Thursday 21 May 2009

ಬಯಕೆ ಈಡೇರಿದಾಗ...

ಈ ಉಪ್ಪಿಟ್ಟು ತಿನ್ನುವ ಗೀಳು ನನ್ನಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದು ಈಗಲೂ ಅರ್ಥವಾಗದ ಒಗಟು. ಊರಲ್ಲಿದ್ದಾಗ ಯಾವತ್ತೂ ಉಪ್ಪಿಟ್ಟು (ಸಜ್ಜಿಗೆ) ತಿನ್ನಬೇಕೆಂಬ ಹೆಬ್ಬಯಕೆ ಮನದಲ್ಲಿ ಮನೆಮಾಡಿರಲಿಲ್ಲ. ಆದರೆ ದೆಹಲಿಗೆ ಬಂದ ನಂತರ ಯಾಕೋ ಈ ಉಪ್ಪಿಟ್ಟಿಗೂ ನನಗೂ ಭಾರೀ ನಂಟು ಬೆಳದಂತಿದೆ. ಊರಿನಿಂದ ದೂರವಿದ್ದೇನೆ ಎಂಬ ಕಾರಣಕ್ಕೋ ಅಥವಾ ಮೋಹನ್ಸಿಂಗ್ ಮಾರ್ಕೆಟ್ ಬಳಿ ಇರುವ ತಮಿಳು ಡಾಬಾದ ಉಪ್ಮಾ ಮೋಡಿಯೋ ಅಥವಾ ಕರ್ನಾಟಕ ಸಂಘದ ಅಟ್ರಾಕ್ಟಿವ್ ಉಪ್ಮಾವೋ...ಈಗಲೂ ಅರ್ಥವಾಗುತ್ತಿಲ್ಲ. ಆದರೆ ಅಮ್ಮ ಮನೆಯಲ್ಲಿ ಮಾಡಿದ್ದರೂ ನಾನು ಉಪ್ಪಿಟ್ಟು ತಿನ್ನುತ್ತಿದ್ದದ್ದು ತೀರಾ ಅಪರೂಪ. ಬೆಳಗ್ಗಿನ ಉಪಹಾರಕ್ಕಂತೂ ಉಪ್ಪಿಟ್ಟು ಮಾಡಿಬಿಟ್ಟರೆ ಮನೆಯಲ್ಲಿ ಇಡೀ ರಂಪವೇ ಮಾಡಿಬಿಡುತ್ತಿದ್ದೆ. ಹಾಗಿದ್ದಾಗ ಉಪ್ಪಿಟ್ಟಿನ ಮೇಲೆ ಅಪಾರ ಪ್ರೀತಿ ಹುಟ್ಟಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.


