Thursday 9 September 2010

ಬಡವನ ಮೇಲೆ ಬುಲ್ಡೋಜರ್

‘ಅಭಿವೃದ್ಧಿ ಹೆಸರಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ವಿಶೇಷ ವಿತ್ತ ವಲಯ ನಿರ್ಮಾಣಕ್ಕಾಗಿ ಎರಡನೇ ಹಂತದ ೨೦೩೫ ಎಕರೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಕೆಐಎಡಿಬಿ ತನ್ನ ‘ಕರ್ತವ್ಯಕ್ಕೆ ಸಿದ್ಧಗೊಂಡಿದೆ. ಹಳ್ಳಿಗರೂ ಕೂಡ ‘ಯುದ್ಧಕ್ಕೆ ಸಿದ್ಧರಾಗಿದ್ದಾರೆ

ಒಂಜಿ ಸಾಮಾನು ದಾದಾಂಡಲ ದೀಕ ಪಂಡ ಜಾಗ ಇಜ್ಜಿ ಮಾರ್ರೆ... ತೂಲೆ ಇರೆಗ್ ಕೊರ್ನ ಪೆಲಕ್ಕಾಯಿನ್ ಸೊಳೆ ಪಾಡ್ರೆ ತಡ್ಪೆ ಸಮೆತ ಇಜ್ಜಿ (ಏನಾದರೂ ಸಾಮಗ್ರಿ ಇಡೋಣ ಎಂದರೆ ಈಗ ಜಾಗವಿಲ್ಲ... ನಿಮಗೆ ಕೊಟ್ಟ ಹಲಸಿನ ಸೊಳೆಯನ್ನು ಇಡಲು ಒಂದು ತಡ್ಪೆ ಕೂಡ ಇಲ್ಲ) ಎಂದು ಮೇರಿ ಪತ್ರಾವೋ ಅವರು ಅಡುಗೆ ಕೋಣೆ ಬಳಿ ನಿಂತು ತಮ್ಮ ಸೆರಗಿನಿಂದ ಕಣ್ಣೀರನ್ನು ಒರೆಸುತ್ತಿದ್ದ ದೃಶ್ಯವೇ ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ತಂದಿಟ್ಟಿರುವ ಅವಾಂತರಗಳನ್ನು ಬಯಲುಗೊಳಿಸಿದ್ದವು.ಮೇರಿ ಪತ್ರಾವೋ ಗ್ರೆಗರಿ ಪತ್ರಾವೋ ಅವರ ತಾಯಿ. ಏಪ್ರಿಲ್ ೨೮ರಂದು ಕೆಐಎಡಿಬಿ ಅಧಿಕಾರಿಗಳ ನೇತೃತ್ವದಲ್ಲಿ ಮನೆ ಕೆಡವಲು ಮುಂದಾಗಿದ್ದ ಅಧಿಕಾರಿಗಳನ್ನು ಗ್ರೆಗರಿ ಕುಟುಂಬ ಅಂಗಲಾಚಿ ಬೇಡಿಕೊಂಡಿದ್ದರೂ, ಆ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಕೆಐಎಡಿಬಿ, ಮೇರಿ ಪತ್ರಾವೋ ಸೇರಿದಂತೆ ಅವರ ಕುಟುಂಬದ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪ ಮಾಡಿ ಪ್ರಕರಣವನ್ನೂ ದಾಖಲಿಸಿತ್ತು. ನಾನು ಮನೆಯನ್ನು ಕೆಡವಬೇಡಿ ಎಂದು ವಿರೋಧ ವ್ಯಕ್ತಪಡಿಸಿದಾಗ ಆ ಜನ ನನ್ನ ಕೈಯನ್ನು ಹಿಡಿದು ಎಳೆದಿದ್ದರ ನೋವು ನನಗೆ ಇಂದೂ ಕಾಡುತ್ತಿದೆ ಎಂದು ೭೫ ವರ್ಷದ ಮೇರಿ ಪತ್ರಾವೋ ನೋವು ಹಂಚಿಕೊಂಡರು.




