Thursday 21 May 2009

ಬಯಕೆ ಈಡೇರಿದಾಗ...

ಈ ಉಪ್ಪಿಟ್ಟು ತಿನ್ನುವ ಗೀಳು ನನ್ನಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದು ಈಗಲೂ ಅರ್ಥವಾಗದ ಒಗಟು. ಊರಲ್ಲಿದ್ದಾಗ ಯಾವತ್ತೂ ಉಪ್ಪಿಟ್ಟು (ಸಜ್ಜಿಗೆ) ತಿನ್ನಬೇಕೆಂಬ ಹೆಬ್ಬಯಕೆ ಮನದಲ್ಲಿ ಮನೆಮಾಡಿರಲಿಲ್ಲ. ಆದರೆ ದೆಹಲಿಗೆ ಬಂದ ನಂತರ ಯಾಕೋ ಈ ಉಪ್ಪಿಟ್ಟಿಗೂ ನನಗೂ ಭಾರೀ ನಂಟು ಬೆಳದಂತಿದೆ. ಊರಿನಿಂದ ದೂರವಿದ್ದೇನೆ ಎಂಬ ಕಾರಣಕ್ಕೋ ಅಥವಾ ಮೋಹನ್ಸಿಂಗ್ ಮಾರ್ಕೆಟ್ ಬಳಿ ಇರುವ ತಮಿಳು ಡಾಬಾದ ಉಪ್ಮಾ ಮೋಡಿಯೋ ಅಥವಾ ಕರ್ನಾಟಕ ಸಂಘದ ಅಟ್ರಾಕ್ಟಿವ್ ಉಪ್ಮಾವೋ...ಈಗಲೂ ಅರ್ಥವಾಗುತ್ತಿಲ್ಲ. ಆದರೆ ಅಮ್ಮ ಮನೆಯಲ್ಲಿ ಮಾಡಿದ್ದರೂ ನಾನು ಉಪ್ಪಿಟ್ಟು ತಿನ್ನುತ್ತಿದ್ದದ್ದು ತೀರಾ ಅಪರೂಪ. ಬೆಳಗ್ಗಿನ ಉಪಹಾರಕ್ಕಂತೂ ಉಪ್ಪಿಟ್ಟು ಮಾಡಿಬಿಟ್ಟರೆ ಮನೆಯಲ್ಲಿ ಇಡೀ ರಂಪವೇ ಮಾಡಿಬಿಡುತ್ತಿದ್ದೆ. ಹಾಗಿದ್ದಾಗ ಉಪ್ಪಿಟ್ಟಿನ ಮೇಲೆ ಅಪಾರ ಪ್ರೀತಿ ಹುಟ್ಟಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.


