ ಪುರುಷರ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ವರದಿಗಳು ಮಾಧ್ಯಮಗಳಲ್ಲಿ ಸ್ಪರ್ಧೆಗೆ ಬಿದ್ದಂತೆ ಬಿ
ತ್ತರವಾಗುತ್ತಿದ್ದವು.

ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುವ ವಿಶ್ವಕಪ್ ಕ್ರಿಕೆಟ್, ಕ್ರಿಕೆಟ್ ಆಡುವ ಎಲ್ಲಾ ದೇಶದ ಮಹಿಳಾ ಕ್ರಿಕೆಟ್ ಮಣಿಗಳಿಗೆ ತಮ್ಮ ಸಾಮರ್ಥ್ಯ, ಕೌಶಲ್ಯ ಪ್ರದರ್ಶನಕ್ಕೆ ಒಂದು ವೇದಿಕೆಯಾಗುತ್ತದೆ. ಅಪರೂಪಕ್ಕೆ ನಡೆಯುವ ಇಂತಹ ಟೂರ್ನಿಗಳನ್ನು ಸಹಜವಾಗಿ ಜನರು ನೋಡಬಯಸುತ್ತಾರೆ. ಆ ಬಗ್ಗೆ ಹೆಚ್ಚಿನದನ್ನು ತಿಳಿಯಬಯಸುತ್ತಾರೆ ಕೂಡ. ಆದರೆ ‘ಮಹಿಳಾ ಕ್ರಿಕೆಟ್ ಬಗ್ಗೆ ಯಾರು ಕೇಳ್ತಾರೆ ಮಾರಾಯ್ರೆ’ ಅನ್ನುವ ಮಾಧ್ಯಮಗಳ ಪೂರ್ವಗ್ರಹಪೀಡಿತ ಮನೋಭಾವವೇ ಜನರನ್ನೂ ಕೂಡ ಅದರಿಂದ ದೂರ ಉಳಿಯುವಂತೆ ಮಾಡಿವೆ.

ಮಹಿಳಾ ವಿಶ್ವಕಪ್ ಕ್ರಿಕೆಟ್‌ಗೆ ೩೬ ವರ್ಷಗಳ ಇತಿಹಾಸವೇ ಇದೆ. ೧೯೭೩ರಲ್ಲಿ ಆರಂಭವಾದ ಮೊದಲ ವಿಶ್ವಕಪ್ ಇದುವರೆಗೆ ತನ್ನ ಪಯಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದೆ. ಹಾಗೆ ನೋಡಿದರೆ ಪುರುಷರ ವಿಶ್ವಕಪ್ ಆರಂಭವಾದದ್ದು ಮಹಿಳಾ ವಿಶ್ವಕಪ್ ಆದ ಎರಡು ವರ್ಷದ ಬಳಿಕ. ಆದರೆ ‘ಪುರುಷ ಪ್ರಧಾನ’ ಎಂಬ ಮಾತಿಗೆ ತಕ್ಕಂತೆ ಇಂದು ಮುಖ್ಯವಾಹಿನಿಯಲ್ಲಿ ಪ್ರಧಾನವಾಗಿರುವುದು ಪುರುಷರ ಕ್ರಿಕೆಟ್ ಮಾತ್ರ. ಮಹಿಳಾ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ಗೆ ನೀಡಿದಷ್ಟು ಆದ್ಯತೆಯನ್ನು ಇದುವೆರೆಗೆ ನೀಡಿಲ್ಲ ಎಂಬುದು ಮಹಿಳೆಯರ ಪಾಲಿಗೆ ಅರಗಿಸಿಕೊಳ್ಳಲಾಗದ ಸತ್ಯವಾದರೂ, ’ಮಹಿಳಾ ಪ್ರಾತಿನಿಧ್ಯ’ ಎಂದು ಮಾತನಾಡುವ ನಮ್ಮಲ್ಲಿನ ಬಹುತೇಕ ಪುರುಷರು ಇಂತಹಾ ವಿಷಯಗಳಲ್ಲಿ ಮೌನವನ್ನೇ ಉತ್ತರವಾಗಿಸುತ್ತಾರೆ.

