ಕರುಣಾಜನಕ ಕಥೆ ಹೇಳುವ
ಬಾಸುಂಡೆ ಗುರುತು...
ಬಾಸುಂಡೆ ಗುರುತು...
.
ಕೆಲಸ ದೊರೆಯಿತು ಎಂದು ನಗುಮುಖದಿಂದ ಅರಬ್ ದೇಶಗಳಿಗೆ ತೆರಳುವವರಲ್ಲಿ ಎಷ್ಟು ಮಂದಿ ನಗುಮುಖದಿಂದಲೇ ದುಡಿಯುತ್ತಿದ್ದಾರೆ? ಮೂಲಗಳ ಪ್ರಕಾರ ಅಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಯಾತನೆಯೇ ದಿನನಿತ್ಯದ ಸಂಗಾತಿ!

ಇದು ಯಾವುದೋ ಒಂದು ಸಿನೆಮಾದ ದೃಶ್ಯ ಎಂದುಕೊಂಡಿರಾ? ಖಂಡಿತ ಅಲ್ಲ. ಇದೊಂದು ಜೀವಂತ 'ಚಿತ್ರಕಥೆ'. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬ ಊರಿನ ಸುಮತಿ ಕ್ರಿಸ್ತಾಬೆಲ್ ಕೋಟ್ಯಾನ್ ಅವರ ಜೀವನದ ದುರಂತ ಕಥೆ. ಅಬುಧಾಬಿಯಲ್ಲಿ ನೆಲೆಸಿರುವ ಉಡುಪಿ ಮೂಲದ ದೀಪಕ್ ಲೂಯಿಸ್ ಹಾಗೂ ಸರಿತಾ ಲೂಯಿಸ್ರ ಮನೆಯಲ್ಲಿ ಕೆಲಸದ ಆಳಾಗಿ ಸೇರಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸಿ ಜೀವನದ ಕರಾಳ ದಿನಗಳನ್ನು ಕಂಡ ಸುಮತಿ ಕೋಟ್ಯಾನ್ ಅವರ ನೊಂದ ಜೀವನದ ವಾಸ್ತವ ಸತ್ಯ.
ಬಹುಶಃ ಸುಮತಿ ಕೋಟ್ಯಾನ್ ಅವರ ಕಥೆ ಕರಾವಳಿಯಲ್ಲಿ ಈಗ ಜನಜನಿತ. ಆದರೆ ಆ ಕಥೆಯ ಮುಂದಿನ ಭಾಗ ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ. ಬನ್ನಿ, ಭೂತದ ಮೇಲೊಂದು ಕಿರು ನೋಟ ಹರಿಸೋಣ. ಸುಮತಿ ದಂಪತಿಗೆ ಒಬ್ಬ ಮಗ. ಆತನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬುದೇ ಅವರ ಮಹದುದ್ದೇಶ. ಆದರೆ ಅತಿಯಾದ ಬಡತನ ಹಾಗೂ ದಾರಿದ್ರ್ಯ ಸುಮತಿ ಅವರನ್ನು ದುಡಿಯಲು ತೆರಳುವಂತೆ ಪ್ರೇರೇಪಿಸಿತು. ಸುಮತಿ ಹೇಳುವ ಪ್ರಕಾರ ಉಡುಪಿ ಮೂಲದ ಲೂಯಿಸ್ ದಂಪತಿಗಳಿಗೆ ಮೊದಲಿನಿಂದಲೇ ಆಕೆಯ ಪರಿಚಯವಿತ್ತು. ಆದ ಕಾರಣ ದುಬೈನಲ್ಲಿ ನೆಲೆಸಿರುವ ಲೂಯಿಸ್ ದಂಪತಿಗಳು ಸುಮತಿ ಅವರನ್ನು ತಮ್ಮ ಮನೆಕೆಲಸದಾಕೆಯಾಗಿ ನೇಮಿಸಿದರು.