ಸಾವಯವ ಕೃಷಿ ಮೂಲಕ ಜೀವನಕ್ಕೆ ಒಂದು ಪ್ರಾಮಾಣಿಕ ದಾರಿ ಕಂಡುಕೊಂಡಿದ್ದ ಹೋರಾಟ ಮನೋಭಾವದ, ಸ್ವಾವಲಂಬಿ ಕೃಷಿಕ ಗ್ರೆಗರಿ ಪತ್ರಾವೋ. ಆದರೆ ಯಾವಾಗ ಅವರ ಜಮೀನಿನ ಮೇಲೆ ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ಕರಾಳ ಕಣ್ಣುಗಳು ಬಿದ್ದವೋ ಅಂದಿನಿಂದ ಪತ್ರಾವೋ ಕುಟುಂಬ ನೆಮ್ಮದಿಯಾಗಿ ಉಂಡಿಲ್ಲ. ಅಂತಿಮವಾಗಿ ಇದೇ ವರ್ಷದ ಏಪ್ರಿಲ್ ೨೮ರಂದು ಕೆಐಎಡಿಬಿ ಮನೆ ಕೆಡವಲು ಯಾವುದೇ ಮುಂಚಿತ ಮಾಹಿತಿ ನೀಡದೆ ಮತ್ತು ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಏಕಾಏಕಿಯಾಗಿ ಬಂದು ಪತ್ರಾವೋ ಕುಟುಂಬದ ಮನೆಯನ್ನೇ ಧ್ವಂಸಗೊಳಿಸಿತು. ಗ್ರೆಗರಿ ಪತ್ರಾವೋ ಪ್ರಕಾರ ಮನೆಯ ಪಂಚನಾಮೆಯನ್ನೂ ಮಾಡಲಾಗಿಲ್ಲ. ಮೇರಿ ಪತ್ರಾವೋ ಅವರು ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಪೆಟ್ಟಿಗೆಯಲ್ಲಿದ್ದ ೮೦ ಸಾವಿರ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಾರೆ. ಕನಿಷ್ಠ ಅವುಗಳನ್ನು ಸುಭದ್ರವಾಗಿ ತೆಗೆದಿಟ್ಟುಕೊಳ್ಳಲು ಅವಕಾಶವನ್ನೂ ನೀಡಲಿಲ್ಲ ಎನ್ನುತ್ತಾರೆ ಗ್ರೆಗರಿ ಪತ್ರಾವೋ.

ಕೃಷಿ ಕುಟುಂಬ ಎಂದ ಮೇಲೆ ಅವರ ಮನೆಯಲ್ಲಿ ಜಾನುವಾರುಗಳು ಸೇರಿದಂತೆ ಕೃಷಿ ಮಾಡಲು ಬೇಕಾದ ಎಲ್ಲಾ ಸಾಮಗ್ರಿಗಳು ಇರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿದ ಕೆಐಎಡಿಬಿ ಅದೇ ದಿನ ಪತ್ರಾವೋ ಕುಟುಂಬವನ್ನು ಎಸ್‌ಇಝಡ್ ಪರ ಕೆಲಸ ಮಾಡುತ್ತಿರುವ ಗುತ್ತೇದಾರ ಯಾದವ ಕೋಟ್ಯಾನ್ ಅವರ ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚಿಸಿತು. ಆ ಹೊತ್ತಿಗೆ ಗ್ರೆಗರಿ ಮನೆಯಲ್ಲಿದ್ದ ಸಾಮಗ್ರಿಗಳನ್ನಲ್ಲಾ ಕೋಟ್ಯಾನ್ ನಿವಾಸಕ್ಕೆ ಕೊಂಡೊಯ್ದಾಗಿತ್ತು. ಆದರೆ ಬೇರೆ ಗ್ರಾಮದಲ್ಲಿರುವ ಕೋಟ್ಯಾನ್ ನಿವಾಸಕ್ಕೆ ತೆರಳಲು ನಿರಾಕರಿಸಿದ ಪತ್ರಾವೋ ಆ ರಾತ್ರಿಯಂದು ಧೋ ಎಂದು ಸುರಿಯುತ್ತಿದ್ದ ಮಳೆಯೊಂದಿಗೆ ಮರವೊಂದರ ಅಡಿಯಲ್ಲೇ ದಿನ ಕಳೆದರು. ಪರಿಣಾಮವಾಗಿ ಅಸ್ವಸ್ಥಗೊಂಡಿದ್ದ ಮೇರಿ ಪತ್ರಾವೋ ಮಾರನೇ ದಿನ ಆಸ್ಪತ್ರೆ ಸೇರಿದ್ದರು. ನಂತರದ ೧೫ ದಿನಗಳನ್ನು ನೆಲಸಮಗೊಂಡಿದ್ದ ಮನೆಯ ಬಳಿಯೇ ಇರುವ ಸಣ್ಣ ತಗಡಿನ ಶೆಡ್ಡಲ್ಲೇ ತಮ್ಮ ೨ ಕೋಣ, ೨ ಎತ್ತು, ಆರು ದನ, ೩ ಕರು, ೪ ನಾಯಿ, ೫೦-೬೦ ಕೋಳಿ ಮತ್ತು ೨ ಪ್ರೀತಿಯ ಬೆಕ್ಕುಗಳೊಂದಿಗೆ ಪತ್ರಾವೋ ಕುಟುಂಬ ಅಲ್ಲೇ ದಿನಕಳೆಯಿತು.
ಒಟ್ಟಾರೆ ಪತ್ರಾವೋ ಕುಟುಂಬ ಇಂದು ದಿಕ್ಕಾಪಾಲಾಗಿ, ತಮ್ಮ ಹಳೆ ಮನೆಯ ಬಳಿ ಇರುವ ಶೆಡ್ಡೊಂದರಲ್ಲಿ ದಿನದೂಡುತ್ತಿದೆ. ಆ ಶೆಡ್ಡಿಗೆ ಟಿಎಸ್‌ಐ ಭೇಟಿ ನೀಡಿದ್ದಾಗ ಮನೆ ಮುಂದೆಯೇ ಕೋಳಿಗಳು, ನಾಯಿ, ಬೆಕ್ಕುಗಳು ಅತ್ತಿತ್ತ ಓಡಾಡುತ್ತಿದ್ದವು. ಅವುಗಳಿಗೆ ಉಳಿದುಕೊಳ್ಳಲು ಬೇರೆ ಜಾಗವಿಲ್ಲ.