ಉಪ್ಪಿಟ್ಟಿನ ಮೇಲಿರುವ ಈ ಪರಿಯ ಮೋಡಿಗೆ ಕಳೆದ ಭಾನುವಾರವೂ ಸಾಕ್ಷಿಯಾಯಿತು. ಆವತ್ತು ಬೆಳಗ್ಗಿನಿಂದ ಎಲ್ಲಾದರೂ ಉಪ್ಪಿಟ್ಟು ತಿನ್ನಲೇಬೇಕೆಂದು ಹೊಟ್ಟೆ, ಮನಸ್ಸು ಬೊಬ್ಬಿಡುತ್ತಲೇ ಇದ್ದವು. ಅದಕ್ಕೆ ಸರಿಯಾಗಿ ಬೆಳಗ್ಗೆ ತಿಂಡಿಯೂ ತಿಂದಿರಲಿಲ್ಲ. ಮಧ್ಯಾಹ್ನ ವಿಜಯ ಕರ್ನಾಟಕದ ವಿನಾಯಕ ಭಟ್ಟರ ಮನೆಯಲ್ಲಿ ಮಧ್ಯಾಹ್ನದ ಭೋಜನ ಮಾಡಿದ್ದೆ. ಜೊತೆಗೆ ಸುನಿಲ್ ಕೂಡ ಇದ್ದ.
ಸಂಜೆ ಹೊತ್ತಿಗೆ ದೆಹಲಿಯ ಕನ್ನಡಭವನದಲ್ಲಿ ಆ ದಿನ tv9 ಶಿವಪ್ರಸಾದ್ ಜೊತೆ ಹರಟುತ್ತಿದ್ದಾಗ ಅವರಲ್ಲಿ ಹೇಳಿಯೇ ಬಿಟ್ಟೆ. “ನೋಡಿ ನನಗೆ ನಿಜವಾಗ್ಲೂ ಉಪ್ಪಿಟ್ಟು ತಿನ್ನಬೇಕೆಂದು ಮನಸ್ಸಾಗುತ್ತಿದೆ. ನಡ್ರೀ ಶಿವಪ್ರಸಾದ್ ಎಲ್ಲಿಯಾದ್ರೂ ಹೋಗಿ ಬರೋಣ ಅಂತ...” ಅದಕ್ಕೆ ಅವರು ನೀನ್ಯಾಕೋ ಪ್ರಶಾಂತ್ ನಾಥು ಥರಾ ಆಡ್ತಿದ್ಯಾ ಅಂಥ ನಕ್ಕಿ ಸುಮ್ಮನಾದ್ರು. ಸರಿ, ಸದ್ಯ ಯಾರೂ ಬರುವ ಯೋಚನೆಯಲ್ಲಿಲ್ಲ ಅಂಥ ನಾನೂ ಸುಮ್ಮನಾದೆ. ಮೂಗಿನ ತುದಿಯಲ್ಲಿದ್ದ ಆ ಆಸೆಯನ್ನ ಮತ್ತೆ ಹೊಟ್ಟೆಯಲ್ಲೇ ಹಾಕಿಕೊಂಡಿದ್ದೆ.

