Friday 19 September 2008

ಹೀಗೊಂದು ಸ್ವಾತಂತ್ರ್ಯಗಾಥೆ...

ಅದು 104 ವರ್ಷದ ಹಿರಿಯ ಜೀವ. 66 ವರ್ಷಗಳ ಹಿಂದೆ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆಕೊಟ್ಟಾಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಎನ್.ಎಚ್. ಹುಚ್ಚುರಾಯಪ್ಪ 'ಕ್ವಿಟ್ ಇಂಡಿಯಾ' ಚಳವಳಿಗೆ ಧುಮುಕಿದ್ದರು. ಅಂದಿನಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಹೋರಾಟವನ್ನೇ ಜೀವನವಾಗಿಸಿಕೊಂಡಿದ್ದ ಹುಚ್ಚುರಾಯಪ್ಪ, ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಕೂಡ ಒಂದು ಹೋರಾಟ ಮಾಡಿದರು.

ಇದು ಒಂಥರ ವಿಚಿತ್ರವಾದ ಹೋರಾಟ. ಅವರು ಕರ್ನಾಟಕದಿಂದ ನವದೆಹಲಿಗೆ ಹೊರಟಿದ್ದು, ದೇಶದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹ್ವಾನದ ಮೇರೆಗೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೇ ಸೇರಿರುವ ಹುಚ್ಚುರಾಯಪ್ಪ ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿತು. ಅದರೆ, ಕೊನೆಯ ಕ್ಷಣದಲ್ಲಿ ನಿಮ್ಮ ಪ್ರಯಾಣದ ವ್ಯವಸ್ಥೆ ನೀವು ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಕಚೇರಿ ಕೈತೊಳೆದುಕೊಂಡಿತು. ಕೊನೆಗೆ ತಮ್ಮ ಸಹಾಯಕ್ಕಾಗಿ ಮಗನನ್ನು ಕರೆದುಕೊಂಡು ರೈಲು ಹತ್ತಿದ ಹಿರಿಯ ಜೀವ ನವದೆಹಲಿ ತಲುಪಿತು.

ಇವರಂತೆಯೇ ಕರ್ನಾಟಕದಿಂದ ಇನ್ನೂ ನಾಲ್ವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪತಿ ಭವನದಲ್ಲಿನ ವಿಶೇಷ ಚಹಾಕೂಟಕ್ಕೆ ಆಗಮಿಸಿದ್ದರು. ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹುಚ್ಚುರಾಯಪ್ಪ ಅವರಂತೆ ಬಿ. ಶಂಭುಶೆಟ್ಟಿ, ಚನ್ನಪ್ಪಗೌಡ, ಸಿ.ಎಂ ಪಾಲಾಕ್ಷಪ್ಪ ಹಾಗೂ ಎಸ್.ಐ. ಅರುಲ್‌ದಾಸ್ ಕೂಡ ರಾಜಧಾನಿಗೆ ಬಂದಿಳಿದಿದ್ದರು. ಇವರೆಲ್ಲರ ಜೊತೆ ಸಹಾಯಕ್ಕಾಗಿ ಒಬ್ಬೊಬ್ಬರು ಸಂಬಂಧಿಕರು ಕೂಡ ದೆಹಲಿಗೆ ಬಂದಿದ್ದರು. ಅದು ಸ್ವಂತ ಖರ್ಚಿನಲ್ಲಿ! ರಾಷ್ಟ್ರಪತಿಗಳ ಜೊತೆಗೆ ಚಹಾಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ ಕೇಂದ್ರ ಸರ್ಕಾರವಾಗಲೀ ಅಥವಾ ಅವರನ್ನು ಕಳುಹಿಸಿದ ರಾಜ್ಯ ಸರ್ಕಾರವಾಗಲೀ ವಿಮಾನ ಬಿಡಿ (ಸ್ವಾತಂತ್ರ್ಯ ಹೋರಾಟಗಾರರು ವಿಮಾನಗಳಲ್ಲಿ ಹಾರಾಡಲು ಅರ್ಹರಲ್ಲ. ಏನಿದ್ದರೂ ಖಾದಿ ತೊಟ್ಟ 'ದೇಶಭಕ್ತರು' ಮಾತ್ರ ಸರ್ಕಾರಿ ದುಡ್ಡಿನಲ್ಲಿ ವಿಮಾನವೇರಿ ಹಾರಾಡಲು ಅರ್ಹರು!) ಕನಿಷ್ಠ ಹತ್ತು ರೈಲು ಟಿಕೆಟುಗಳನ್ನು ಖರೀದಿಸಿ ಇವರನ್ನು ದೆಹಲಿಗೆ ಕಳುಹಿಸುವ ಔದಾರ್ಯವನ್ನೂ ತೋರಲಿಲ್ಲ.