ನನ್ನ ಜಾಗವನ್ನು ಬಿಟ್ಟು ನಾನು ಎಲ್ಲಿಗೂ ಕದಲುವುದಿಲ್ಲ ಎಂದು ಗ್ರೆಗರಿ ಹೇಳುವುದಕ್ಕೂ ಕಾರಣವಿದೆ. ಅವರು ಮಾಡಿರುವ ಕೃಷಿ ಪ್ರತಿಯೊಬ್ಬ ರೈತನಿಗೂ ಮಾದರಿ ಎಂದರೆ ಅತಿಶಯೋಕ್ತಿ ಎನಿಸದು. ಗ್ರೆಗರಿ ಅವರು ಹೇಳಿದಂತೆಯೇ ಅವರು ತಮ್ಮ ಜಮೀನಿನಲ್ಲಿ ಸುಮಾರು ೪೦೦೦ ಅಡಿಕೆ ಮರ, ೨೫೦ ತೆಂಗಿನ ಮರ, ೨೦೦೦ ವೆನಿಲಾ ಬಳ್ಳಿ, ೨೫೦ ಬಾಳೆಗಿಡ, ೫೦೦ ವೀಳ್ಯದ ಎಲೆ ಬಳ್ಳಿ, ಮೂರು ಕಾಲದಲ್ಲೂ ಬೆಳೆಯಲಾಗುವ ಭತ್ತ, ೧೦೦೦ ಗೇರು ಮರ, ೬೫ ಮಾವಿನ ಮರ, ೫೦-೬೦ ಹಲಸಿನ ಮರ, ೧೫ ಹುಣಸೆ ಮರ, ೨-೩ ಸಂಪಿಗೆ ಮರ, ೫೦ ಪುನರ್ಪುಳಿ ಮರ, ೨೫ ನೊರೆಕ್ಕಾಯಿ ಮರ, ೫೦ ಮಲ್ಲಿಗೆ ಗಿಡ, ೭-೮ ಪಪ್ಪಾಯಿ ಮರ, ೫೦ ಹೆಬ್ಬಲಸು, ೧೨ ಜೀಗುಜ್ಜೆ ಮರ ಸೇರಿದಂತೆ ಹಲವು ಕೃಷಿ ಮಾಡಿದ್ದಾರೆ. ಹಾಗಿರುವಾಗ ಸರ್ಕಾರ ೨.೨೪ ಕೋಟಿ ರೂ ಹಣ ಕೊಟ್ಟರೂ ಅದು ನನಗೆ ಬೇಡ ಎನ್ನುವ ಗ್ರೆಗರಿ ಮಾತಿನಲ್ಲಿ ಖಂಡಿತಾ ತಥ್ಯವಿದೆ.




ಹಾಗೆ ನೋಡಿದರೆ ಏಕ ಬೆಳೆ ಬೆಳೆವ ಅಥವಾ ಬರಡು ಭೂಮಿಯಲ್ಲಿ ಮಾತ್ರ ಕೈಗಾರಿಕೆಗಳನ್ನು ನಡೆಸಬೇಕು ಎಂದು ಕಾನೂನಿದೆ. ಹಾಗಾದರೆ ಈ ಕಾನೂನು ಗ್ರೆಗರಿ ಪತ್ರಾವೋ ಕುಟುಂಬಕ್ಕೆ ಏಕೆ ಅನ್ವಯವಾಗಿಲ್ಲ?