ಸ್ವಲ್ಪ ಹೊತ್ತಿನ ಬಳಿಕ ಸೋನಿಯಾ ಮೇಡಂ ಅನ್ನು ಮೀಟ್ ಮಾಡಲು ಹೋಗಿದ್ದ, ಗುಲ್ಬರ್ಗಾದಲ್ಲಿ ಬಿಜೆಪಿ ರೇವೂ ನಾಯಕ್ ವಿರುದ್ಧ ಗೆಲುವಿನ ನಗೆ ಬೀರಿದ್ದ ಮಲ್ಲಿಕಾರ್ಜುನ ಖರ್ಗೆ ಕಾರಿಂದಿಳಿದು ನಿಧಾನವಾಗಿ ಒಂದೊಂದೇ ಹೆಜ್ಜೆ ಹಾಕುತ್ತಾ ಪತ್ರಕರ್ತರೊಂದಿಗೆ ಮಾತಿಗಿಳಿದರು. ಆ ಬಳಿಕ ಕನ್ನಡ ಭವನದ ಉಪಾಹಾರ ಹಾಲ್‌ನಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ, ಕಣ್ಣ ಮುಂದೆ ಉಪ್ಪಿಟ್ಟು ಪ್ರತ್ಯಕ್ಷವಾಗಬೇಕೆ? ರೋಗಿ ಬಯಸಿದ್ದೂ...ವೈದ್ಯ ನೀಡಿದ್ದೂ..ಎಂದು ಹತ್ತಿರದಲ್ಲಿದ್ದ ಜೋಶಿ ಅವರು ಹೇಳಿ ನಗತೊಡಗಿದರು. ಅತ್ತ ಶಿವಪ್ರಸಾದ ಅವರೂ ಕೂಡ, "ಅದಕ್ಕೆ ಹೇಳೋದು, ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದು ಉಪ್ಪಿಟ್ಟು ಮೆಲ್ಲುತ್ತಿದ್ದರು. ಹತ್ತಿರವೇ ಸವಿಯುತ್ತಿದ್ದ ವಿನಾಯಕ ಭಟ್ಟರು, “ಸಜ್ಜನರ ಸಹವಾಸ ಸಜ್ಜಿಗೆ ಸವಿದಂತೆ” ಎಂದು ವಿ.ಕ. ಶೈಲಿಯಲ್ಲೇ ಪ್ರಾಸ ಹುಡುಕಿಕೊಂಡೇ ಜೋಕ್ ಮಾಡಿದರು. ಇತ್ತ ಖರ್ಗೆ ಅವರ ಬೈಟ್‌ಗೆ ಕಾಯುತ್ತಿದ್ದ ETv ಶ್ರೀನಿವಾಸ ಗೌಡರು, “ಮಗ ಬೇಕಾದಷ್ಟು ತಿನ್ನು” ಅಂತ ಹುರಿದುಂಬಿಸಿದರು. ಇವೆಲ್ಲದರ ಮಧ್ಯೆ “ಇವತ್ತಿನ ಉಪ್ಪಿಟ್ಟು ಭಾರೀ ಚೆನ್ನಾಗಿದೆ” ಎಂದು ವಿನಾಯಕ ಭಟ್ಟರು ಹೊಗಳಿದ್ದಕ್ಕೆ, ಖರ್ಗೆ ಅವರು “ಹೋ” ಎಂದು ನಕ್ಕಿ ಕನ್ನಡಭವನದ ತಿಂಡಿಗೆ ಸರ್ಟಿಫಿಕೇಟ್ ನೀಡಿದವರಲ್ಲಿ ನೀವೇ ಮೊದಲಿಗರು ಎಂದು ಹೇಳಿಯೇ ಬಿಟ್ಟರು. ಒಟ್ಟಾರೆ ಖರ್ಗೆ ಅವರಿಗೆ ಕನ್ನಡಭವನದ ತಿಂಡಿ ತಿನಿಸುಗಳು ಇಷ್ಟವಾಗಿಲ್ಲ ಎಂದಾಯಿತು. ಬಿಡಿ, ಅವರಿಗೆ ಇಷ್ಟವಾದರೇನು, ಬಿಟ್ಟರೇನು... ಅವರ ಕಣ್ಣು ಇದ್ದದ್ದಂತೂ ಉಪ್ಪಿಟ್ಟಿನ ಮೇಲಲ್ಲ. ಬದಲಾಗಿ ಕೇಂದ್ರದಲ್ಲಿನ ಮಂತ್ರಿಗಿರಿ ಮೇಲೆ! ನಾವೆಲ್ಲರಂತೂ ಎರಡೆರಡು ಬಾರಿ ಉಪ್ಪಿಟ್ಟಿನ ರುಚಿ ಸವಿದೆವು.

ಏನೇ ಆಗಲಿ, ಉಪ್ಪಿಟ್ಟು ತಿನ್ನಬೇಕೆಂಬ ಆಕಾಶದಷ್ಟಿದ್ದ ಬಯಕೆಯನ್ನು ಈಡೇರಿಸದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ...?

12 comments:

PARAANJAPE K.N. said...

ಚೆನ್ನಾಗಿದೆ ನಿಮ್ಮ ಸಜ್ಜಿಗೆ ಪುರಾಣ. ಉಪ್ಪಿಟ್ಟಿಗೂ ಖರ್ಗೆಗೂ ಲಿ೦ಕು ಜೋಡಿಸಿ ಒ೦ದು ಒಳ್ಳೆಯ ಬರಹ ಕೊಟ್ಟಿದ್ದಿರಿ.

ಪುರುಷೋತ್ತಮ ಬಿಳಿಮಲೆ said...

good one, elliya kharge, elliya uppittu, ettaninda etta sambhandavayya.....

ಸಿಂಧು ಭಟ್. said...

ಚೆನ್ನಾಗಿತ್ತು ನಿಮ್ಮ ಪುಪ್ಪಿಟ್ಟು_ಪುರಾಣ.