ಅದೇ ರೀತಿ ದೇಶದೆಲ್ಲೆಡೆಯಿಂದ ಒಟ್ಟು 294 ಮಂದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಈ ವರ್ಷದ ಚಹಾ ಕೂಟಕ್ಕೆ ಆಹ್ವಾನಿಸಲಾಗಿತ್ತು. ಪ್ರತಿ ವರ್ಷ ಆಗಸ್ಟ್ 9ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರಪತಿಗಳು ಚಹಾಕೂಟಕ್ಕೆ ಆಹ್ವಾನಿಸುವುದು ಸಂಪ್ರದಾಯ. ಆ ಸಂಪ್ರದಾಯದ ಸವಿ ಅನುಭವಿಸಲು ಬಂದವರ ಪೈಕಿ ಹೆಚ್ಚಿನ ಪಕ್ಷ ಎಲ್ಲರ ಕಥೆ ಕೂಡ ಇದೇ ಇರಬಹುದು. ಹೀಗೆ ಪಡಬಾರದ ಪಾಡು ಪಟ್ಟು ರಾಜಧಾನಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಬಂದವರಿಗೆ ಸಿಕ್ಕಿದ್ದಾದರೂ ಏನು? ಸುಮಾರು ಎರಡು ಗಂಟೆಗಳಷ್ಟು ಕಾಲ ನಡೆದ ಆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಶಾಲು ಹೊದಿಸಿ, ವಾಚೊಂದನ್ನು ನೀಡಿ ಸನ್ಮಾನಿಸಲಾಯಿತು. ಉಳಿದಂತೆ ಇವರ ಆಗುಹೋಗುಗಳನ್ನು ಕೇಳುವವರು ಯಾರೂ ಇರಲಿಲ್ಲ. ರಾಷ್ಟ್ರಪತಿಗಳೊಂದಿಗೆ ಚಹಾಕೂಟದಲ್ಲಿ ಭಾಗವಹಿಸಲು ಇವರೆಷ್ಟು ಅರ್ಹರು? ಎಂಬ ಪ್ರಶ್ನೆ ಕೂಡ ಈಗಿನ ಕುಡಿಮೀಸೆಯ ಹುಡುಗರಲ್ಲಿ ಮೂಡಬಹುದು. ಅದು ಅರ್ಥವಾಗಬೇಕಿದ್ದರೆ ಒಮ್ಮೆ ಈ ಹಿರಿಯರ ಜೀವನದತ್ತ ಇಣುಕು ನೋಟ ಹರಿಸಬೇಕು.

81ರ ಹರೆಯದ ಸಿ.ಎಂ. ಪಾಲಾಕ್ಷಪ್ಪ, ವೃತ್ತಿಯಲ್ಲಿ ಆಯುರ್ವೇದ ವೈದ್ಯ. 1947ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬೆಂಗಳೂರು ಸೆಂಟ್ರಲ್ ಜೈಲು ಸೇರಿದರು. ಪಾಲಾಕ್ಷಪ್ಪನವರು ಮತ್ತೆ ಬಿಡುಗಡೆಯ ಭಾಗ್ಯ ಕಂಡಿದ್ದು ಕರ್ನಾಟಕ ಏಕೀಕರಣದ ನಂತರ. ನಿಜಲಿಂಗಪ್ಪ, ಹೆಚ್.ಟಿ ದಯಾಳ್, ಕೆ.ಟಿ ಭಾಷ್ಯಂ ಇವರೆಲ್ಲರ ನಿಕಟ ಸಂಪರ್ಕ ಹೊಂದಿದ್ದವರು ಪಾಲಾಕ್ಷಪ್ಪ. ಬಿಡುಗಡೆಯ ನಂತರ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಕಾಂಗ್ರೆಸ್ ನಾಯಕರೊಂದಿಗೆ ಒಡನಾಟ ಹೊಂದಿದ್ದ ಈ ಸ್ವಾತಂತ್ರ್ಯ ಸೇನಾನಿಗೆ ಇಂದಿನ ಧನಬಲ, ತೋಳ್ಬಲ ಹಾಗೂ ಅಧಿಕಾರ ಲಾಲಸೆಯ ರಾಜಕಾರಣವನ್ನು ಕಂಡಾಗ, ಅಂದು ತಾವು ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಕಳಕಳಿಯಿದೆ. ಆದರೆ, ಇವರ ಬಗ್ಗೆ ಕಳಕಳಿ ತೋರಿಸುವವರು...? ಅಂದಹಾಗೆ ಸಿ.ಎಂ ಪಾಲಾಕ್ಷಪ್ಪ ಇಂದಿಗೂ ವಾಸವಿರುವುದು ಬಾಡಿಗೆ ಮನೆಯಲ್ಲೇ! ಸುಮಾರು 200ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ 2005ರಲ್ಲಿ ರಾಜ್ಯ ಸರ್ಕಾರದಿಂದ ಅವರಿಗೆ ಪಿಂಚಣಿ ಮಂಜೂರಾಗಿದೆ!

90 ಹರೆಯದ ಉಡುಪಿ ಮೂಲದ ಶಂಭುಶೆಟ್ಟಿ ಅವರು 1932ರಲ್ಲೇ ಸ್ವಾತಂತ್ರ ಹೋರಾಟಕ್ಕೆ ಕಾಲಿಟ್ಟವರು. ನಂತರ ಹಿಂದಿರುಗಿ ನೋಡಲಿಲ್ಲ. ಏಳನೇ ವರ್ಷಕ್ಕೆ ಶಾಲೆ ತೊರೆದ ಅವರು ಎರಡು ಬಾರಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಆದರೆ ಜೈಲಿನಲ್ಲಿ ಕಳೆದ ದಿನಗಳನ್ನು ಅಷ್ಟೇ ರೋಚಕವಾಗಿ ವಿವರಿಸುತ್ತಾರೆ ಶಂಭು ಶೆಟ್ಟಿ. 'ಒಂದು ವಿಶ್ವವಿದ್ಯಾಲಯದಲ್ಲಿನ ಅನುಭವ ಜೈಲಿನಿಂದ ಪಡೆದೆ. ಭಾಷಣ ಹಾಗೂ ಇತರ ಸಕ್ರಿಯ ಚಟುವಟಿಕೆಗಳು ನಮ್ಮ ಹೋರಾಟಕ್ಕೆ ಇನ್ನಷ್ಟು ಇಂಬು ನೀಡಿದ್ದವು ಎಂದು ಅಂದಿನ ದಿನಗಳ ಮೆಲುಕು ಹಾಕುತ್ತಾರೆ ಶೆಟ್ಟರು. ಆದರೆ ಅವರ ಹೋರಾಟ ಮಾತ್ರ ಮುಂದುವರಿಯುತ್ತಲೇ ಇದೆ...