ಆದರೆ ಮುಂದೆ ನಡೆದದ್ದೇ ಬೇರೆ. ಸುಮತಿಯನ್ನು ಪ್ರಾಣಿಗಿಂತ ಕಡೆಯಾಗಿ ಕಂಡು ಚಿತ್ರಹಿಂಸೆ ನೀಡಲು ಶುರುಮಾಡಿದ ಲೂಯಿಸ್ ದಂಪತಿಗಳು ಆಕೆ ಏನೇ ಮಾಡಿದರೂ ಅದರಲ್ಲಿ ಕೊಂಕು ಹುಡುಕಲಾರಂಭಿಸಿದರು. ಬಾಸುಂಡೆ ಬರುವಂತೆ ಹೊಡೆದು ಇಸ್ತ್ರಿ ಪೆಟ್ಟಿಗೆಯನ್ನು ಬೆನ್ನಿನ ಮೇಲಿಟ್ಟು ಕ್ರೂರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಚಿತ್ರಹಿಂಸೆಯ ಪರಮಾವಧಿಗೆ ಸುಮತಿ ಅವರ ಬೆನ್ನೇ ಸಾಕ್ಷಿ. ಆ ಸುಟ್ಟ ಗಾಯಗಳು, ಸೋತು ಸುಣ್ಣವಾದ ಮುಖ, ಶಿಥಿಲಗೊಂಡ ದೇಹವೇ ಆಕೆಯ ದುರಂತ ಕಥೆಯ ಒಂದೊಂದು ಸಾಲನ್ನೂ ಹೇಳುತ್ತವೆ.
ದುಬೈಗೆ ಹೋಗುವ ಮುನ್ನ ಸುಮತಿಗೆ ತಿಂಗಳಿಗೆ ೮,೦೦೦ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಲಾಗಿತ್ತಂತೆ. ಆದರೆ, ನಂತರ ದೊರಕಿದ್ದು ಬೇಕಾದಷ್ಟು ಹಿಂಸೆ ಹಾಗೂ ತಿಂಗಳಿಗೆ ರೂ. ೬,೦೦೦ ಸಂಬಳ ಮಾತ್ರ. ಸುಮತಿ ಹೇಳುವ ಪ್ರಕಾರ ಲೂಯಿಸ್ ದಂಪತಿ ಈ ವಿಕೃತ 'ಸಂಪ್ರದಾಯ'ವನ್ನು ಹಲವಾರು ತಿಂಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಸುಮತಿ ಕೋಟ್ಯಾನ್ ಅವರ ಪ್ರತಿ ಹೇಳಿಕೆಯನ್ನೂ ಅಲ್ಲಗಳೆಯುವ ಲೂಯಿಸ್ ದಂಪತಿ 'ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ' ಎನ್ನುತ್ತಾರೆ. ಸುಮತಿ ಅವರ ಮಾತುಗಳನ್ನೆಲ್ಲಾ 'ಸುಳ್ಳು' ಎಂದು ಹೇಳುವ ಲೂಯಿಸ್ ದಂಪತಿ ಪ್ರಕರಣಕ್ಕೆ ಅಂದೇ ತಿರುವು ನೀಡಿದ್ದರು. ಒಂದು ವೇಳೆ ಸುಮತಿ ಅವರು ಹೇಳಿರುವುದೆಲ್ಲಾ ಸುಳ್ಳೇ ಆಗಿದ್ದರೆ ಆಕೆ ಈ ನರಕಯಾತನೆಯನ್ನು ಯಾರಿಂದ ಯಾಕಾಗಿ ಅನುಭವಿಸಿದಳು ಎಂಬ ಪ್ರಶ್ನೆ ಮೂಡುವುದು ಸಹಜ.
ಊರಿನ ಕೆಲವರು, 'ಮೃದು ಸ್ವಭಾವದ ಸುಮತಿಗೆ ಊರಿನಲ್ಲಿ ಯಾರೊಂದಿಗೂ ವೈರತ್ವವಿರಲಿಲ್ಲ. ಆಕೆಯೂ ಯಾರೊಂದಿಗೂ ಕೆಟ್ಟ ರೀತಿಯಲ್ಲಿ ವರ್ತಿಸಿರಲಿಲ್ಲ. ಇನ್ನು ಅಬುಧಾಬಿಗೆ ಹೋಗಿ ಬೇರೆಯವರೊಂದಿಗೆ ವೈರತ್ವ ಸಾಧಿಸುವುದೆಂದರೆ ನಂಬಲಸಾಧ್ಯ. ದುಡ್ಡಿನ ಮದವಿರುವ ಲೂಯಿಸ್ ದಂಪತಿಗಳೇ ಏನೋ ಹುನ್ನಾರ ನಡೆಸಿದ್ದಾರೆ' ಎಂಬುದಾಗಿ ಹೇಳುತ್ತಾರೆ.