Ranjana Shreedhar said...

hmm.. uralli iddaga uppittu andarene mugu muriyuttiddolu, iga e mahanagari seri uppittannu ista pado taraha aagide...!!

nimma uppittina purana amoghavaagiddu bidi..!!
chennagide.

Prabhas Pandith said...

hmmmm antoo nin uppittinnasena oorige saartideeya.....
munde sidhdhavanada saaroo huliyoo blagolage baruttoo?!
adanna maatra Khar
geginta 'dodda' naayakaryaarigaadru link maadappaa!!
naavoo odi aanandisteve!

Unknown said...
This comment has been removed by a blog administrator.
Unknown said...

Raghva,

Hey Adu Nanu Comment hakidalla. Nanu Ootakke Hogiddaga `Mari' hengasu comment Hakkidu. Bejaru Madbeda...Article chennagide..........

Unknown said...

nijvaglu astondu tindya???????

Melka Miyar said...

tinnade enu pugsatte sikre...

ರಾಕೇಶ್ ಕುಮಾರ್ ಕಮ್ಮಜೆ said...

ಅಂತೂ ಆತ್ಮಕ್ಕೆ ಶಾಂತಿಯಾಯಿತಲ್ಲ, ಉಪ್ಪಿಟ್ಟು ತಿಂದು!!


ಡುಂಡಿರಾಜರ ಹನಿಗವನ ನೆನಪಾಗುತ್ತಿದೆ.

ಪ್ರಿಯಾ
ನಿನ್ನ ಮುಖವೇಕೆ
ಕಪ್ಪಿಟ್ಟಿದೆ?
ಪ್ರಿಯೆ,
ನನ್ನ ಮುಂದೆ
ನೀ ಮಾಡಿದ
ಉಪ್ಪಿಟ್ಟಿದೆ!!

Ittigecement said...

ರಾಘವ...

ಉಪ್ಪಿಟ್ಟಿನ ಕಥೆ ಚೆನ್ನಾಗಿದೆ....
ನಾನು ಬ್ರಹ್ಮಚಾರಿಯಾಗಿದ್ದಾಗ ಇದೊಂದೆ ಮಾಡಲಿಕ್ಕೆ ಕಲಿತಿದ್ದೆ...
ಸಿವಿಲ್ ಇಂಜನೀಯರ್ ಆದ ನಾನು ಇದಕ್ಕೆ "ಕಾಂಕ್ರೀಟ್" ಅಂತ ಹೆಸರಿಟ್ಟಿದ್ದೆ...
ಉಪ್ಪಿಟ್ಟೆಂದರೆ ಹೆದರಿ ಓಡಿ ಹೋಗಿಬಿಡುತ್ತಿದ್ದೆ....
ಆದರೆ ಈಗ...
ನನ್ನಾಕೆ ಚೆನ್ನಾಗಿ , ರುಚಿಯಾಗಿ ಉಪ್ಪಿಟ್ಟು ಮಾಡುತ್ತಾರೆ ಹಾಗಾಗಿ ಈಗ ತಿನ್ನುತ್ತಿರುವೆ...

shivu.k said...

ರಾಘವ ಶರ್ಮರವರೆ,

ನಿಮ್ಮ ಉಪ್ಪಿಟ್ಟು ಪುರಾಣ ಚೆನ್ನಾಗಿದೆ..ತಿರಸ್ಕಾರದ ತಿಂಡಿ ಅದು ಹೇಗೆ ಅಷ್ಟೋಂದು ಇಷ್ಟವಾಯಿತು ಅನ್ನೋದು ಕುತೂಹಲ..

ಮತ್ತೆ ನನಗೂ ಈ ಕಾಂಕ್ರೀಟ್ ಅಂದ್ರೆ ಮೈಲಿ ದೂರವಿರುತ್ತೇನೆ..ಮನೆಯಲ್ಲಿ ಮಾಡಿದ್ರೆ ಜಪ್ಪಯ್ಯ ಅಂದ್ರು ತಿನ್ನಲ್ಲ..

ಧನ್ಯವಾದಗಳು.