ಎಂಬತ್ತೊಂದರ ಹರೆಯದ ಚನ್ನಪ್ಪಗೌಡ ನವಲಗುಂದ ತಾಲ್ಲೂಕಿನ ಸಿರಕೊಲ ಗ್ರಾಮದವರು. ಇನ್ನು ಕೋಲಾರದ ಕೆ.ಜಿ.ಎಫ್.ನ ಅರುಲ್‌ದಾಸ್ ಕೂಡ ಎಂಬತ್ತರ ಗಡಿ ದಾಟಿದ ವಯೋವೃದ್ಧ ಸ್ವಾತಂತ್ರ್ಯ ಸೇನಾನಿ. ಇವರಿಬ್ಬರೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತು ದೇಶಕ್ಕಾಗಿ ಅರ್ಪಿಸಿಕೊಂಡ ಹಿರಿಯರು.

ಹೀಗೆ ಈ ಹಿರಿಯರ ಬದುಕಿನಲ್ಲಿ ಇಣುಕು ನೋಟ ಹರಿಸಿದಾಗ ಮಾತ್ರ ಇವರೆಷ್ಟು ಅಮೂಲ್ಯ ಸಂಪತ್ತು ಎನ್ನುವುದು ಅರ್ಥವಾಗುತ್ತದೆ. ಆದರೆ, ಚಹಾಕೂಟದ ಹೆಸರಲ್ಲಿ ಅವರನ್ನು ಹೀಗೆ ಮತ್ತೊಂದು 'ಸ್ವಾತಂತ್ರ್ಯ' ಹೋರಾಟಕ್ಕೆ ಇಳಿಸಿದ್ದು ಮಾತ್ರ ವಿಪರ್ಯಾಸ ಎಂದೇ ಹೇಳಬೇಕು. ಯಾವುದೋ ಒಂದು ಸಂಪ್ರದಾಯದ ಹೆಸರಲ್ಲಿ ಅಂತಹ ವಯೋವೃದ್ಧ ಹೋರಾಟಗಾರರನ್ನು, ಅವರದೇ ಖರ್ಚಿನಲ್ಲಿ ರೈಲು ಹತ್ತಿಸುವ ಈ ವಿಪರ್ಯಾಸಕ್ಕೆ ಯಾರನ್ನು ಹೊಣೆ ಮಾಡಬೇಕು? ಅದೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರಕ್ಕೆ ಸೇರಿದ 104 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹೀಗೆ ನಡೆಸಿಕೊಂಡಿದ್ದು ಸಂಸ್ಕೃತಿ ವಾರಸುದಾರರಿಗೆ ಶೋಭೆ ತರುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಇದು ನಿಮಗೆ ಅರ್ಥವಾದೀತೆ?

Wednesday 17 September 2008

ಓಸಿಯನ್ 'ಟಾಕೀಸ್'ನಲ್ಲಿ 'ಗುಲಾಬಿ'ಯ ಕಂಪು


ಅದು ನವದೆಹಲಿಯ ಸಿರಿಫೋರ್ಟ್ ಸಾಂಸ್ಕೃತಿಕ ಸಮುಚ್ಛಯ. ಅಲ್ಲಿ ಜಪಾನ್, ಕೊರಿಯಾ, ಇಸ್ರೇಲ್, ಪಾಕಿಸ್ತಾನ, ಶ್ರೀಲಂಕಾ, ಅಮೆರಿಕ, ಇಂಡೋನೇಷಿಯಾ, ಮೊರೊಕ್ಕೊ, ಈಜಿಪ್ಟ್, ಹಾಂಗ್‌ಕಾಂಗ್, ಸಿರಿಯಾ, ಫ್ರಾನ್ಸ್, ಭಾರತ ಸೇರಿದಂತೆ ಹತ್ತಾರು ದೇಶಗಳ 200ಕ್ಕಿಂತಲೂ ಅಧಿಕ ಚಲನಚಿತ್ರಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಕಲಾತ್ಮಕತೆಯಲ್ಲಿ ಅವೆಲ್ಲಾ ಒಂದಕ್ಕಿಂತ ಒಂದು ಹೆಚ್ಚೇ ಎನ್ನಿ. ಜುಲೈ 10ರಿಂದ ಆರಂಭವಾಗಿದ್ದ ಸಿನಿಮಾ ಉತ್ಸವದಲ್ಲಿ ಬರೀ ಚಿತ್ರಗಳು ಮಾತ್ರವಲ್ಲ ನಾನಾ ದೇಶಗಳ, ಬಗೆಬಗೆಯ ಭಾಷೆಯ ಜನರು ನೆರೆದಿದ್ದರು. ಇಂಗ್ಲಿಷ್ ಬಾರದ ಅದೆಷ್ಟೋ ದೇಶದ ಜನರೂ ಇದ್ದುದ್ದರಿಂದ 'ಸಾಮಾನ್ಯ ಸಂವಹನ ಭಾಷೆ'ಯಾಗಲು ಇಂಗ್ಲಿಷ್‌ಗೆ ಕೂಡಾ ಅಲ್ಲಿ ಕಷ್ಟವೇ ಆಗಿತ್ತು. 'ಓಸಿಯನ್ಸ್ ಸಿನಿಫ್ಯಾನ್ ಚಲಚಿತ್ರೋತ್ಸವ' ಅಂದರೆ ಹಾಗೆಯೇ. ಅಲ್ಲಿ ಭಾಷೆಯ ಗಡಿ ಇಲ್ಲ; ಇದ್ದಿದ್ದರೆ ಕನ್ನಡ ಈ ಚಿತ್ರೋತ್ಸವದಲ್ಲಿ ಮೆರೆಯುವ ಸಾಧ್ಯತೆಯಿತ್ತೇ?