ಉಪ್ಪಿಟ್ಟಿನ ಮೇಲಿರುವ ಈ ಪರಿಯ ಮೋಡಿಗೆ ಕಳೆದ ಭಾನುವಾರವೂ ಸಾಕ್ಷಿಯಾಯಿತು. ಆವತ್ತು ಬೆಳಗ್ಗಿನಿಂದ ಎಲ್ಲಾದರೂ ಉಪ್ಪಿಟ್ಟು ತಿನ್ನಲೇಬೇಕೆಂದು ಹೊಟ್ಟೆ, ಮನಸ್ಸು ಬೊಬ್ಬಿಡುತ್ತಲೇ ಇದ್ದವು. ಅದಕ್ಕೆ ಸರಿಯಾಗಿ ಬೆಳಗ್ಗೆ ತಿಂಡಿಯೂ ತಿಂದಿರಲಿಲ್ಲ. ಮಧ್ಯಾಹ್ನ ವಿಜಯ ಕರ್ನಾಟಕದ ವಿನಾಯಕ ಭಟ್ಟರ ಮನೆಯಲ್ಲಿ ಮಧ್ಯಾಹ್ನದ ಭೋಜನ ಮಾಡಿದ್ದೆ. ಜೊತೆಗೆ ಸುನಿಲ್ ಕೂಡ ಇದ್ದ.
ಸಂಜೆ ಹೊತ್ತಿಗೆ ದೆಹಲಿಯ ಕನ್ನಡಭವನದಲ್ಲಿ ಆ ದಿನ tv9 ಶಿವಪ್ರಸಾದ್ ಜೊತೆ ಹರಟುತ್ತಿದ್ದಾಗ ಅವರಲ್ಲಿ ಹೇಳಿಯೇ ಬಿಟ್ಟೆ. “ನೋಡಿ ನನಗೆ ನಿಜವಾಗ್ಲೂ ಉಪ್ಪಿಟ್ಟು ತಿನ್ನಬೇಕೆಂದು ಮನಸ್ಸಾಗುತ್ತಿದೆ. ನಡ್ರೀ ಶಿವಪ್ರಸಾದ್ ಎಲ್ಲಿಯಾದ್ರೂ ಹೋಗಿ ಬರೋಣ ಅಂತ...” ಅದಕ್ಕೆ ಅವರು ನೀನ್ಯಾಕೋ ಪ್ರಶಾಂತ್ ನಾಥು ಥರಾ ಆಡ್ತಿದ್ಯಾ ಅಂಥ ನಕ್ಕಿ ಸುಮ್ಮನಾದ್ರು. ಸರಿ, ಸದ್ಯ ಯಾರೂ ಬರುವ ಯೋಚನೆಯಲ್ಲಿಲ್ಲ ಅಂಥ ನಾನೂ ಸುಮ್ಮನಾದೆ. ಮೂಗಿನ ತುದಿಯಲ್ಲಿದ್ದ ಆ ಆಸೆಯನ್ನ ಮತ್ತೆ ಹೊಟ್ಟೆಯಲ್ಲೇ ಹಾಕಿಕೊಂಡಿದ್ದೆ.