ಸತತವಾಗಿ ಆರು ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸುಮತಿ ದಂಪತಿಗೆ ಈ ಬೆಳವಣಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ. ಈಗಾಗಲೇ ಸಾಕಷ್ಟು ನೊಂದಿರುವ ಈ ಬಡ ಜೀವಗಳ ಭವಿಷ್ಯವೇನು?
ಸದ್ಯ ಕಾರ್ಕಳದಲ್ಲಿ ನೆಲೆಸಿರುವ ಸುಮತಿ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಬೆನ್ನಿನಲ್ಲಿರುವ ಸುಟ್ಟಗಾಯದ ನೋವುಗಳು ಇನ್ನೂ ಮಾಸಿಲ್ಲ. ಮಲ್ಲಿಗೆ ಕಟ್ಟಿ ಅದರಿಂದ ಬರುವ ಕೂಲಿಯೇ ಅವರ ಜೀವನಕ್ಕೆ
ಆಧಾರ. ಗಂಡ ಜೇಸುದಾಸ್ ಕೋಟ್ಯಾನ್ ಮಲ್ಲಿಗೆ ಕಟ್ಟುವುದರೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದಾರೆ. ಅದಲ್ಲದೇ ಮನೆಯಲ್ಲಿ ಸೂಕ್ತವಾದ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಇನ್ನು ಕೆಲವು ಅಗತ್ಯ ಸಂದರ್ಭಗಳಲ್ಲಿ ನರೆಮನೆಯವರು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.
ಈ ನಡುವೆ ಸುಮತಿ ಅವರಿಗೆ ನ್ಯಾಯದೊರಕಿಸಿ ಕೊಡಲು ಮುಂಬೈನಲ್ಲಿರುವ ಫೆಡರೇಶನ್ ಆಫ್ ಮಹಾರಾಷ್ಟ್ರಾಸ್ ಕೆನರಾ ಕೆಥೋಲಿಕ್ ಅಸೋಸಿಯೇಷನ್ನ ಸಂಚಾಲಕರಾಗಿರುವ ರೋನ್ಸ್ ಬಂಟ್ವಾಳ್, ಜಾಗೃತಾ ಮತ್ತು ಭ್ರಷ್ಟಾಚಾರ ಪತ್ತೆ, ನಿರ್ಮೂಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಅಪರಾಧ ಪ್ರತಿಬಂಧಕ ಸಂಸ್ಥೆಯ ಅಂತರ್ ರಾಷ್ಟ್ರೀಯ ಕಾರ್ಯದರ್ಶಿ ರೋಲ್ಯಾಂಡ್ ಟಿ. ಸ್ಟಾಲಿನ್ ಸೇರಿದಂತೆ ಹಲವರು ಪ್ರಯತ್ನ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರೋನ್ಸ್ ಬಂಟ್ವಾಳ್, "ಸುಮತಿ ಅವರು ಭಾರತಕ್ಕೆ ಆಗಮಿಸಿ ಈಗಾಗಲೇ ಆರು ತಿಂಗಳು ಕಳೆದಿದೆ. ಆದರೆ ಪ್ರಕರಣ ಯಾವುದೇ ಬದಲಾವಣೆ ಕಂಡಿಲ್ಲ. ಈ ನಿಟ್ಟಿನಲ್ಲಿ ಸುಮತಿ ಅವರ ಪರ ಹೋರಾಡಲು ಇತರ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಆದ್ದರಿಂದ ಕಾರ್ಕಳದಲ್ಲಿ ನಾವು ಸುಮತಿ ಅವರೊಂದಿಗೆ ಸದ್ಯದಲ್ಲೇ ಪ್ರತಿಭಟನೆಯನ್ನು ನಡೆಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಏನೇ ಇರಲಿ, ನ್ಯಾಯದೇವತೆ ಇನ್ನೂ ಇವರಿಂದ ಬಹು ದೂರ ನಿಂತು ಆಟವಾಡಿಸುತ್ತಲೇ ಇದ್ದಾಳೆ.
ಅರಬ್ ದೇಶಗಳಲ್ಲಿ ಇದು ಮಾಮೂಲಿ ಕಥೆ!

No comments:
Post a Comment