ಈ ಬಾರಿಯ 10ನೇ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ' ಕೂಡಾ ವಿಶೇಷತೆ ಮೆರೆಯದೆ ಇರಲಿಲ್ಲ. ಆದರೆ ಕನ್ನಡಿಗರಾದ ನಮಗೆ ಎಲ್ಲಕ್ಕಿಂತ ವಿಶೇಷವಾಗಿ ಕಂಡದ್ದು, ಕನ್ನಡದ ಇಬ್ಬರು ಪ್ರತಿಭಾವಂತರು ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದದ್ದು.

'ಗಿರೀಶ್ ಕಾಸರವಳ್ಳಿ' ಅವರ 'ಗುಲಾಬಿ ಟಾಕೀಸ್' ಭಾರತೀಯ ಚಿತ್ರಗಳ ವಿಭಾಗದಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿಗೆ ಪಾತ್ರವಾಯಿತು. ಕಾಸರವಳ್ಳಿ ಚಿತ್ರ ಅಂದಮೇಲೆ ಪ್ರಶಸ್ತಿ ಸಿಗದೆ ಇರುವುದು ಹೇಗೆ ಹೇಳಿ? ಈ ಮೊದಲೇ ಅವರ ಹಿಂದಿನ ಕೆಲವು ಚಿತ್ರಗಳಿಗೆ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರಕಿದ್ದವು. ಈಗ 'ಗುಲಾಬಿ ಟಾಕೀಸ್'ನ ಸರದಿ. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದವರು ತಮ್ಮ ಅದ್ಭುತ ನಟನಾ ಶಕ್ತಿಯ ಮೂಲಕ ಕನ್ನಡಿಗರ ಮನೆ-ಮನಗಳನ್ನು ಗೆದ್ದಿರುವ ಹಿರಿಯ ನಟಿ ಉಮಾಶ್ರೀ.

ಸಿರಿಫೋರ್ಟ್‌ನಲ್ಲಿ 'ಗುಲಾಬಿ ಟಾಕೀಸ್' ಪ್ರದರ್ಶನಗೊಂಡಾಗ ಚಿತ್ರ ವೀಕ್ಷಿಸಲು ಬೆರಳೆಣಿಕೆಯಷ್ಟು ಕನ್ನಡಿಗರು (ಇತರ ಭಾಷಿಗರನ್ನು ಹೊರತುಪಡಿಸಿ) ಕೂಡಾ ಇರಲಿಲ್ಲ. ಆದರೆ ಕಾಸರವಳ್ಳಿ ಅವರು ತೆರೆಯ ಮೇಲೆ ಮೂಡಿಸಿದ ದೃಶ್ಯಕಾವ್ಯ ಆಸ್ವಾದಿಸಲು ಇತರ ಭಾಷಿಕರಿಗೆ ಯಾವುದೇ ಅಡ್ಡಿಯಾಗಲಿಲ್ಲ.

11 ದಿನಗಳ ಕಾಲ ನವದೆಹಲಿಯ ಸಿರಿಫೋರ್ಟ್‌ನಲ್ಲಿ ನಡೆದ ಚಿತ್ರೋತ್ಸವಕ್ಕೆ ತೆರೆ ಎಳೆಯುವ ದಿನದ ಆ ಸುಂದರ ಸಂಜೆಯಂದು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರಶಸ್ತಿ ಪಡೆದ ಚಿತ್ರದ ನಿರ್ಮಾಪಕ ಬಸಂತ್ ಕುಮಾರ್ ಪಾಟಿಲ್ ಸಂತಸ ಹಂಚಿಕೊಂಡರು. "ಚಿತ್ರಕ್ಕೆ ಪ್ರಶಸ್ತಿ ದೊರಕಿದ್ದು ನಿಜವಾಗಿಯೂ ಖುಷಿ ತಂದಿದೆ. ನಮ್ಮೆಲ್ಲರ ಪರಿಶ್ರಮಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರು ಚಿತ್ರ ಮೆಚ್ಚಿದರು. ಪ್ರಶಸ್ತಿಗಿಂತ ಜನರ ಪ್ರಶಂಸೆಗಳು ನನಗೆ ಸಂತಸ ನೀಡಿದೆ" ಎಂದು ನುಡಿದರು.