ಸ್ವಲ್ಪ ಹೊತ್ತಿನ ಬಳಿಕ ಸೋನಿಯಾ ಮೇಡಂ ಅನ್ನು ಮೀಟ್ ಮಾಡಲು ಹೋಗಿದ್ದ, ಗುಲ್ಬರ್ಗಾದಲ್ಲಿ ಬಿಜೆಪಿ ರೇವೂ ನಾಯಕ್ ವಿರುದ್ಧ ಗೆಲುವಿನ ನಗೆ ಬೀರಿದ್ದ ಮಲ್ಲಿಕಾರ್ಜುನ ಖರ್ಗೆ ಕಾರಿಂದಿಳಿದು ನಿಧಾನವಾಗಿ ಒಂದೊಂದೇ ಹೆಜ್ಜೆ ಹಾಕುತ್ತಾ ಪತ್ರಕರ್ತರೊಂದಿಗೆ ಮಾತಿಗಿಳಿದರು. ಆ ಬಳಿಕ ಕನ್ನಡ ಭವನದ ಉಪಾಹಾರ ಹಾಲ್‌ನಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ, ಕಣ್ಣ ಮುಂದೆ ಉಪ್ಪಿಟ್ಟು ಪ್ರತ್ಯಕ್ಷವಾಗಬೇಕೆ? ರೋಗಿ ಬಯಸಿದ್ದೂ...ವೈದ್ಯ ನೀಡಿದ್ದೂ..ಎಂದು ಹತ್ತಿರದಲ್ಲಿದ್ದ ಜೋಶಿ ಅವರು ಹೇಳಿ ನಗತೊಡಗಿದರು. ಅತ್ತ ಶಿವಪ್ರಸಾದ ಅವರೂ ಕೂಡ, "ಅದಕ್ಕೆ ಹೇಳೋದು, ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದು ಉಪ್ಪಿಟ್ಟು ಮೆಲ್ಲುತ್ತಿದ್ದರು. ಹತ್ತಿರವೇ ಸವಿಯುತ್ತಿದ್ದ ವಿನಾಯಕ ಭಟ್ಟರು, “ಸಜ್ಜನರ ಸಹವಾಸ ಸಜ್ಜಿಗೆ ಸವಿದಂತೆ” ಎಂದು ವಿ.ಕ. ಶೈಲಿಯಲ್ಲೇ ಪ್ರಾಸ ಹುಡುಕಿಕೊಂಡೇ ಜೋಕ್ ಮಾಡಿದರು. ಇತ್ತ ಖರ್ಗೆ ಅವರ ಬೈಟ್‌ಗೆ ಕಾಯುತ್ತಿದ್ದ ETv ಶ್ರೀನಿವಾಸ ಗೌಡರು, “ಮಗ ಬೇಕಾದಷ್ಟು ತಿನ್ನು” ಅಂತ ಹುರಿದುಂಬಿಸಿದರು. ಇವೆಲ್ಲದರ ಮಧ್ಯೆ “ಇವತ್ತಿನ ಉಪ್ಪಿಟ್ಟು ಭಾರೀ ಚೆನ್ನಾಗಿದೆ” ಎಂದು ವಿನಾಯಕ ಭಟ್ಟರು ಹೊಗಳಿದ್ದಕ್ಕೆ, ಖರ್ಗೆ ಅವರು “ಹೋ” ಎಂದು ನಕ್ಕಿ ಕನ್ನಡಭವನದ ತಿಂಡಿಗೆ ಸರ್ಟಿಫಿಕೇಟ್ ನೀಡಿದವರಲ್ಲಿ ನೀವೇ ಮೊದಲಿಗರು ಎಂದು ಹೇಳಿಯೇ ಬಿಟ್ಟರು. ಒಟ್ಟಾರೆ ಖರ್ಗೆ ಅವರಿಗೆ ಕನ್ನಡಭವನದ ತಿಂಡಿ ತಿನಿಸುಗಳು ಇಷ್ಟವಾಗಿಲ್ಲ ಎಂದಾಯಿತು. ಬಿಡಿ, ಅವರಿಗೆ ಇಷ್ಟವಾದರೇನು, ಬಿಟ್ಟರೇನು... ಅವರ ಕಣ್ಣು ಇದ್ದದ್ದಂತೂ ಉಪ್ಪಿಟ್ಟಿನ ಮೇಲಲ್ಲ. ಬದಲಾಗಿ ಕೇಂದ್ರದಲ್ಲಿನ ಮಂತ್ರಿಗಿರಿ ಮೇಲೆ! ನಾವೆಲ್ಲರಂತೂ ಎರಡೆರಡು ಬಾರಿ ಉಪ್ಪಿಟ್ಟಿನ ರುಚಿ ಸವಿದೆವು.

ಏನೇ ಆಗಲಿ, ಉಪ್ಪಿಟ್ಟು ತಿನ್ನಬೇಕೆಂಬ ಆಕಾಶದಷ್ಟಿದ್ದ ಬಯಕೆಯನ್ನು ಈಡೇರಿಸದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ...?

Tuesday 5 May 2009

ಬೈಗುಳ ಬೇಗೆಯಲ್ಲಿ ಬೆಂದು ಹೋದಾಗ...