ಭಾರತೀಯ ಕ್ರಿಕೆಟ್‌ನ್ನು ಶ್ರೀಮಂತಗೊಳಿಸಿದ ಕೀರ್ತಿ ಕೇವಲ ಪುರುಷ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ. ಮಹಿಳೆಯರದ್ದು ಇದರಲ್ಲಿ ಪಾಲಿದೆ ಎಂಬುದಕ್ಕೆ ಜಾಗತಿಕ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರು ಮಾಡಿದ ಸಾಧನೆಯತ್ತ ದೃಷ್ಟಿಹಾಯಿಸಿದರೆ ಅರ್ಥವಾಗುತ್ತದೆ. ಪ್ರಸ್ತುತ ಭಾರತ ತಂಡದ ನಾಯಕಿ ಜುಲಾನ್ ಗೋಸ್ವಾಮಿ ಅವರು ಈಗ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದಾರೆ. ಹಾಗೇ ಉಪಯುಕ್ತ ಆಲ್‌ರೌಂಡರ್ ಆಗಿರುವ ಗೋಸ್ವಾಮಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನ ಪಡೆದಿದ್ದಾರೆ. ಮಿಥಾಲಿ ರಾಜ್ ೩೦೦೦ ಸಾವಿರ ರನ್ ಗಡಿದಾಟಿಸಿದ ವಿಶ್ವದ ಐದನೇ ಆಟಗಾರ್ತಿ ಹಾಗೂ ಐಸಿಸಿ ರ್‍ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಟಗಾರ್ತಿ ರುಮೇಲಿ ದಾರ್. ವಿಶ್ವಕಪ್ ಟೂರ್ನಿ ಬಳಿಕ ಐಸಿಸಿ ಬಿಡುಗಡೆ ಮಾಡಿದ ವಿಶ್ವ ಕಪ್ ೧೧ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿರುವುದೂ ಗಮನಾರ್ಹ ಅಂಶ. ಮಿಥಾಲಿ ರಾಜ್ ಹಾಗೂ ಪ್ರಿಯಾಂಕಾ ರಾಯ್ ಸ್ಥಾನ ಪಡೆದ ಆ ಇಬ್ಬರು ಆಟಗಾರರು.

ವರ್ಷದಿಂದ ವರ್ಷಕ್ಕೆ ಭಾರತ ಮಹಿಳಾ ಕ್ರಿಕೆಟ್ ಭರವಸೆ ಮೂಡಿಸುತ್ತಿದ್ದರೂ ಎಲ್ಲೋ ಒಂದು ಕಡೆ ನಾವು ಆ ವಿಭಾಗವನ್ನು ಕಡೆಗಣಿಸುತ್ತಿದ್ದೇವೆ ಎಂಬ ಭಾವನೆ ಕಾಡುತ್ತಿದೆ.

ವಿಶ್ವಕಪ್ ಗೆಲ್ಲದಿದ್ದರೂ ತೃಪ್ತಿದಾಯಕ ಪ್ರದರ್ಶನ ತೋರಿದ್ದಾರೆ ಎಂಬ ಮಾತ್ರಕ್ಕಾದರೂ ನಮ್ಮ ಮಾಧ್ಯಮಗಳು ಈ ಆಟಗಾರರನ್ನು ಗುರುತಿಸಬಹುದಿತ್ತು. ಆದರೆ ಇಲ್ಲಿಯವರೆಗೆ ಒಂದು ಮಾಧ್ಯಮದಲ್ಲಾಗಲಿ, ಒಬ್ಬ ಆಟಗಾರ್ತಿಯ ಸಂದರ್ಶನ ಕೂಡ ಬಿತ್ತರವಾಗಿಲ್ಲ, ಪ್ರಕಟವಾಗಿಲ್ಲ. ಇಂಗ್ಲೆಂಡ್ ಮಹಿಳೆಯರು ಉನ್ನತ ಮಟ್ಟದ ಪ್ರದರ್ಶನ ತೋರಲು ಅಲ್ಲಿ ದೊರಕಿರುವ ಪ್ರೋತ್ಸಾಹವೂ ಪ್ರಮುಖ ಕಾರಣ. ಆದರೆ ಭಾರತದಲ್ಲಿ ಹೆಚ್ಚಿನ ಮಂದಿಗೆ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯದಲ್ಲಿ ನಡೆಯುತ್ತಿದೆ ಎಂದು ತಿಳಿದದ್ದೇ ಇಎಸ್‌ಪಿನ್ ಹಾಗೂ ಸ್ಟಾರ್ ಚಾನೆಲ್‌ಗಳಲ್ಲಿ ಕ್ರಿಕೆಟ್ ನೇರ ಪ್ರಸಾರ ಕಂಡ ನಂತರ! ಈ ದುರಂತಕ್ಕೆ ನಗಬೇಕೋ, ಅಳಬೇಕೋ ಎಂದು ತಿಳಿಯುತ್ತಿಲ್ಲ.