ಚಿತ್ರದ ತಂತ್ರಜ್ಞರಾದಿಯಾಗಿ ಎಲ್ಲರೂ ಹೇಳುವಂತೆ, ಪ್ರಧಾನ ಭೂಮಿಕೆಯಲ್ಲಿರುವ ಉಮಾಶ್ರೀ ಅವರ ನಟನೆಯಂತೂ ಅತ್ಯದ್ಭುತ. ಕರಾವಳಿಯ ಮೀನುಗಾರ ಕುಟುಂಬದ ಮುಸ್ಲಿಂ ಮಹಿಳೆ ಗುಲಾಬಿ (ಗುಲ್‌ನಾಬಿ) ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ಮುಗ್ಧತೆ ಮತ್ತು ಗಾಂಭೀರ್ಯ ಮೇಳೈಸಿದ ಪಾತ್ರವನ್ನು ನಿರ್ವಹಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಅವರ ಆ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ದೊರಕಿದೆ. ಕಾಸರವಳ್ಳಿ ಅವರ ಹಿಂದಿನ ಹಲವು ಚಿತ್ರಗಳಲ್ಲಿದ್ದಂತೆ ಇಲ್ಲಿ ಕೂಡ ಮಹಿಳಾ ಪ್ರಾತಿನಿಧ್ಯವೇ ಎದ್ದು ಕಾಣುತ್ತದೆ. ಎಂತಹ ಸಂಕಷ್ಟದ ಸಂದರ್ಭವನ್ನೂ ನಿಭಾಯಿಸುವ ತಾಕತ್ತು ಮಹಿಳೆಗೆ ಕರಗತ ಎಂಬುದನ್ನು 'ಗುಲಾಬಿ' ಪಾತ್ರದ ಮೂಲಕ ನಿರೂಪಿಸಿದ್ದಾರೆ. ಸಂಪೂರ್ಣ ಸಿನಿಮಾ 'ಕುಂದಗನ್ನಡ'ದಲ್ಲಿದ್ದರೂ, ಉಮಾಶ್ರೀ ಸೇರಿದಂತೆ ಇತರ ನಟರ ಸಂಭಾಷಣೆ ನವಿರಾಗಿ ಮೂಡಿಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, "ಇಂದು ನನಗೆ ಈ ಪ್ರಶಸ್ತಿ ಬಂದಿದೆ ಎಂದರೆ ಅದಕ್ಕೆ ನಿರ್ದೇಶಕರೇ ಕಾರಣ. ಇಡೀ ಕರ್ನಾಟಕದ ಜನತೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ" ಎಂದಾಗ ಅವರ ಮೊಗದಲ್ಲಿ ಸಂತೃಪ್ತಿಯ ಕಳೆ ಎದ್ದು ಕಾಣುತ್ತಿತ್ತು.

ಗುಲಾಬಿ ಪಾತ್ರದ ಕುರಿತು ಮಾತನಾಡಿದ ಕಾಸರವಳ್ಳಿ ಅವರು, "ಗುಲಾಬಿಯ ಒಂಟಿತನ, ಪ್ರೇಮ-ಪ್ರೀತಿಯ ಹಪಹಪಿಯನ್ನು ಇಲ್ಲಿ ಬಿಂಬಿಸಲಾಗಿದೆ. ಒಂದು ಯಂತ್ರದ (ಟಿವಿ) ಮೂಲಕ ಆಕೆ ಇಡೀ ಸಮುದಾಯವನ್ನು ಆಕರ್ಷಿಸುತ್ತಾಳೆ. ಹೀಗೆ ಆಕೆ ತನ್ನ ಗಂಡನ ಪ್ರೀತಿ, ಊರಿನ ಪ್ರೀತಿ, ಸಮುದಾಯದ ಪ್ರೀತಿಗೂ ಪಾತ್ರಳಾಗುತ್ತಾಳೆ. ಆದರೆ ಅದೇ ಯಂತ್ರ ಸಮಾಜ ವಿಭಜನೆಗೂ ಇಲ್ಲಿ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾನು 'ಇಮೇಜ್ ಮೇಕಿಂಗ್' ಪ್ರಕ್ರಿಯೆಯ ರಾಜಕೀಯತೆಯನ್ನು ಜನರಿಗೆ ತೋರಿಸುವ ಯತ್ನ ಮಾಡಿದ್ದೇನೆ" ಎಂದು ಹೇಳುತ್ತಾರೆ.

ಕೇವಲ ಗುಲಾಬಿಯ ನೋವು-ನಲಿವುಗಳು ಮಾತ್ರವಲ್ಲ, ಹಳ್ಳಿಯ ಜನರ ಹಾಗೂ ಅವರ ಕೌಟುಂಬಿಕ ಬದುಕಿನ ಚಿತ್ರಣವನ್ನು ಕಾಸರವಳ್ಳಿ ಅವರು ನೈಜತೆಯಿಂದ ಚಿತ್ರಿಸಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತ ಪುರುಷರಿಗೆ ಕೌಟುಂಬಿಕ ಜೀವನ ನಿಭಾಯಿಸಲಾಗದೆ ಸಂಕಷ್ಟ ಎದುರಾಗುವುದು, ಪತ್ನಿ ಹಾಗೂ ಮಕ್ಕಳು ಬಡತನದ ಬೇಗೆಯಲ್ಲಿ ಸಿಲುಕಿ ಒದ್ದಾಡುವುದು, ಹಾಗೇ ಆ ಸಂದರ್ಭದಲ್ಲಿ ವಾಸಣ್ಣ ಅಥವಾ ಸುಲೈಮಾನ್ ಪರವಾಗಿ ದುಡಿಯುವುದೋ ಎಂಬ ತುಮುಲಗಳು ಗಂಡಂದಿರ ಮನದಲ್ಲಿ ಸೃಷ್ಟಿಯಾಗುವಂಥ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಕಾಸರವಳ್ಳಿ ಯಶಸ್ವಿಯಾಗಿದ್ದಾರೆ.