ಆ ಸೋಷಿಯಲ್ ಮಿಸ್ ಇದ್ದರಲ್ಲ, ಅವರಷ್ಟು ನನಗೆ ಕಾಡಿದವರು ಮತ್ತೊಬ್ಬರಿರಲಿಕ್ಕಿಲ್ಲ. ಅಂದೊಮ್ಮೆ ಕನಸಲ್ಲೂ ಬಂದು ನನ್ನ ಹೆದರಿಸಿ ಹೋಗಿದ್ದರು. ಹೈಸ್ಕೂಲ್ ಜೀವನದಲ್ಲಿನ ಅಜರಾಮರ ನೆನಪುಗಳಲ್ಲಿ ಈ ಮಿಸ್ ಮಹತ್ವದ ಸ್ಥಾನ ಪಡೆದಿದ್ದಾರೆ. ಯಾವಾಗ ನೋಡಿದರೂ ಬೈಗುಳ, ಒಂದೇ ಸಮನೆ ಸಜೆಷನ್ ನೀಡುವುದು, ಎಲ್ಲರ ಎದುರು ನಿಲ್ಲಿಸಿ ಇತಿಹಾಸ ಕೆದಕುವುದು, ಅವತ್ತು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ ಎಂದು ನನ್ನ ಗೋಳು ಹೊಯ್ಕೊಳ್ಳುತ್ತಲೇ ಇದ್ದರು. ನನಗಂತೂ ಅವರ ಮಾತುಗಳನ್ನು ಕೇಳವುದೆಂದರೆ ಹಸಿ ಹಾಗಲಕಾಯಿ ತಿಂದ ಹಾಗಾಗುತ್ತಿತ್ತು.! ನಾನು ನನ್ನ “ನಾಟಿ” ಮಿತ್ರರು ಮುಂದಿನ ಬೆಂಚಲ್ಲಿ ಕುಳಿತಿದ್ದರೂ ಕಾಮೆಂಟ್ ಪಾಸ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ಕಾರಣ ಅವರು ಬೈಯುವುದರಲ್ಲೂ ಅರ್ಥವಿತ್ತು ಬಿಡಿ..!

ಆವತ್ತು ಪೇರೆಂಟ್ಸ್ ಟೀಚರ್‍ಸ್ ಮೀಟಿಂಗ್ ದಿನ. ೧೦ನೇ ಕ್ಲಾಸ್‌ನ ಕೊನೆಯ ಪೇರೆಂಟ್ಸ್ ಮೀಟಿಂಗ್ ಅದು. ನನಗಂತೂ ಹೈಸ್ಕೂಲ್ ಜೀವನದ ಕರಾಳ ದಿನ ಎನ್ನಬಹುದು. ನಮ್ಮ ಕ್ಲಾಸ್ ಟೀಚರ್ ಕನ್ನಡ ಮಿಸ್ ಆಗಿದ್ದರೂ, ಈ ಸೋಷಿಯಲ್ ಇಡೀ ಕ್ಲಾಸ್ ಎದುರೇ “ರಾಘವ್ ಐ ವಾಂಟ್ ಟು ಸ್ಪೀಕ್ ವಿದ್ ಯುರ್ ಪೇರೆಂಟ್ಸ್, ಸೊ ಯು ಮೀಟ್ ಮಿ ಎಟ್ ದ ಟೈಮ್ ಆಫ್ ಮೀಟಿಂಗ್” ಎಂದು ಬಾಂಬ್ ಎಸೆದಿದ್ದರು. ಆಗಲೇ ನನಗೆ ಹೊಟ್ಟೆಯೊಳಗೆ ನಡುಕ ಆರಂಭವಾಗಿತ್ತು. ಹೇಗಾದರು ಮಾಡಿ ಕನ್ನಡ ಮಿಸ್ ಜೊತೆ ಮಾತನಾಡಿಸಿ ತಂದೆಯನ್ನು ಮನೆಗೆ ಕಳುಹಿಸಿ ಬಿಡಬೇಕು ಎಂದು ನಾನು ಆವಾಗಲೇ ಯೋಜನೆ ಹಾಕಿದ್ದೆ. ನೀವು ಕ್ಲಾಸಲ್ಲಿ ಇದ್ದ ಕಾರಣ ನನ್ನ ತಂದೆ ಕನ್ನಡ ಮಿಸ್ ಅನ್ನು ಮಾತನಾಡಿಸಿ ಹೋದರು ಎಂದು ಸಬೂಬು ನೀಡಬಹುದು ಎಂದು ಯೋಚಿಸಿದ್ದೆ. ಆದರೆ ಅಂದು ಆಗಿದ್ದದ್ದೇ ಬೇರೆ...