ಅಂತಿಮವಾಗಿ ರೈತನೊಬ್ಬ ದಶಕಗಳಿಂದಲೂ ಭೂಮಿ ನೀಡುವುದಿಲ್ಲ ಎಂದು ಎಸ್‌ಇಝಡ್, ಎಂಆರ್‌ಪಿಎಲ್ ಮತ್ತು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಇಲಾಖೆ) ವಿರುದ್ಧ ಹೋರಾಟ ನಡೆಸಿದ್ದರ ಫಲವಾಗಿ ದೊರೆತ ಪುರಸ್ಕಾರ ಇದು! ೧೮೮೬ರ ಇಸವಿಯ ಹಂಚನ್ನು ಬಳಸಿ ಕಟ್ಟಿದ್ದ ಮನೆ ಇಂದು ನಾಮಾವಶೇಷವಾಗಿ ನೆಲಸಮಗೊಂಡಿದ್ದರೂ ಕೆಐಎಡಿಬಿ ಮನೆ ಧ್ವಂಸಗೊಳಿಸಲು ಬಳಸಿಕೊಂಡಿದ್ದ ಮಾರ್ಗ ಮಾತ್ರ ನಿಜಕ್ಕೂ ಪ್ರಶ್ನಾರ್ಹ. ಕೆಐಎಡಿಬಿ ಮತ್ತು ಪೊಲೀಸರು ಬಂದಿದ್ದ ವೇಳೆ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಲ್ಲಾಸ್ ಭಂಡಾರಿ ಮತ್ತು ರಾಜೇಶ್ ಅಲಿಯಾಸ್ ಜೂನಿಯರ್ ಉಪೇಂದ್ರ ಎಂದು ಖ್ಯಾತಿವೆತ್ತ ಗೂಂಡಾಗಳು ಏತಕ್ಕಾಗಿ ಗ್ರೆಗರಿ ನಿವಾಸದ ಬಳಿ ಬಂದಿದ್ದರು? ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಅವರು ತಮ್ಮ ಕೆಲಸಕ್ಕೆ ಗೂಂಡಾಗಳನ್ನು ಬಳಸಿಕೊಂಡದ್ದು ವಿಡಿಯೋ ಚಿತ್ರೀಕರಣದಲ್ಲೂ ಸಾಬೀತಾಗಿದೆ. ಆದರೆ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಈ ಗೂಂಡಗಳು ಯಾರೆಂದೇ ಗೊತ್ತಿಲ್ಲ!



ಅಭಿವೃದ್ಧಿಗಾಗಿ ಪತ್ರಾವೋ ಕುಟುಂಬ ತನ್ನ ಭೂಮಿಯನ್ನು ಕೊಟ್ಟಿರುವ ಬಗೆಯನ್ನು ಒಮ್ಮೆ ಗಮನಿಸಿ: ಮೇರಿ ಪತ್ರಾವೋ ಅವರು ತೋಕೂರಿನಲ್ಲಿದ್ದ ತಮ್ಮ ೨.೪೦ ಎಕರೆ ಭೂಪ್ರದೇಶವನ್ನು ಕೊಂಕಣ ರೈಲ್ವೇ ಯೋಜನೆಗೆ, ಹಾಗೇ ತಕೂರಿನಲ್ಲಿದ್ದ ೨.೬೨ ಎಕರೆ ಪ್ರದೇಶವನ್ನು ಜಾಸ್ಕೋ ಸಂಸ್ಥೆಗೆಂದು ನೀಡಿದ್ದಾರೆ. ಆದರೆ ಆ ಪ್ರದೇಶವನ್ನು ಬಳಿಕ ನಾಗಾರ್ಜುನ ಯೋಜನೆಗೆ ಹಸ್ತಾಂತರಿಸಲಾಯಿತು. ೧೯೮೪ರಲ್ಲಿ ಕೆಐಎಡಿಬಿ ಎಂಆರ್‌ಪಿಎಲ್‌ಗೆಂದು ಪತ್ರಾವೋ ಅವರ ೧೪.೨೭ ಎಕರೆ ಭೂಮಿಯನ್ನು ನೀಡಲು ನೊಟೀಸ್ ಜಾರಿ ಮಾಡಿತು. ೧೯೯೬ರಲ್ಲಿ ಎಂಆರ್‌ಪಿಎಲ್ ೧೪.೨೭ ಎಕರೆ ಪ್ರದೇಶದಲ್ಲಿನ ೫೨ ಸೆಂಟ್ಸ್ ಜಾಗವನ್ನು ವಶಪಡಿಸಿಕೊಂಡಿತು. ೨೦೦೯ರಲ್ಲಿ ೧.೪೫ ಎಕರೆ ಭೂಪ್ರದೇಶ ಯುಪಿಸಿಎಲ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಯೋಜನೆಗೆ ನಿಗದಿಯಾಯಿತು. ಈ ಮಧ್ಯೆ ೨೦೦೭ರಲ್ಲಿ ಕೆಐಎಡಿಬಿ ಹಲವು ವಿವಿಧ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಬರುವ ಪೆರ್ಮುದೆ ಹಾಗೂ ಕಳವಾರು ಗ್ರಾಮದ ೧೭೧ ಎಕರೆ ಭೂಪ್ರದೇಶವನ್ನು ಎಸ್‌ಇಝಡ್‌ಗೆ ಹಸ್ತಾಂತರಿಸುವುದಾಗಿ ನೊಟೀಸ್ ಜಾರಿ ಮಾಡಿತು. ಅದರಲ್ಲಿ ಗ್ರೆಗರಿ ಅವರ ಭೂಮಿಗೂ ನೊಟೀಸ್ ಜಾರಿಯಾಗಿತ್ತು. ಆದರೆ ಇಂದು ಅವರ ಮನೆ ನೆಲಸಮಗೊಂಡಿರುವುದು ಎಂಆರ್‌ಪಿಎಲ್ ಯೋಜನೆ ವಿಸ್ತರಣೆಗಾಗಿ.