ಚಿತ್ರದುದ್ದಕ್ಕೂ ಜಾಗತೀಕರಣದ ಪರಿಣಾಮಗಳು ಸೂಚ್ಯವಾಗಿ ಒಡಮೂಡಿದೆ. ಇದರ ಜೊತೆಗೆ ದುಬೈನಲ್ಲಿ ನೆಲೆಸಿದ್ದು, ಹಳ್ಳಿಯಲ್ಲಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದ ಸುಲೈಮಾನ್ ಹಾಗೂ ಅದೇ ಹಳ್ಳಿಯಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ನಿರತನಾಗಿದ್ದ ವಾಸಣ್ಣ ಇವರಿಬ್ಬರಿಂದಲೂ ಹಳ್ಳಿ ಜನರು ಶೋಷಣೆಗೊಳಗಾಗುವುದನ್ನು ವಿವಿಧ ಸನ್ನಿವೇಶಗಳಲ್ಲಿ ತೆರೆದಿಡಲಾಗಿದೆ.

ತಮ್ಮ ಪರಿಧಿಯೊಳಗೆ ಬದುಕನ್ನು ಕಂಡುಕೊಳ್ಳಲಾರದ ಮಾನವನ ಅನಿಶ್ಚಿತತೆಯನ್ನು ಬಿಂಬಿಸುವುದರ ಜೊತೆಗೆ ಹಳ್ಳಿಯಲ್ಲಿನ ಅತೃಪ್ತಿ ಮತೀಯ ಸಂಘರ್ಷಕ್ಕೆ ಕಾರಣವಾಗುವ ಬಗೆಯನ್ನು ಚಿತ್ರದಲ್ಲಿ ಕಾಣಬಹುದು. "ಒಂದು ಸಂಕೀರ್ಣವಾದ ಚಿತ್ರಕಥೆ ಬರೆದು, ಸಮಾಜದ ಎಲ್ಲಾ ಮುಖಗಳನ್ನು ಅನಾವರಣಗೊಳಿಸಿದ್ದೇನೆ" ಎನ್ನುವ ಕಾಸರವಳ್ಳಿ, "ಇಲ್ಲಿ ಹಿಂದೂಗಳೆಲ್ಲರೂ ಕೆಟ್ಟವರು ಅಥವಾ ಒಳ್ಳೆಯವರು ಹಾಗೂ ಮುಸ್ಲಿಮರೆಲ್ಲಾ ಕೆಟ್ಟವರು ಅಥವಾ ಒಳ್ಳೆಯವರು ಎಂದು ಚಿತ್ರಿಸಲಾಗಿಲ್ಲ. ಗುಲಾಬಿಯನ್ನು ಊರಿನಿಂದ ಹೊರ ಅಟ್ಟಿದ್ದು ಆರ್ಥಿಕ ಕಾರಣದಿಂದಾಗಿಯೇ ವಿನಾ ಆಕೆ ಮುಸ್ಲಿಂ ಎಂದಲ್ಲ. ಆಕೆಯ ಗಂಡನೂ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಆಕೆಯನ್ನು ಓಡಿಸುವ ಹಿಂದೆ ಹಳ್ಳಿಯ ಆರ್ಥಿಕತೆಯ ಕಾರಣವೂ ಇದೆ. ಮತ್ತೊಂದು ವಿಚಾರ ಏನೆಂದರೆ ನೋಡುಗರು ಮುಸ್ಲಿಮರಿಂದಲೇ ಇಂದು ಜಗತ್ತಿನಲ್ಲಿ ಎಲ್ಲಾ ಅನ್ಯಾಯಗಳು ನಡೆಯುತ್ತಿವೆ ಎಂದು ಯೋಚಿಸಿದರೆ ಅವರಿಗೆ ಈ ಸಿನಿಮಾವೇ ಒಂದು ದೊಡ್ಡ ಅಪರಾಧವಾಗಿ ಕಾಣಬಹುದು' ಎಂದು ವಿವರಣೆ ನೀಡುತ್ತಾರೆ.

ಒಟ್ಟಾರೆ ಕನ್ನಡ ಸಿನಿಮಾವೊಂದು ಇಂದು ಮತ್ತೊಮ್ಮೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ್ದಾರೆ ಗಿರೀಶ್ ಕಾಸರವಳ್ಳಿ. ಕಾಸರವಳ್ಳಿ ಅವರ ಚಿತ್ರಕ್ಕೆ ಅಂತರ್ ರಾಷ್ಟ್ರೀಯ ಪ್ರಶಸ್ತಿ ಲಭಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲದಿದ್ದರೂ, ಉಮಾಶ್ರೀ ಅವರ ಪರಿಶ್ರಮಕ್ಕೆ ತಕ್ಕ ಫಲವೆಂಬಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರೆತಿದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅಂದಹಾಗೆ 'ಓಸಿಯನ್ಸ್ ಸಿನಿಫ್ಯಾನ್' ಚಲಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ತೀರ್ಪುಗಾರರು ಹಾಗೂ ಸಿನಿಮಾ ಪ್ರಿಯರ ಮನಮೆಚ್ಚಿದ 'ಗುಲಾಬಿ ಟಾಕೀಸ್' ಕಲಾತ್ಮಕ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಬಾಚಿಕೊಂಡಿದ್ದರೂ ಚಿತ್ರ ವೀಕ್ಷಿಸುವಾಗ ಇದು ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ತೋರುವುದು ಮಾತ್ರ ನಿಜ.