ಕನ್ನಡ ಮಿಸ್ ತಂದೆ ಬಳಿ ಮಾತನಾಡುತ್ತಿದ್ದರು. “ಏನು ನಿಮ್ಮ ಮಗನಿಗೆ ಕನ್ನಡ ಬಿಟ್ಟು ಉಳಿದ್ರಲ್ಲಿ ಎಲ್ಲಾ ಕಡಿಮೆ ಮಾರ್ಕ್ಸ್ ಇದೆಯಲ್ಲ” ಎಂದು ಒಂದೊಂದೇ ತಗಾದೆ ತೆಗೆಯುತ್ತಾ ಹೋದರು. ಮೀಟಿಂಗ್‌ನಲ್ಲಿ ನನ್ನ ಮಾರ್ಕ್‌ಗಳ ಬಗ್ಗೆ ಮಾತನಾಡುವ ಬದಲು ಈ ಮಿಸ್ ನಾನು ಕ್ಲಾಸ್‌ನಲ್ಲಿ ಏನೆಲ್ಲಾ ಪೀಕಲಾಟಗಳನ್ನು ಮಾಡುತ್ತಿದ್ದೆ ಎಂದು ಹೇಳಲಾರಂಭಿಸಿದರು. ಪಾಪ... ನನ್ನ ತಂದೆಗೆ ಏನು ಹೇಳುವುದೆಂದು ತಿಳಿಯದೆ ನನ್ನನ್ನು ಆಗಾಗ ನೋಡುತ್ತಲೇ ಇದ್ದರು. ತಪ್ಪಿತಸ್ಥನ ಮೋರೆ ಹಾಕಿ ನಾನು ಅವರನ್ನು ನೋಡುತ್ತಿದ್ದೆ.
ಅವರಿಗೆ ಏನು ಹೇಳಬೇಕೆಂದು ತೋಚುತ್ತಿರಲಿಲ್ಲ. ಅದಕ್ಕಿಂತ ಮೊದಲು ನನ್ನಲ್ಲಿ ಸಮರ್ಥನೆಗೆ ಉತ್ತರವೂ ಇಲ್ಲ. ಸರಿ, ಮೀಟಿಂಗ್ ಮುಗಿಯಿತು. ಈ ಸೋಷಿಯಲ್ ಮಿಸ್ ಮಾತ್ರ ಬೇರೆ ತರಗತಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರಿಂದ ಆದಷ್ಟು ಬೇಗ ತಂದೆಯನ್ನು ಮನೆಗೆ ಕಳುಹಿಸಿಬಿಡಬೇಕು, ಇಲ್ಲಾಂದ್ರೆ... ನನ್ನದು ಮಾತ್ರವಲ್ಲ ತಂದೆಯನ್ನೂ ತಲೆತಗ್ಗಿಸುವಂತೆ ಮಾಡುತ್ತಾರೆ ಎಂದು ತಿಳಿದಿತ್ತು.