ಈ ಬಗ್ಗೆ ವಿಶೇಷ ಭೂಸ್ವಾಧೀನ ಅಧಿಕಾರಿ ಕೃಷ್ಣಮೂರ್ತಿ ಅವರಲ್ಲಿ ಕೇಳಿದರೆ, ಎಸ್‌ಇಝಡ್ ಈ ಭೂಮಿಯನ್ನು ನಮಗೆ ಸರಂಡರ್ ಮಾಡಿತು. ಹಾಗಾಗಿ ಇದನ್ನು ಎಆರ್‌ಪಿಎಲ್ ಬಳಸಿಕೊಳ್ಳಲಿದೆ ಎಂದರು. ಒಟ್ಟಾರೆ ಈ ಎಲ್ಲಾ ಭೂ ಹಸ್ತಾಂತರ ಹಾಗೂ ದಶಕಗಳ ಕಾಲದ ಹೋರಾಟದಿಂದ ಕಂಗೆಟ್ಟಿರುವ ಗ್ರೆಗರಿ ತಮ್ಮಲ್ಲಿ ಒಂದು ರಾಶಿ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಕೋರ್ಟು-ಕಚೇರಿ ಎಂದು ಇಂದಿಗೂ ತಿರುಗಾಡುತ್ತಲೇ ಇದ್ದಾರೆ.

ಕೆಐಎಡಿಬಿ ಅಮಾನವೀಯ, ಅನಾಗರಿಕ ವರ್ತನೆಗೆ ಶಿಕ್ಷೆಯಾಗಲೇಬೇಕು, ರೈತನ ಬದುಕಿನ ಸ್ವರೂಪವನ್ನೇ ಹಾಳು ಮಾಡಿದ ಇವರು ಖಂಡಿತಾ ಮನುಷ್ಯರಲ್ಲ, ರಾಕ್ಷಸರು. ರೈತರ ಶಾಪ ಇವರಿಗೆ ತಟ್ಟದೆ ಇರುವುದಿಲ್ಲ ಎಂದು ಗುಡುಗುತ್ತಾರೆ ಪತ್ರಾವೋ. ಪತ್ರಾವೋ ಕುಟುಂಬ ಕರ್ತವ್ಯಕ್ಕೆ ಅಡ್ಡಿಪಡಿಸಿತು ಎಂದು ಕೆಐಎಡಿಬಿ ಮೇರಿ ಪತ್ರಾವೋ ವಿರುದ್ಧ ಕೇಸು ದಾಖಲು ಮಾಡಿದ್ದರೂ, ನಾವು ಕೇಸು ದಾಖಲು ಮಾಡಿಯೇ ಇಲ್ಲ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿ ಎಸ್. ಕೃಷ್ಣಮೂರ್ತಿ ಟಿಎಸ್‌ಐಗೆ ತಿಳಿಸಿದ್ದಾರೆ. ಏಪ್ರಿಲ್ ೨೯ರಂದು ಅವರು ಕೇಸು ದಾಖಲು ಮಾಡಿದ್ದಾರೆಂದೇ ನಾವು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು ಎನ್ನುತ್ತಾರೆ ಗ್ರೆಗರಿ ಪತ್ರಾವೋ. ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ೨೫ ದಿನಗಳ ನಿರಂತರ ಉಪವಾಸ ಸತ್ಯಾಗ್ರಹ ಮಾಡಿದ್ದ ಗ್ರೆಗರಿ ಮನೆ ಧ್ವಂಸ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ.

ಗಮನಿಸಬೇಕಾದ ಅಂಶ ಎಂದರೆ ಪತ್ರಾವೋ ಕುಟುಂಬ ಭೂಮಿ ಕಳೆದುಕೊಂಡಿರುವುದು ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ. ಈ ಹಂತಕ್ಕೆ ಈಗಾಗಲೇ ೧೮೦೦ ಎಕರೆ ಭೂಮಿ ವಶಪಡಿಸಿಕೊಂಡಾಗಿದ್ದು ಅಲ್ಲಿ ದೊಡ್ಡ ಮಟ್ಟದ ಕೈಗಾರಿಕೆಗಳೂ ಆರಂಭವಾಗಿವೆ.