------------------------------------------------------------------------------------------------------------------------

ಕಾಸರವಳ್ಳಿ ಅವರು ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ...

ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ?

ಸಿನಿಮಾ ಮಾಡಿದಾಗ ಅದು ಚೆನ್ನಾಗಿದೆಯೋ ಅಥವಾ ಕೆಟ್ಟದಾಗಿದೆಯೋ ನನಗೆ ಗೊತ್ತಾಗುವುದಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೂ, ಇನ್ನು ಕೆಲವರು ಅತ್ಯದ್ಭುತವಾಗಿದೆ ಎಂದು ಬೆನ್ನು ತಟ್ಟಿದರು. ಪ್ರಕಾಶ್ ಬೆಳವಾಡಿ, ಜಿ.ಎಸ್. ಭಾಸ್ಕರ್ ಮತ್ತು ಪಿ. ಶೇಷಾದ್ರಿ ಅವರು ಸೇರಿದಂತೆ ಕೆಲವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆ ನಂತರ ಚಲನಚಿತ್ರೋತ್ಸವಗಳಿಗೂ ನಾನು ಈ ಚಿತ್ರವನ್ನು ಕಳುಹಿಸಿದೆ. ಖ್ಯಾತ ವಿಮರ್ಶಕರಾದ ವಿದ್ಯಾರ್ಥಿ ಚಟರ್ಜಿ, ಪ್ರಸನ್ನ ರಾಮಸ್ವಾಮಿ ಅವರು ಹಲವು ವರ್ಷಗಳ ನಂತರ ಅತ್ಯದ್ಭುತ ಚಿತ್ರ ನೀಡಿದ್ದೀರಿ ಎಂದು ಶ್ಲಾಘಿಸಿದರು. ಮೊದಲ ಸ್ಕ್ರೀನಿಂಗ್ ನೋಡಿದ ನಂತರ ಕೆಲವು ಪ್ರೇಕ್ಷಕರಿಂದ ಇವತ್ತಿನ ಸಂದರ್ಭಕ್ಕೆ ಚಿತ್ರ ಯೋಗ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಅಂದೇ ಉಮಾಶ್ರೀ ಅವರಿಗೆ ಪ್ರಶಸ್ತಿ ಬರಬಹುದೇನೋ ಅಂದುಕೊಂಡೆ.

ಕರಾವಳಿ ಪ್ರದೇಶದಲ್ಲಿ ಚಿತ್ರ ಮಾಡುವಾಗ ಎಂತಹ ಸವಾಲಿತ್ತು?

ನಿಜ ಹೇಳಬೇಕೆಂದ್ರೆ ನಮಗೆ ಕರಾವಳಿ ಪ್ರದೇಶದ ಬಗ್ಗೆ ಹೆಚ್ಚಿನ ಪರಿಚಯ ಇರಲಿಲ್ಲ. ಇಂತಹ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಂಡು ಚಿತ್ರ ಮಾಡುವುದು ಸವಾಲೇ ಆಗಿತ್ತು.

'ಗುಲಾಬಿ' ಪಾತ್ರಕ್ಕೆ ಉಮಾಶ್ರೀ ಅವರ ಆಯ್ಕೆಗೆ ಕಾರಣ?

ನಮ್ಮಲ್ಲಿ ಕೆಲವರು ಉಮಾಶ್ರೀ ಅವರು ಕೇವಲ ಕಾಮಿಡಿ ಪಾತ್ರಕ್ಕೆ ಮಾತ್ರ ಯೋಗ್ಯರು ಎಂದು ಅವರ ಹಿನ್ನೆಲೆ ತಿಳಿಯದೆ ವಾದಿಸುತ್ತಾರೆ. ಒಳ್ಳೆ ಪಾತ್ರ ಮಾಡಿಕೊಂಡು ಬಂದಿದ್ದರೂ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿದ್ದರೆ ಅದು ನಿರ್ದೇಶಕನ ತಪ್ಪು. ನಾನು ಮೊದಲು ನೋಡುವುದೇನೆಂದರೆ ಭಾವನೆಯನ್ನು ಹೊರ ಚೆಲ್ಲಬಹುದಾದ ಮುಖಲಕ್ಷಣ ಹಾಗೂ ಬಾಡಿ ಲಾಂಗ್ವೇಜ್. ಜೊತೆಗೆ ರಂಗಭೂಮಿ ಹಿನ್ನೆಲೆ ಹಾಗೂ ಪಾತ್ರ ನಿಭಾಯಿಸುವ ಚಾಕಚಕ್ಯತೆ ಕೂಡ ಉಮಾಶ್ರೀ ಅವರಲ್ಲಿತ್ತು.

ಚಿತ್ರ ಸಂಪೂರ್ಣವಾಗಿ 'ಕುಂದಗನ್ನಡ' ಭಾಷೆಯಲ್ಲಿದೆ. ಕಲಾವಿದರಿಗೆ ಈ ಭಾಷೆ ಮೊದಲೇ ತಿಳಿದಿತ್ತೇ?