ಮೀಟಿಂಗ್ ಹಾಲ್‌ನಿಂದ ನಾವು ಹೊರಗೆ ಕಾಲಿಡುವುದು...ಎದುರಿನಿಂದ ಸೋಷಿಯಲ್ ಮಿಸ್ ಆಗಮಿಸುವುದು...ಹೋ...! ಅಲ್ಲೇ ಕೈಯನ್ನು ತೊಡೆಗೆ ಬಾರಿಸಿದೆ... ಒಂದು ನಿಮಿಷ ಮೊದಲಾಗಿದ್ದರೆ ಇವರ ಕಣ್ಣಿಂದ ತಪ್ಪಿಸಬಹುದಿತ್ತಲ್ಲ ಎಂದು ಯೋಚಿಸುತ್ತಿದ್ದಂತೆ....“ಓಹ್ ಯುವರ್ ಡ್ಯಾಡ್ ಹ್ಯಾಸ್ ಕಮ್...ವನ್ ಮಿನಿಟ್ ಸರ್ ಐ ವಿಲ್ ಕಮ್ ಟು ಯು ಎಂದು ತಮ್ಮ ಪುಸ್ತಕಗಳನ್ನು ಇಟ್ಟವರೇ... ತಂದೆಯನ್ನು ಎದುರಿಗಿದ್ದ ಕುರ್ಚಿಯಲ್ಲಿ ಕೂರಿಸಿದರು. ನಾನು ಏನೋ ಮಹಾನ್ ತಪ್ಪು ಮಾಡಿದ್ದವನಂತೆ ನಿಧಾನವಾಗಿ ಎರಡೂ ಕಣ್ಣುಗಳನ್ನು ಮಿಟುಕಿಸುತ್ತಾ ಮಿಸ್ಸನ್ನೇ ನೋಡುತ್ತಿದ್ದೆ.
ಶುರುವಾಯಿತು ನೋಡಿ...ಬುಲೆಟ್ಸ್..ಬಾಂಬು...ಎಲ್ಲವೂ ನನ್ನನ್ನು ಅಟ್ಯಾಕ್ ಮಾಡುತ್ತಿದ್ದರೆ...ಅಪ್ಪ ಮಾತ್ರ ನನ್ನ ಮಗ ಹೀಗೆಲ್ಲಾ ಮಾಡಿದ್ದಾನಾ ಎಂದು ಸಪ್ಪೆ ಮೋರೆ ಹಾಕಿ ಏನನ್ನೂ ಹೇಳದೆ ಎಲ್ಲವನ್ನು ಕೇಳುತ್ತಿದ್ದರು.

“ನೋಡಿ ನಿಮ್ಮ ಮಗನಿಗೆ ಸೋಷಿಯಲ್‌ನಲ್ಲಿ ಮಾರ್ಕ್ ನೋಡಿ. 25ರಲ್ಲಿ 11 ಮಾರ್ಕು. ಎಲ್ಲಿಗೆ ಸಾಕು? ನಾಡ್ದು ಪ್ರಿಪರೇಟರಿ ಬೇರೆ ಇದೆ... ಹೀಗೆ ಓದಿದ್ರೆ ಕಾಲೇಜಿಗೆ ಹೋಗುವುದಾದ್ರು ಹೇಗೆ..? ಯಾವಾಗ ನೋಡಿದ್ರೂ ಕ್ಲಾಸಲ್ಲಿ ಮಾತಾಡ್ತಲೇ ಇರ್ತಾನೇ...ನಂಗಂತೂ ಹೇಳಿ ಹೇಳಿ ಸಾಕಾಗಿದೆ... ನಮ್ಮ ಮಾತಿಗೆ ಬೆಲೆಯೇ ಕೊಡುದಿಲ್ಲ. ಪೋಲಿಗಳ ಹಾಗೆ ಉಪದ್ರ ತಡಿಲಿಕ್ಕಾಗುದಿಲ್ಲ” ಎಂದು ತಂದೆಯ ಮುಖದತ್ತ ಬಾಂಬನ್ನು ಎಸೆಯುತ್ತಲೇ ಇದ್ದರು. ನಿಜವಾಗಿಯೂ ತಂದೆಗೆ ಅಂದು ತಲೆತಗ್ಗಿಸಿದ್ದರು. ಒಮ್ಮೆ ನನ್ನ ಮುಖ, ಮತ್ತೊಮ್ಮೆ ತಂದೆಯವರ ಮುಖ ನೋಡುತ್ತಾ ಮಿಸ್ ಕಂಪ್ಲೇಂಟುಗಳ ಸುರಿಮಳೆಯನ್ನೇ ಸುರಿಸಿದ್ದರು. ನನ್ನ ತಂದೆಯ ಸಪ್ಪೆ ಮುಖ.. ಎಲ್ಲರ ಎದುರು ನಿಲ್ಲಿಸಿ ಆ ಬೈಗುಳಗಳಿಂದ ಬೇಸತ್ತಿದ್ದ ನನ್ನ ಮನಸ್ಸು ನಿಜಕ್ಕೂ ಕಡಿದುಹೋದ ಬಾಳೇ ಗಿಡದಂತಾಗಿತ್ತು.. ಕಣ್ಣಲ್ಲಿ ನೀರು ಹರಿಯತೊಡಗಿತು. ಯಾವತ್ತು ಮಿಸ್‌ಗಳು ನನಗೆ ಬೈದಿದ್ದರೂ ನಾನು ಎಂದಿಗೂ ಅತ್ತಿರಲಿಲ್ಲ. ಆದರೆ ಅಪ್ಪನ ಮುಂದೆ...ಅವರ ಮುಖ...ನನ್ನನ್ನು ಗೊಳೋ ಎಂದು ಅಳುವಂತೆ ಮಾಡಿತ್ತು...ಹೊಟ್ಟೆಯೊಳಗಿಂದ ನೇರವಾಗಿ ಬಾಯಿಗೆ ಬರುತ್ತಿದ್ದ ಆ ಅಳುವನ್ನು ನಾನು ಇಂದಿಗೂ ಮರೆತಿಲ್ಲ... ಆ ದಿನ ನಾನು ಒಂದು ಕಡೆ ಕಣ್ಣೀರ ಧಾರೆ ಹರಿಸುತ್ತಿದ್ದರೆ, ಇನ್ನೊಂದು ಬದಿ ಮಿತ್ರ ಮಿಥುನ್ ಕುಮಾರ್ ನೇತ್ರಾವತಿ ನದಿಯನ್ನೇ ಹರಿಸಿದ್ದ. ಆದರೆ ಮಿಸ್ ಮಾತ್ರ ಬೇರೆಯವರಾಗಿದ್ದರು...