ಎರಡನೇ ಹಂತದಲ್ಲಿ ೨೦೩೫ ಎಕರೆ ಭೂ ಸ್ವಾಧೀನಕ್ಕೆ ಈಗಾಗಲೇ ಕೆಐಎಡಿಬಿ ಸಿದ್ಧತೆ ಮಾಡಿಕೊಂಡಿದ್ದು ಹಲವಾರು ಕುಟುಂಬಗಳು ತಮ್ಮ ಕೃಷಿ ಪ್ರದೇಶಗಳನ್ನು ಕಳೆದುಕೊಳ್ಳಲಿವೆ. ಕುಡುಬಿ ಜನಾಂಗದವರು ನೆಲೆಸಿರುವ ಕುಡುಬಿಪದವಿನಲ್ಲಿನ ೧೫.೩೪ ಎಕರೆ ಭೂಪ್ರದೇಶವನ್ನು ಅದಾಗಲೇ ಎರಡು ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಆ ಜನಾಂಗದ ಭೂಮಿ ಸೇರಿದಂತೆ ಹಲವು ಕುಟುಂಬಗಳ ಬದುಕೇ ಬಂಜರಾಗಿಬಿಟ್ಟಿದೆ.

ಪೆರ್ಮುದೆ ಗ್ರಾಮದಲ್ಲಿನ ಸುಮಾರು ೭ ಎಕರೆ ಪ್ರದೇಶದಲ್ಲಿ ಅತ್ಯಂತ ಸುಂದರ ಮಾದರಿಯಲ್ಲಿ ಕೃಷಿ ಮಾಡಿಕೊಂಡಿರುವ ಲಾರೆನ್ಸ್ ಅವರ ಮನೆ ಬಳಿ ತೆರಳಿದರೆ ಹಚ್ಚಹಸಿರು ಎದ್ದುಕಾಣುತ್ತದೆ. ಅವರು ಮಾಡಿರುವ ಕೃಷಿ ನಮಗೆಲ್ಲಾ ಮಾದರಿ ಎಂದು ಹೇಳುವ ಪೆರ್ಮುದೆಯ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಉಪಾಧ್ಯಾಯರು ನಾನು ಖಂಡಿತಾ ಈ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅದೇನೆ ಆಗಲಿ ನಾವು ಹೋರಾಟಕ್ಕೆ ಸಿದ್ಧ ಎನ್ನುತ್ತಾರೆ. ನಮ್ಮ ಮಾತುಕತೆಯನ್ನು ಗಮನಿಸುತ್ತಿದ್ದ ಉಪಾಧ್ಯಾಯರ ೮೩ ವರ್ಷದ ತಾಯಿ ವರದ ಅವರು, ನಾನು ಸತ್ತರೆ ಇಲ್ಲೇ ಸಾಯುವುದು. ನನ್ನ ಪ್ರಾಣವನ್ನಾದರೂ ನೀಡುವೆ, ಆದರೆ ಭೂಮಿಯನ್ನಲ್ಲ. ಇದೇನು ಅವರ ಅಪ್ಪನ ಮನೆ ಆಸ್ತಿಯಾ ಎಂದು ಪ್ರಶ್ನಿಸಿದರು. ಆದರೆ ಕೆಐಎಡಿಬಿ ಪ್ರಕಾರ ಇಲ್ಲಿರುವುದು ಫಲವತ್ತಾದ ಭೂಮಿ ಅಲ್ಲ. ಬೆಟ್ಟಗುಡ್ಡಗಳಿಂದ ಕೂಡಿದ್ದ ಭೂಮಿಯಲ್ಲಿ ನೀವೆಂತಹ ಕೃಷಿ ಮಾಡುತ್ತೀರಿ ಎಂಬುದು ಕೆಐಎಡಿಬಿ ಅಧಿಕಾರಿಗಳ ಪ್ರಶ್ನೆ. ಆದರೆ ವಾಸ್ತವ ಹಾಗಿಲ್ಲ, ಅದು ಫಲವತ್ತಾದ ಜಾಗವೇ ಎಂಬುದು ಕೆಐಎಡಿಬಿಗೂ ಗೊತ್ತು, ಎಸ್‌ಇಝಡ್‌ಗೂ ಗೊತ್ತು. ಭೂಸ್ವಾಧೀನವನ್ನು ವಿರೋಧಿಸುತ್ತಿರುವ ಕುಟುಂಬಗಳಿಗೂ ಗತಿಯೂ ಗ್ರೆಗರಿ ಪತ್ರಾವೋ ಕುಟುಂಬಕ್ಕೇ ಉಂಟಾದ ಗತಿಯಾದಲ್ಲಿ ಅಚ್ಚರಿಯೇನಿಲ್ಲ ಬಿಡಿ.


ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನ!
ಎಂಎಸ್‌ಇಝಡ್ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳು ಅಂದರೆ ಕೈಗಾರಿಕೆಗಳಿಗೆ ಭೂಮಿ ನೀಡಿರುವ ಕುಟುಂಬದವರಿಗೆ ಉದ್ಯೋಗ ನೀಡಲಿದ್ದೇವೆ ಎಂದು ಎಸ್‌ಇಝಡ್ ಭರವಸೆ ನೀಡಿತ್ತು. ಇದಕ್ಕಾಗಿ ೧೦ನೇ ತರಗತಿ ಪಾಸಾಗಿರುವ ಅಲ್ಲಿನ ಕುಟುಂಬದ ಮಕ್ಕಳಿಗೆ ಮಂಗಳೂರಿನ ಯೆಯ್ಯಾಡಿ ಬಳಿ ಇರುವ ಕೆಪಿಟಿ (ಕರ್ನಾಟಕ ಪಾಲಿಟೆಕ್ನಿಕ್)ಯಲ್ಲಿ ವಿಶೇಷವಾಗಿ ಸ್ಪೆಷಲ್ ಕೋರ್ಸಸ್ ಇನ್ ಕೆಮಿಕಲ್, ಮೆಕ್ಯನಿಕಲ್ ಅಂಡ್ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಷಯದಲ್ಲಿ ಮೂರು ವರ್ಷಗಳ ತರಬೇತಿ ಶಿಕ್ಷಣವನ್ನು ನೀಡುತ್ತಿದೆ. ಈಗಾಗಲೇ ಶಿಕ್ಷಣದ ೫ ಸೆಮೆಸ್ಟರ್‌ಗಳು ಮುಗಿದಿದ್ದು ಒಂದು ಸೆಮೆಸ್ಟರ್ ಬಾಕಿ ಇದೆ. ಆದರೆ ಸಮಸ್ಯೆ ತಲೆದೋರಿರುವುದು ಶಿಕ್ಷಣದಲ್ಲಲ್ಲ. ಆದರೆ ನೀಡಿದ್ದ ಉದ್ಯೋಗ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಲಿದೆ ಎಂಬುದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿದೆ.

ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮಾತನಾಡಿಸಲೆಂದು ಟಿಎಸ್‌ಐ ‘ಕೆಪಿಟಿಗೆ ಭೇಟಿ ನೀಡಿದ್ದಾಗ ಅಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಆ ಕಾಲೇಜಿನ ಪ್ರಾಂಶುಪಾಲರಲ್ಲಿ ಕೇಳಿದಾಗ, ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ ಎಂದರು.
ಎಲ್ಲಾ ಮಕ್ಕಳಿಗೆ ಉದ್ಯೋಗ ದೊರಕುವುದು ಸಾಧ್ಯವಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ. ಎಸ್‌ಇಝಡ್ ತನ್ನ ನಿರೀಕ್ಷೆಯ ಪ್ರಮಾಣದಷ್ಟು ಅಭಿವೃದ್ಧಿ ಸಾಧಿಸಲು ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ನೀಡಲಾಗುತ್ತಿರುವ ಶಿಕ್ಷಣದ ಅವಧಿಯೂ ಕೊನೆಗೊಳ್ಳುವ ದಿನಗಳು ದೂರವಿಲ್ಲ. ಹಾಗಾಗಿ ಮನನೊಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಎಸ್‌ಇಝಡ್ ನೇರ ಹೊಣೆಯಾಗಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ‘ಕೆಪಿಟಿಯ ಓರ್ವ ಸಿಬ್ಬಂದಿ.

ಕಾಲೇಜು ನೀಡಿರುವ ದಾಖಲೆ ಪ್ರಕಾರ ಇಲ್ಲಿ ಎಂಎಸ್‌ಇಝಡ್ ವ್ಯಾಪ್ತಿಗೆ ಒಳಪಟ್ಟ ೪೦೯ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ೩೧೯ ವಿದ್ಯಾರ್ಥಿ ಮತ್ತು ೮೯ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಟಿಎಸ್‌ಐ ಭೇಟಿ ನೀಡಿದ್ದ ಒಂದು ದಿನದ ನಂತರ ಅಂದರೆ ಜುಲೈ ೨೭ರಂದು ತಮ್ಮ ತರಗತಿ ಬಹಿಷ್ಕಾರ ಹಿಂತೆಗೆದುಕೊಂಡಿದ್ದರು. ಪೆರ್ಮುದೆಯ ಸಂಯುಕ್ತ ಹಿತರಕ್ಷಣಾ ಸಮಿತಿ, ಎಸ್‌ಇಝಡ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಮುಖ್ಯಮಂತ್ರಿಯವರ ಆಪ್ತಸಹಾಯಕ ಹಾಗೂ ಎಂಎಸ್‌ಇಝಡ್‌ನ ನಿರ್ದೇಶಕ ಮತ್ತು ಸಂಯೋಜಕ ಐ.ಎಸ್.ಎನ್. ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಇನ್ನು ೧೦-೧೨ ದಿನಗಳೊಳಗಾಗಿ ತಾವು ಅಲ್ಲಿಗೆ ಬರುವುದಾಗಿಯೂ ಅವರು ಹೇಳಿದ್ದರು ಎನ್ನಲಾಗಿದೆ.