ಚಿತ್ರದಲ್ಲಿ ನಾಲ್ಕು ನಟರು ಬಿಟ್ಟರೆ ಉಳಿದವರು ಕುಂದಾಪುರದವರೇ. ಎಂ.ಡಿ. ಪಲ್ಲವಿ ಅವರು ನೇತ್ರುವಿನ ಪಾತ್ರದಲ್ಲಿದ್ದರೆ, ಕೆ.ಜಿ. ಕೃಷ್ಣಮೂರ್ತಿ ಅವರು ಗುಲಾಬಿ ಗಂಡನ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಕೆಲಸ ಸುಲಭವಾಗಲು ಭಂಡಾರ್ಕ್ಸರ್ ಕಾಲೇಜಿನ ಹುಡುಗಿಯೊಬ್ಬಳೂ ಸಹಾಯ ಮಾಡಿದಳು. ಸಂಭಾಷಣೆ ಯಾವ ರೀತಿ ಇರಬೇಕು ಎಂಬ ಬಗ್ಗೆ ಆಕೆ ನಟರಿಗೆ ಸತತವಾಗಿ ಹೇಳಿಕೊಡುತ್ತಿದ್ದಳು. ಇನ್ನು ಡಬ್ಬಿಂಗ್ ಸಮಯದಲ್ಲಿ ನಟ ರಘು ಪಾಂಡೇಶ್ವರ್ ಕೂಡ ಯಾವ ರೀತಿಯಲ್ಲಿ ಮಾತನಾಡಬೇಕೆಂದು ತಿಳಿಹೇಳುತ್ತಿದ್ದರು. ಇಲ್ಲಿ ಒಂದು ಮಾತ್ರ ಸ್ಪಷ್ಟ. ಭಾಷೆ ಬಗ್ಗೆ ಎಚ್ಚರ ಇದ್ದವರು ಯಾವುದೇ ಭಾಷೆಯನ್ನು ಕೂಡ ಬೇಗ ಕಲಿಯುತ್ತಾರೆ. ಎಚ್ಚರ ಇಲ್ಲದಿದ್ದರೆ ಕೊನೆಯವರಿಗೂ ಅದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಒಟ್ಟಾರೆ 'ಇಗೋ' ಬಿಟ್ಟು ನಿಜ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ.

'ಗುಲಾಬಿ ಟಾಕೀಸ್'ಗೆ ಪ್ರೇರಣೆ...?

2006ರ ಓಸಿಯನ್ ಚಲನಚಿತ್ರೋತ್ಸವದಲ್ಲಿ ನನ್ನ 'ನಾಯಿ ನೆರಳು' ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು ಹೊರಗಿನ ಲಾಬಿಯಲ್ಲಿ ಕುಳಿತಿದ್ದೆ. ಹೀಗೆ ಯೋಚಿಸುತ್ತಿದ್ದಾಗ ಥಟ್ಟನೆ ಮೀನುಗಾರರ ಸಮಸ್ಯೆ ಬಗ್ಗೆ ಚಿತ್ರ ಮಾಡಬೇಕೆಂದು ಲೆಕ್ಕಹಾಕಿದೆ. 'ಇಮೇಜ್ ಮೇಕಿಂಗ್' ಹೇಗೆ ನಮ್ಮಲ್ಲಿ ಪೂರ್ವಸಿದ್ಧವಾದ ನಂಬಿಕೆ ಹಾಗೂ ಅನಿಸಿಕೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ತೋರಿಸುವ ಉದ್ದೇಶದಿಂದ 'ಗುಲಾಬಿ ಟಾಕೀಸ್'ನ್ನು ಮಾಡುವ ಕೆಲಸಕ್ಕೆ ಕೈಹಾಕಿದೆ.

ನಿಮ್ಮ ಹೆಚ್ಚಿನ ಎಲ್ಲಾ` ಚಿತ್ರಗಳಂತೆ ಇದೂ ಸ್ತ್ರೀ ಪ್ರಧಾನ ಚಿತ್ರ.... ಇದಕ್ಕೆ ನಿರ್ದಿಷ್ಟ ಕಾರಣವೇನಾದರು ಇದೆಯೇ?

ನಿರ್ದಿಷ್ಟ ಕಾರಣ ಅಂತ ಹೇಳುವುದು ಕಷ್ಟ. ಅವರ ತಾಳ್ಮೆಯ ಶಕ್ತಿ, ಸಮಸ್ಯೆ ನಿರ್ವಹಿಸುವ ರೀತಿ, ಸೋಲಬಾರದು ಅನ್ನೋ ಒತ್ತಾಸೆಯಿಂದ ಅವರು ಗೆಲ್ಲುತ್ತಾ ಸಾಗುವುದು ನನಗೆ ಇಷ್ಟವಾಗುತ್ತವೆ. ಗುಲಾಬಿಯೂ ಹಾಗೇ. ಊರಿನಿಂದ ಆಕೆಯನ್ನು ಹೊರದಬ್ಬಿದರೂ, 'ಎಲ್ಲಿಯ ತನಕ ಹೆಂಗಸರು ಬಸಿರಾಗುತ್ತಾರೋ ಅಲ್ಲಿಯತನಕ ನನ್ನ ಸೂಲಗಿತ್ತಿಯ ಕೆಲಸಕ್ಕೆ ದಕ್ಕೆ ಬಾರದು. ನಾನು ಹೆದರೋದಿಲ್ಲ, ಬೇರೆ ಕಡೆ ಹೋಗಿ ನನ್ನ ಕೆಲಸ ಮಾಡಿ ಬದುಕುತ್ತೇನೆ' ಎಂದು ಧೈರ್ಯದಿಂದ ನುಡಿಯುತ್ತಾಳೆ. ಈ ಕೆಚ್ಚು ನನ್ನ ಮನ ತಟ್ಟಿತು.