ನನಗೆ ಏನೂ ಹೇಳದೆ ಮನೆಗೆ ಹೋಗಿದ್ದ ತಂದೆ ನನಗೆ ಮನೆಯಲ್ಲೂ ಬೈಯಲೂ ಇಲ್ಲ... ಒಂದೆರಡು ಬುದ್ಧಿ ಮಾತನ್ನು ಹೇಳಿದ್ದು ಬಿಟ್ಟರೆ ಮತ್ತೇನನ್ನೂ ಅವರು ಹೇಳಿರಲಿಲ್ಲ... ಆ ದಿನ ನನ್ನನ್ನು ಸೋಷಿಯಲ್ ಮಿಸ್ಸೇ ಸಮಾಧಾನ ಪಡಿಸಿದ್ದರು. ಏಕೆಂದರೆ ಅವರಿಗೆ ನನ್ನ ಮೇಲೆ ಎಷ್ಟೇ ಕೋಪವಿದ್ದರೂ, ಅಷ್ಟೇ ಪ್ರಮಾಣದ ಪ್ರೀತಿಯಿದ್ದಕ್ಕೂ ಅದು ಸಾಕ್ಷಿಯಾಗಿತ್ತು. ಸೋಜಿಗವೆಂದರೆ ಪಿಯುಸಿ ಅಧ್ಯಯನಕ್ಕೆ ನಾನು ಉಜಿರೆ ಕಾಲೇಜಿಗೆ ಸೇರಿದಾಗ ನನ್ನ ಪೊಲಿಟಿಕಲ್ ಸೈನ್ಸ್ ಲೆಕ್ಚರರ್ ಆಗಿ ಇವರೇ ಬಂದಿದ್ದರು... ಆದರೆ ಇಲ್ಲಿದ್ದ ವ್ಯತ್ಯಾಸವೆಂದರೆ ಹೈಸ್ಕೂಲಿನ ದಿನಗಳನ್ನು ಇಲ್ಲಿ ಎಂದಿಗೂ ನಾನು ಪುನರಾವರ್ತಿಸಿರಲಿಲ್ಲ!
ಸೋಷಿಯಲ್ ಮಿಸ್ ಇಂದಿಗೂ ನನ್ನ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದಾರೆ. ಅವರಿಗೀಗ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.