ಒಂದು ವೇಳೆ ಅದೇ ಪುರುಷರ ತಂಡವಾಗಿದ್ದರೆ, ಅದೇನು ಸುದ್ದಿ, ಸಂದರ್ಶನ...ಇಡೀ ಸುದ್ದಿ ವಾಹಿನಿಗಳು ಆಟಗಾರರ ಬೆನ್ನುಬೀಳುತ್ತಿದ್ದವು. ಬೇಕಾದರೆ ಭಾರತ ಪುರುಷರ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗುವಾಗ ವಿಮಾನ ನಿಲ್ದಾಣದಲ್ಲೇ ಮಾಧ್ಯಮಗಳು ಮೈಕ್ ಹಿಡಿದು ಕಾಯುವುದನ್ನು ಕಾಣಬಹುದು.

ಮತ್ತೊಂದು ಬೇಸರದ ಸಂಗತಿ ಎಂದರೆ ನಮ್ಮ ಬಹುತೇಕ ಮಾಧ್ಯಮಗಳು ಆಸ್ಟ್ರೇಲಿಯದಲ್ಲಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದ್ದರೂ ತಮ್ಮ ಯಾವುದೇ ಪ್ರತಿನಿಧಿಯನ್ನು ಅಲ್ಲಿಗೆ ಕಳುಹಿಸಿಲ್ಲ. ಅದೇ ನ್ಯೂಜಿಲೆಂಡ್‌ನಲ್ಲಿ ಮಾಧ್ಯಮಗಳ ಪ್ರವಾಹವೇ ಹರಿದಿದೆ! ಮಹಿಳಾ ಕ್ರಿಕೆಟ್-ಪುರುಷರ ಕ್ರಿಕೆಟ್‌ಗೆ ಇದೇ ವ್ಯತ್ಯಾಸ!

ಮಾಧ್ಯಮಗಳ ಹೊಣೆಗೇಡಿ ವರ್ತನೆಯೂ ಒಂದು ರೀತಿಯಲ್ಲಿ ಪ್ರತಿಭೆಗಳ ಕೊಲೆಗೆ ಕಾರಣವಾಗುತ್ತವೆ ಎಂಬುದನ್ನು ನಾವು ಒಪ್ಪಲೇಬೇಕು. ಒಟ್ಟಾರೆ ಮಹಿಳಾ ಹಾಕಿಯಲ್ಲಿ ನಿರೀಕ್ಷಿತ ಪ್ರಮಾಣದ ಸಾಧನೆ ತೋರದೆ ತತ್ತರಿಸಿಹೋಗಿರುವ ಭಾರತ ಕನಿಷ್ಠ ಕ್ರಿಕೆಟ್‌ನಲ್ಲಾದರೂ ಭರವಸೆಯ ಪ್ರದರ್ಶನ ನೀಡುತ್ತಿದೆ ಎಂಬ ಸಂತೋಷಕ್ಕಾದರೂ ಈ ಕ್ರಿಕೆಟ್ ಮಣಿಗಳನ್ನು ನಾವು ಪ್ರೋತ್ಸಾಹಿಸಬೇಕಾದ ಕಾಲ ಕೂಡಿ ಬಂದಿದೆ. ಬಿಸಿಸಿಐ ಹಾಗೂ ಸರ್ಕಾರವೂ ಈ ಬಗ್ಗೆ ಚಿಂತಿಸಬೇಕಿದೆ. ಬ್ಯಾಟಿಂಗ್ ತಂತ್ರಗಾರಿಕೆ, ಕ್ಷೇತ್ರರಕ್ಷಣೆಯಲ್ಲಿ ಸುಧಾರಣೆ ಹಾಗೂ ಬೌಲಿಂಗ್ ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಲು ಸಾಕಷ್ಟು ತರಬೇತಿ ಹಾಗೂ ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದರ ಜೊತೆ ಮಾಧ್ಯಮಗಳೂ ತಮ್ಮ ಕರ್ತವ್ಯ ಮೆರೆಯಬೇಕಿದೆ. ಆದರೆ ಕೇವಲ ಟಿಆರ್‌ಪಿಯತ್ತ ಕಣ್ಣಿಟ್ಟೇ ಸುದ್ದಿ ಮಾಡುವ ಮಾಧ್ಯಮಗಳಿಗೆ ಇದು ಅರ್ಥವಾಗುವುದೇ?