ಟಿಎಸ್‌ಐಗೆ ಮಾಹಿತಿ ನೀಡಿದ ಸಿಬ್ಬಂದಿ ಪ್ರಕಾರ ಎಂಎಸ್‌ಇಝಡ್ ವಿದ್ಯಾರ್ಥಿಗಳಿಗೆ ಎಂಎಸ್‌ಇಝಡ್‌ನಲ್ಲಿ ಬಿಟ್ಟರೆ ಬೇರೆಲ್ಲೂ ಕೆಲಸ ಸಿಗುವುದು ತುಂಬಾ ಕಷ್ಟದ ಮಾತು. ಏಕೆಂದರೆ ಅವರಲ್ಲಿ ಕೈಗಾರಿಕೆಗೆ ಬೇಕಾಗುವ ಕೌಶಲ್ಯ ಇಲ್ಲ. ಹಾಗೇ ಅವರಿಗೆ ಕಡಿಮೆ ಅಂಕಗಳನ್ನು ನೀಡಬಾರದು ಎಂದು ಎಸ್‌ಇಝಡ್ ತಾಕೀತು ಮಾಡಿದೆ. ಒಟ್ಟಾರೆ ಕೆಪಿಟಿಯಲ್ಲಿ ಬೋಧಿಸುತ್ತಿರುವ ಉಪನ್ಯಾಸಕರು ಈ ಕೆಲಸಕ್ಕೆ ಹೆಚ್ಚುವರಿ ವೇತನ ಪಡೆಯುತ್ತಿದ್ದಾರೆ. ಸಂಸ್ಥೆಗೂ ಕೂಡ ಲಾಭವಾಗಿದೆ. ನಷ್ಟವಾಗುವುದು ಮಾತ್ರ ಖಂಡಿತಾ ವಿದ್ಯಾರ್ಥಿಗಳಿಗೆ. ಏಕೆಂದರೆ ಇಲ್ಲಿನ ಸರ್ಟಿಫಿಕೇಟ್‌ನ್ನು ಹಿಡಿದುಕೊಂಡು ಹೋದರೆ ಖಂಡಿತ ಅವರಿಗೆ ಬೇರೆ ಕಡೆ ಉದ್ಯೋಗ ಸಿಗದು. ಇದು ಎಸ್‌ಇಝಡ್ ಅಧಿಕಾರಿಗಳು ಗ್ರಾಮಸ್ಥರು ಹಳ್ಳಿ ಜನರನ್ನು ತಮ್ಮ ವಿರುದ್ಧ ತಿರುಗಿಬೀಳದಂತೆ ಮಾಡಿಕೊಂಡಿರುವ ತಂತ್ರವಷ್ಟೇ.

ಒಟ್ಟಾರೆ ಕಡಲೂರಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಹಳ್ಳಿಗರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕೆಪಿಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿಬಿಟ್ಟಿದೆ. ಅದರ ನಡುವೆಯೇ ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು, ತೆಂಕ ಎಕ್ಕಾರಿನ ನಿವಾಸಿಗಳು ತಮ್ಮ ಮನೆಬಿಟ್ಟುಕೊಡಲು ಸಜ್ಜುಗೊಳ್ಳಬೇಕಿದೆ. ಮಂಗಳೂರಿನ ಹಳ್ಳಿಗಾಡಿನಲ್ಲಿ ಉಬ್ಬುಬ್ಬಿ ವಿಶಾಲವಾಗಿ ಹರಡಿ ಹೋಗಿದ್ದ ಹಚ್ಚಹಸಿರಿನ ವಸುಂಧರೆ ಎಸ್‌ಇಝಡ್, ಎಂಆರ್‌ಪಿಎಲ್ ಸೇರಿದಂತೆ ಕೈಗಾರಿಕಾ ಕಂಪನಿಗಳ ಕಬಂಧಬಾಹುಗಳಲ್ಲಿ ಸಿಲುಕಿ ತನ್ನ ದಿನಗಳನ್ನು ಎಣಿಸಿಕೊಳ್ಳಬೇಕಿದೆ.

1 comment:

PARAANJAPE K.N. said...

ಕಡಲೂರಿನ ಕೋಲಾಹಲದ ಸುದ್ದಿಯನ್ನು ಮಾಧ್ಯಮಗಳ ಮೂಲಕ ಮತ್ತು ನೀವೇ ಸ೦ಡೇ ಇ೦ಡಿಯನ್ ನಲ್ಲಿ ಬರೆದ ಪ್ರತ್ಯಕ್ಷ ವರದಿಯಿ೦ದ ತಿಳಿದುಕೊ೦ಡಿದ್ದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉ೦ಟಾಗಬಹುದಾದ ಪರಿಣಾಮ ಗಳು ಅದೆಷ್ಟು ಭೀಕರ ಎ೦ಬುದನ್ನು ಊಹಿಸುವುದು ಕೂಡ ಕಷ್ಟ.